ನ್ಯಾ. ಮಲ್ಲಿಕಾರ್ಜುನ ಗೌಡರಿಗೆ ಕಠಿಣ ಶಿಕ್ಷೆಯಾಗಬೇಕು ; ಬೆಂಗಳೂರಿನಲ್ಲಿ ಬೃಹತ್ ಹೋರಾಟ ನಡೆಸಿದ ದಲಿತ ಸಂಘರ್ಷ ಸಮಿತಿ!

“ಈ ದೇಶದಲ್ಲಿ ಸಂವಿಧಾನ ವಿರೋಧಿ ಚಟುವಟಿಕೆಗಳು ಹಾಗೂ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಅವಮಾನಿಸುವ ಕೃತ್ಯಗಳು ಮೊದಲಿನಿಂದಲೂ ನಡೆಯುತ್ತಲೇ ಇವೆ. ಪ್ರಜಾಪ್ರಭುತ್ವ ದೇಶದ ರಾಷ್ಟ್ರೀಯ ಗ್ರಂಥ ಸಂವಿಧಾನವನ್ನೇ ಸುಟ್ಟು, ತಮ್ಮ ನೀಚತನ ತೋರಿದ ಶಕ್ತಿಗಳು ಅಂಬೇಡ್ಕರ್ ಅವರನ್ನು ಕಂಡರೆ ಒಳಗೊಳಗೆ ಉರಿದುಕೊಳ್ಳುತ್ತಾರೆ. ಜಾತ್ಯತೀತ ರಾಷ್ಟ್ರ ಭಾರತದಲ್ಲಿ ಅಸ್ಪೃಶ್ಯತೆ ಹಾಗೂ ಜಾತಿಯತೆ ಎಂಬ ಮನೋರೋಗ ಇನ್ನೂ ಆಳವಾಗಿ ಬೇರೂರಿದ ಕಾರಣವೇ ಇಂಥ ದುರ್ಘಟನೆಗಳು ನಡೆಯಲು ಸಾಧ್ಯವಾಗಿದೆ ಎಂಬುದು ನಮ್ಮೆಲ್ಲರಿಗೂ ತಿಳಿದಿರುವ ಸಂಗತಿಯೇ”!

ಇಂಥದ್ದೇ ಮತ್ತೊಂದು ಘಟನೆ ನಮ್ಮ ರಾಜ್ಯದಲ್ಲಿ ಜನವರಿ 26 ರಂದು ನಡೆಯಿತು. ಧ್ವಜಾರೋಹಣ ಸಂದರ್ಭದಲ್ಲಿ ಡಾ.ಅಂಬೇಡ್ಕರ್ ಅವರ ಫೋಟೋ ತೆಗೆಯುವಂತೆ ಪಟ್ಟು ಹಿಡಿದು ಸಂವಿಧಾನ ಹಾಗೂ ಅಂಬೇಡ್ಕರ್ ಅವರನ್ನು ಅವಮಾನಿಸಿದ್ದು ಒಬ್ಬ ಸಾಮಾನ್ಯ ವ್ಯಕ್ತಿಯಲ್ಲ, ಒಬ್ಬ ನ್ಯಾಯಧೀಶ! ಈ ದೇಶದಲ್ಲಿ ಇದಕ್ಕಿಂತ ದೊಡ್ಡ ಅವಮಾನ ಮತ್ತೊಂದಿದೆಯಾ?

ಡಾ.ಅಂಬೇಡ್ಕರ್ ಅವರನ್ನು ಅವಮಾನಿಸಿದ ನ್ಯಾಯಾಧೀಶನ ವಿರುದ್ಧ ಇಡೀ ರಾಜ್ಯಾದ್ಯಂತ ಹೋರಾಟಗಳು ನಡೆದವು, ಈಗಲೂ ನಡೆಯುತ್ತಿವೆ. ಹಲವು ಜಿಲ್ಲಾ ಕೇಂದ್ರಗಳು ಬಂದ್ ಮಾಡಿ ಅಕ್ರೋಶ ವ್ಯಕ್ತಪಡಿಸಿದರೂ ಕೂಡ ಸರ್ಕಾರ ಮಾತ್ರ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿಲ್ಲ. ಯಾವುದೇ ಕಾನೂನು ಕ್ರಮ ಕೈಗೊಳ್ಳಲಿಲ್ಲ. ಬದಲಿಗೆ ಆತನಿಗೆ ಬೆಚ್ಚನೆ ಮನೆಯಲ್ಲಿ ಬಿಂದಾಸ್ ಆಗಿ ಇರುವಂತೆ ಸಕಲ ವ್ಯವಸ್ಥೆ ಕಲ್ಪಿಸಿ ಕಾಪಾಡಿಕೊಂಡಿದೆ. ಇತನ ವಿರುದ್ಧ ನಾವು ಮಾಡುತ್ತಿರುವ ಹೋರಾಟದ ಮುನ್ಸೂಚನೆಯ ಕಾರಣದಿಂದಲೇ ಏನೋ, ನಿನ್ನೆ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರಿಗೆ ರಾಯಚೂರಿನಿಂದ ವರ್ಗಾವಣೆ ಮಾಡಿ ಸರ್ಕಾರ ಕೈತೊಳೆದುಕೊಂಡಿದೆ.

