ಕೇಂದ್ರದ ಮಾಜಿ ಸಚಿವರ ಪತ್ನಿ ಹತ್ಯೆ; ಚಿನ್ನಾಭರಣ ದೋಚಿ ಪರಾರಿ

ದೆಹಲಿ, ಜು. 07: ದಿವಂಗತ ಮಾಜಿ ಕೇಂದ್ರ ಸಚಿವ ಕುಮಾರಮಂಗಲಮ್ ಅವರ ಪತ್ನಿಯ ಬರ್ಬರ ಕಿಟ್ಟಿ ಕುಮಾರಮಂಗಲಮ್ ಅವರನ್ನು ದುಷ್ಕರ್ಮಿಗಳು ಇಂದು ಬರ್ಬರವಾಗಿ ಕೊಲೆಗೈದಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ದಕ್ಷಿಣ ದೆಹಲಿಯ ವಸಂತ್ ಸಾಗರ್‌ನ ಅವರ ನಿವಾಸದಲ್ಲಿ 67 ವಯಸ್ಸಿನ ಕಿಟ್ಟಿ ಅವರ ಮೃತದೇಹ ಪತ್ತೆಯಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ದಿಂಬಿನಿಂದ ಉಸಿರುಗಟ್ಟಿಸಿ ಅವರನ್ನು ಕೊಲೆಗಯ್ಯಲಾಗಿದೆ ಎಂದು ಪೊಲೀಸ್ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ನಿನ್ನೆ ರಾತ್ರಿ ಸುಮಾರು 9 ಗಂಟೆ ಹೊತ್ತಿಗೆ ಅವರು ತಮ್ಮ ಮನೆಕೆಲಸದ ಮಹಿಳೆ ಜೊತೆ ಇದ್ದ ಹೊತ್ತಿನಲ್ಲಿ ಪರಿಚಯಸ್ತ ಧೋಬಿ ಮತ್ತು ಆತನ ಇಬ್ಬರು ಸಹಚರು ಮನೆಗೆ ನುಗ್ಗಿ ದರೋಡೆಗೆ ಯತ್ನಿಸಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಮನೆಕೆಲಸದ ಮಹಿಳೆಯನ್ನು ಆರೋಪಿಗಳು ಕೋಣೆಯಲ್ಲಿ ಕೂಡಿಹಾಕಿದ್ದು ಮಹಿಳೆಗೂ ಸಣ್ಣಪುಟ್ಟ ಗಾಯಗಳಾಗಿವೆ.

ಸುಮಾರು ರಾತ್ರಿ 11 ಗಂಟೆ ಹೊತ್ತಿಗೆ ಪೊಲೀಸರು ಮಾಹಿತಿ ಪಡೆದು ಪ್ರಕರಣದ ಮುಖ್ಯ ಆರೋಪಿಯನ್ನು ಬಂಧಿಸಿದ್ದಾರೆ. ಉಳಿದ ಇಬ್ಬರು ಆರೋಪಿಗಳಿಗಾಗಿ ಶೋಧ ಮುಂದುವರೆದಿದೆ.

67 ವರ್ಷ ವಯಸ್ಸಿನ ಕಿಟ್ಟಿ ಕುಮಾರಮಂಗಲಂ ಸುಪ್ರೀಂ ಕೋರ್ಟ್‌ ನ್ಯಾಯವಾದಿಯಾಗಿದ್ದರು. ಅವರ ಪತಿ ಪಿಆರ್ ಕುಮಾರಮಂಗಲಂ 1984 ರಲ್ಲಿ ಮೊಟ್ಟಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾಗಿದ್ದರು. ನಂತರ 1991 ರಿಂದ 92 ರ ವರೆಗೆ ಸಂಸದೀಯ ವ್ಯವಹಾರ ಮತ್ತು ಕಾನೂನು, ನ್ಯಾಯ ಮತ್ತು ಕಂಪನಿ ವ್ಯವಹಾರಗಳ ರಾಜ್ಯ ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. 1992 ರಿಂದ 93 ರ ಅವಧಿಯಲ್ಲಿ ಸಂಸದೀಯ ವ್ಯವಹಾರಗಳ ಸಚಿವರಾಗಿ ಮತ್ತು 1998 ರಲ್ಲಿ ದೇಶದ ವಿದ್ಯುತ್ ಸಚಿವರಾಗಿ ಸೇವೆ ಸಲ್ಲಿಸಿದ್ದರು.

Exit mobile version