ಆ್ಯಂಬುಲೆನ್ಸ್ ವಾಹನಕ್ಕೆ ದಾರಿ ಬಿಡದೆ ಪುಂಡಾಟ: ಪೊಲೀಸರ ಅತಿಥಿಯಾದ ಕಾರ್ ಡ್ರೈವರ್

ಮಂಗಳೂರು, ಜು. 20: ಆ್ಯಂಬುಲೆನ್ಸ್​ಗೆ ದಾರಿ ಬಿಡದೆ ಪುಂಡಾಟ ಮೆರೆದ ಕಾರು ಚಾಲಕನಿಗೆ ಪೊಲೀಸರು ಠಾಣೆಯ ದಾರಿ ತೋರಿಸಿದ್ದಾರೆ.

ಜು.19ರ ಸೋಮವಾರ ಸಂಜೆ ದೇರಳಕಟ್ಟೆ ಕಣಚೂರು ಆಸ್ಪತ್ರೆಯಿಂದ ಮಂಗಳೂರು ಆಸ್ಪತ್ರೆಗೆ ತುರ್ತುಚಿಕಿತ್ಸೆಗಾಗಿ ರೋಗಿಯನ್ನು ಅಂಬುಲೆನ್ಸ್ ಮುಖಾಂತರ  ಸಾಗಿಸುವ ಸಂದರ್ಭ ರಸ್ತೆಯಲ್ಲಿ ದಾರಿ ಬಿಡದೆ ಅಮಾನವೀಯವಾಗಿ ವರ್ತಿಸಿದ್ದಾನೆ. ರಸ್ತೆಯಲ್ಲಿ ಇತರ ವಾಹನಗಳು ಬದಿಗೆ ಸರಿದು ಆ್ಯಂಬುಲೆನ್ಸ್​ ಗೆ ದಾರಿ ಮಾಡಿ ಕೊಡುತ್ತಿದ್ದರೂ, ಇರ್ಟಿಗಾ KA19 MJ 8924 ಕಾರಿನ ಚಾಲಕ ಅಡ್ಡಾದಿಡ್ದಿಯಾಗಿ ಚಲಿಸಿ, ಆ್ಯಂಬ್ಯುಲೆನ್ಸ್ ನ ಮುಂದೆ ಮತ್ತಷ್ಟು ವೇಗವಾಗಿ ಸಾಗಿದ್ದಾನೆ.

ಕಾರು ಚಾಲಕನ ಈ ಪುಂಡಾಟವನ್ನ ಆ್ಯಂಬ್ಯುಲೆನ್ಸ್ ನಲ್ಲಿದ್ದವರು ಚಿತ್ರಿಕರಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ನೆಟ್ಟಿಗರು ಕಾರು ಚಾಲಕನ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ಕಾರು ಚಾಲಕನ ಬೆನ್ನತ್ತಿದ ಪೊಲೀಸರು
ಮಂಗಳವಾರ, ಕಾರು ಚಾಲಕ ಉಳ್ಳಾಲ ಕುಂಪಲದ ಚರಣ್(31) ವಶಕ್ಕೆ ಪಡೆದು ಪೊಲೀಸ್ ಠಾಣೆಯ ದಾರಿ ತೋರಿಸಿದ್ದು ಪ್ರಕರಣ ದಾಖಲಿಸಿ ದಂಡ ವಿಧಿಸಿದ್ದಾರೆ. ಆರೋಪಿ ಕಿವಿಗೆ ಇಯರ್ ಫೋನ್ ಇಟ್ಟು ಕಾರು ಚಲಾವಣೆ ನಡೆಸುತ್ತಿದ್ದ ಎಂದು ಪೊಲೀಸ್ ತನಿಖೆ ವೇಳೆ ತಿಳಿಸಿದ್ದಾನೆ.

Exit mobile version