ಮೈಸೂರು, ಮಾ. 19: ಎಲ್ಲಾ ಪಕ್ಷದಲ್ಲೂ ಮಹಾನಾಯಕರಿದ್ದಾರೆ. ಡಿ.ಕೆ.ಶಿವಕುಮಾರ್ ಅವರಿಗೆ ಹುಳುಕ್ಯಾಕೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಪ್ರಶ್ನಿಸಿದರು.
ಸಿ.ಡಿ ಪ್ರಕರಣದಲ್ಲಿ ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಡಿಕೆಶಿ ಆರೋಪಕ್ಕೆ ಸಂಬಂಧಿಸಿದಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸೋಮಶೇಖರ್, ಮಹಾನಾಯಕರು ಅಂದರೆ ಡಿ.ಕೆ.ಶಿವಕುಮಾರ್ ಅವರಿಗ್ಯಾಕೆ ಹುಳುಕು. ಎಲ್ಲಾ ಪಕ್ಷಗಳಲ್ಲೂ ಮಹಾನಾಯಕರು ಇದ್ದಾರೆ. ಸಣ್ಣಪುಟ್ಟವರು ಯಾರೂ ಇಲ್ಲ. ಸಿ.ಡಿ ಪ್ರಕರಣದ ರೂವಾರಿ, ಮಹಾನಾಯಕ ಯಾರು ಎಂದು ಸದ್ಯದಲ್ಲೇ ಎಸ್ಐಟಿ ತನಿಖೆಯಿಂದ ಗೊತ್ತಾಗುತ್ತದೆ ಎಂದು ತಿಳಿಸಿದರು.
ಸದ್ಯಕ್ಕೆ ಎಸ್ಐಟಿ ಅವರು ತನಿಖೆಯನ್ನು ಬಹಿರಂಗಪಡಿಸುತ್ತಿಲ್ಲ. ಸಂಪೂರ್ಣ ತನಿಖೆ ನಂತರ ಸಾರ್ವಜನಿಕವಾಗಿ ಎಲ್ಲಾ ಮಾಹಿತಿಯನ್ನು ಎಸ್ಐಟಿ ಬಹಿರಂಗಪಡಿಸಲಿದೆ. ಈ ಮನೆಹಾಳು ಕೆಲಸ ಮಾಡಿರುವವರು ಯಾರು, ಮನೆ-ಮನಸ್ಸನ್ನು ಮುರಿದಿರುವವರು ಯಾರು, ವೈಯಕ್ತಿಕ ವಿಷಯ ಎಲ್ಲೆಡೆ ಹಬ್ಬುವಂತೆ ಮಾಡಿದವರು ಯಾರು ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಇಡೀ ರಾಜ್ಯಕ್ಕಿದೆ ಎಂದರು.