ಅಧಿಕಾರಿಗಳ ವಿರುದ್ಧ ಮುನಿಸ್ವಾಮಿ ಗರಂ

ಕೋಲಾರ, ಜ. 08: “ಯಾರದ್ದೋ ಗುಲಾಮರಾಗಿ ಇರಬೇಡಿ, ಹೀರೋ ತರ ರಿಟೈರ್ ಆಗಿ ಮನೆಗೆ ಹೋಗಿ. ವಿಲನ್ ಆಗಬೇಡಿ” ಎಂದು ಸಹಕಾರ ಇಲಾಖೆ ಅಧಿಕಾರಿಗಳ ವಿರುದ್ಧ ಕೋಲಾರ  ಸಂಸದ ಎಸ್. ಮುನಿಸ್ವಾಮಿ ಹರಿಹಾಯ್ದರು. ನಿಮಗೆ ಇಷ್ಟ ಬಂದವರಿಗೆ ಮಾತ್ರ ಸಾಲ ಕೊಡುತ್ತೀರಿ. ಸಹಕಾರ ಸಂಘದ ಸದಸ್ಯರ ಮತಗಳನ್ನು ಅನೂರ್ಜಿತಗೊಳಿಸಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೋಲಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕೆಡಿಪಿ ಸಭೆ ನಡೆದ ವೇಳೆ ಸಂಸದ ಮುನಿಸ್ವಾಮಿ, ಜಿಲ್ಲಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಆಗ ಸಹಕಾರ ಇಲಾಖೆ ಅಧಿಕಾರಿಗಳ ವಿರುದ್ಧ ಸಂಸದರು ಗರಂ ಆಗಿ ಮಾತಾಡಿದರು.

“ನಿಮಗೆ ಬೇಕಾದವರು ಹೇಳಿದ್ದಾರೆಂದು ಸದಸ್ಯರ ಮತಗಳೇ ಇಲ್ಲದಂತೆ ಮಾಡಿದ್ದೀರಾ?. ಸಹಕಾರ ಸಂಘದ ಹಸ್ತಲಾಘವ ಚಿಹ್ನೆ ಕೋಲಾರದಲ್ಲಿ ಬೇರೊಂದು ರೀತಿಯಲ್ಲಿದೆ. ಯಾರದ್ದೋ ಮಾತು ಕೇಳಿದರೆ ಕಂಬಿ ಎಣಿಸುತ್ತೀರಾ ಹುಷಾರ್” ಎಂದು ಅಧಿಕಾರಿಗಳ ವಿರುದ್ಧ ವಾಗ್ದಾಳಿ ನಡೆಸಿದರು.

ಸಹಕಾರ ಇಲಾಖೆಯ ಹಿರಿಯ ಅಧಿಕಾರಿ ನೀಲಪ್ಪನವರ್‌ಗೆ ಸಂಸದ ಮುನಿಸ್ವಾಮಿ ಎಚ್ಚರಿಕೆಯನ್ನು ನೀಡಿದರು. ಎಂಎಲ್‌ಸಿ ಗೋವಿಂದರಾಜು, ಜಿಲ್ಲಾ ಪಂಚಾಯತಿ  ಅಧ್ಯಕ್ಷ್ಯ ಸಿ. ಎಸ್. ವೆಂಕಟೇಶ್ ಸಹ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

“ಕೋಲಾರದಲ್ಲಿ ಡಿ ಸಿ ಸಿ ಬ್ಯಾಂಕ್ ಸಾಲ ವಿತರಣೆ ಕಾರ್ಯಕ್ರಮಕ್ಕೆ ಯಾರನ್ನೂ ಕರೆಯದೇ ರಾಜಕೀಯ ಮಾಡುತ್ತಿದ್ದೀರಿ” ಎಂದು ವಿಧಾನ ಪರಿಷತ್ ಸದಸ್ಯರು, ಸಂಸದರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ. ಸಿ. ಮಾಧುಸ್ವಾಮಿ ತುಮಕೂರಿನಲ್ಲಿ ಗುರುವಾರ ಕೆಡಿಪಿ ಸಭೆ ವೇಳೆ ಅಧಿಕಾರಿಗಳನ್ನು ತರಾಟೆಗೆ ತೆಗದುಕೊಂಡಿದ್ದರು.ಇಂದು ಮುನಿಸ್ವಾಮಿಯವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Exit mobile version