ಆದರೆ ಹೋರಾಟಗಾರರ ಕಿಚ್ಚು ಅಷ್ಟಕ್ಕೆ ನಿಂತಿಲ್ಲ. ರಾಯಚೂರಿನ ಮಲ್ಲಿಕಾರ್ಜುನ ಗೌಡರ ಮೇಲೆ ಕಾನೂನಾತ್ಮಕ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ರಾಜಧಾನಿ ಬೆಂಗಳೂರಿನಲ್ಲಿಂದು ಕರ್ನಾಟಕದ ಎಲ್ಲಾ ಸಂವಿಧಾನಪರ ಸಂಘ- ಸೇನೆ, ವೇದಿಕೆ, ಸಮಿತಿ-ಸಂಘಟನೆ-ಒಕ್ಕೂಟಗಳೆಲ್ಲಾ ಸೇರಿ ಒಂದೇ ಮಹಾ ಒಕ್ಕೂಟದಡಿ ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟದಿಂದ ಬೃಹತ್ ಮೆರವಣಿಗೆ ಮತ್ತು ಸಮಾವೇಶವನ್ನು ಹಮ್ಮಿಕೊಂಡಿದ್ದರು.

ಬೆಂಗಳೂರಿನ ರೈಲು ನಿಲ್ದಾಣದಿಂದ ವಿಧಾನಸೌಧ, ಬಾಬಾಸಾಹೇಬರ ಪ್ರತಿಮೆಯವರೆಗೂ ನಡೆದ ಹೋರಾಟದ ನಡಿಗೆಯಲ್ಲಿ ವಿಧಾನ ಸೌಧ, ಹೈಕೋರ್ಟ್ ಚಲೋ ಎಂದು ಘೋಷಣೆಗಳು ಕೇಳಬಂತು. ಕ್ರಾಂತಿಯ ಹಾಡು, ಟಮಟೆ, ಹಲಿಗೆ, ಕ್ರಾಂತಿ ಗೀತೆ ಸೇರಿದಂತೆ ಜೈ ಭೀಮ್ ಘೋಷಣೆಗಳು ಅಕ್ಷರಶಃ ಬೆಂಗಳೂರಿನಲ್ಲಿ ಇಂದು ಕೇಳಬೇಕು. ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ ಹೋರಾಟಗಾರರ ಕೈಯಲ್ಲಿ ಅಂಬೇಡ್ಕರ್ ಪೋಟೋ, ಕೊರಳಿಗೆ ನೀಲಿ ಶಾಲುಗಳು, ರಸ್ತೆಯನ್ನು ಜನಸಾಗರವಾಗಿ ಪರಿವರ್ತಿಸಿತು. ನಮ್ಮವರು ಮುನ್ನುಗ್ಗಿ ನಡೆದು ಅಂಬೇಡ್ಕರ್ ಅವರ ಶಕ್ತಿ ಏನು ಎಂಬುದನ್ನು ಪ್ರದೇರ್ಶಿಸಿದ್ದೇವೆ ಎಂದು ಹೇಳಿದರು.

ಈ ನೆಲದಲ್ಲಿ ಅನ್ಯಾಯ, ಅವಮಾನ, ಶೋಷಣೆ, ದಬ್ಬಾಳಿಕೆ ನಡೆದಾಗ ಇಂಥ ಪ್ರತಿರೋಧದ ಕಿಚ್ಚು ಹೊರಬರುವುದು ಸಹಜ. ಹಾಗೆಯೇ ಹರಿದುಬಂದ ಜನಸಾಗರದಿಂದ ಬೆಂಗಳೂರು ಸಂಪೂರ್ಣ ಮೊನ್ನೆ ನೀಲಿಮಯವಾಯಿತು. ನಿಮ್ಮ ಅವಮಾನ ಸಹಿಸಿಕೊಂಡು ಸುಮ್ಮನಿರಲು ನಮ್ಮಿಂದ ಅಸಾಧ್ಯ! ನ್ಯಾಯ ಸಿಗುವವರೆಗೂ ಜನಸಾಗರದ ಪ್ರತಿರೋಧ ಕೂಗನ್ನು ಸರ್ಕಾರಕ್ಕೆ ಮುಟ್ಟಿಸದೆ ಬಿಡುವುದಿಲ್ಲ ಎಂದು ಪ್ರತಿಭಟನೆಯ ಮುನ್ಸೂಚನೆಯನ್ನು ನೀಡಿದ್ದಾರೆ.

Source : ರೆಹಮಾನ್ ಖಾನ್

Exit mobile version