ಆತ್ಮಹತ್ಯೆಗೆ ಶರಣಾದ ಪೊಲೀಸ್ ದಂಪತಿ

ಬೆಂಗಳೂರು, ಡಿ. 18: ಡಿವೈಎಸ್‍ಪಿ ಲಕ್ಷ್ಮೀ ಅನುಮಾನಾಸ್ಪದ ಆತ್ಮಹತ್ಯೆ ಪ್ರಕರಣದ ಬೆನ್ನಲ್ಲೆ ಇಂದು ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಪೊಲೀಸ್ ದಂಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ಶರಣಾಗಿರುವ ದಂಪತಿ ಪೊಲೀಸ್ ಪೇದೆಗಳಾದ ಶೀಲಾ ಹಾಗೂ ಸುರೇಶ್ ಎಂದು ತಿಳಿದು ಬಂದಿದೆ.

ಕೊತ್ತನೂರು ಪೊಲೀಸ್ ಠಾಣೆ ವ್ಯಾಪ್ತಿಯ ನಕ್ಷತ್ರ ಲೇಔಟ್‍ನಲ್ಲಿ ದಂಪತಿ ವಾಸವಾಗಿದ್ದು, ಇವರಿಗೆ ಮಕ್ಕಳಾಗಿರಲಿಲ್ಲ. ಈ ವಿಚಾರವಾಗಿ ದಂಪತಿ ಮನನೊಂದಿದ್ದರು ಎನ್ನಲಾಗಿದೆ. ಇಂದು ಅಪರಾಧ ಪ್ರಕರಣಗಳ ಪರಿಶೀಲನಾ ಸಭೆ ಇದ್ದ ಕಾರಣ ರಾತ್ರಿವರೆಗೂ ಸುರೇಶ್ ಕಚೇರಿಯಲ್ಲೇ ಇದ್ದರು. ಮೀಟಿಂಗ್ ಮುಗಿದ ಬಳಿಕವೂ ಸಿಬ್ಬಂದಿಯೊಂದಿಗೆ ಲವಲವಿಕೆಯಿಂದಲೇ ಸುರೇಶ್ ಮಾತನಾಡಿ ಕೊಂಡು ಮನೆಗೆ ಹೋಗಿದ್ದರು.

ಇಂದು ಬೆಳಗ್ಗೆ ಕಚೇರಿಗೆ ಬೇಗ ಬರುವಂತೆ ಸುರೇಶ್ ಅವರಿಗೆ ಸಹೋದ್ಯೋಗಿ ಪೊನ್ ಮಾಡಿದ್ದಾರೆ. ಆದರೆ, ಪೊನ್ ತೆಗೆದಿಲ್ಲ. ಮೆಸೇಜ್ ಮಾಡಿದರೂ ಸಹ ಅದನ್ನು ನೋಡಿರಲಿಲ್ಲ. ಆದಕಾರಣ ಇವರ ಮನೆಯ ಸಮೀಪದಲ್ಲೇ ವಾಸವಾಗಿದ್ದ ಮತ್ತೊಬ್ಬರು ಸಹೋದ್ಯೋಗಿಗೆ ಸುರೇಶ್ ಅವರ ಮನೆಗೆ ಹೋಗಿ ನೋಡುವಂತೆ ಹೇಳಿದ್ದಾರೆ.

ಅದರಂತೆ ಸಹೋದ್ಯೋಗಿ ಸುರೇಶ್ ಅವರ ಮನೆ ಬಳಿ ಬಂದು ಕೂಗಿದ್ದಾರೆ. ಆದರೆ, ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಮುಂಬಾಗಿಲು ತಳ್ಳಿದಾಗ ಬಾಗಿಲು ತೆರೆದುಕೊಂಡಿದೆ. ಆದರೆ, ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಒಳಗೆ ಹೋಗಿ ನೋಡಿದಾಗ ಸುರೇಶ್ ಅವರು ಕೊಠಡಿಯೊಂದರ ಫ್ಯಾನ್‍ಗೆ ಸ್ಕ್ರೀನ್ ಬಟ್ಟೆಯಿಂದ ನೇಣು ಹಾಕಿಕೊಂಡಿರುವುದು ಕಂಡುಬಂದಿದೆ.

ಹತ್ತು ವರ್ಷದ ಹಿಂದೆ ಶೀಲಾ ಮತ್ತು ಸುರೇಶ್ ಪ್ರೇಮ ವಿವಾಹವಾಗಿದ್ದರು. ಸುರೇಶ್ ಮೂಲತಃ ಕೋಲಾರದವರಾಗಿದ್ದು, ಶಿಲಾ ಚಿಕ್ಕಮಗಳೂರಿನ ಮೂಲದವರಾಗಿದ್ದಾರೆ. ಇದಕ್ಕೆ ಕಾರಣವು ಮೇಲ್ನೊಟ್ಟಕ್ಕೆ ಕ್ಷುಲ್ಲಕ ಕಾರಣವೆಂದು ಪೊಲೀಸರ ಮೂಲಗಳಿಂದ ಹೇಳಲಾಗಿದೆ.

Exit mobile version