ಸೂರ್ಯಪೇಟ್, ಮಾ. 23: ತೆಲಂಗಾಣದ ಸೂರ್ಯಪೇಟ್ಯಲ್ಲಿ ರಾಷ್ಟ್ರೀಯ ಮಟ್ಟದ ಕಬಡ್ಡಿ ಪಂದ್ಯಾವಳಿ ಉದ್ಘಾಟನೆಗೂ ಮೊದಲು ಭೀಕರ ಅವಘಡ ಸಂಭವಿಸಿದೆ. ಸೂರ್ಯಪೇಟ್ ಜಿಲ್ಲೆಯಲ್ಲಿ ಆಯೋಜಿಸಿದ್ದ 47ನೇ ರಾಷ್ಟ್ರೀಯ ಕಬಡ್ಡಿ ಪಂದ್ಯಾವಳಿಯ ಉದ್ಘಾಟನೆ ವೇಳೆ ಪ್ರೇಕ್ಷಕರು ಕುಳಿತಿದ್ದ ಗ್ಯಾಲರಿ ದಿಢೀರ್ ಕುಸಿದು ಬಿದ್ದಿದೆ. ತಕ್ಷಣ ನೂರಾರು ಜನರು ಒಬ್ಬರ ಮೇಲೊಬ್ಬರು ಬಿದ್ದಿದ್ದು, ಸಾಕಷ್ಟು ಜನರಿಗೆ ಗಂಭೀರ ಗಾಯವಾಗಿದ್ದು, ಕೂಡಲೇ ಅವರನ್ನೆಲ್ಲಾ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸಾಮರ್ಥ್ಯಕ್ಕಿಂತ ಹೆಚ್ಚಿನ ಜನರನ್ನು ಕೂರಿಸಿದ್ದೇ ತಪ್ಪಾಯ್ತಾ?
ಹೌದು ಇಂತಹದ್ದೊಂದು ಆರೋಪ ಕೂಡ ಇದೀಗ ಕೇಳಿಬಂದಿದೆ. ಕಬಡ್ಡಿ ಪಂದ್ಯ ನಡೆಯುತ್ತಿದ್ದ ಗ್ಯಾಲರಿಯಲ್ಲಿ ಸಾಮರ್ಥ್ಯಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಜನರನ್ನು ಕೂರಿಸಿದ್ದೇ ಕಾರಣ ಎನ್ನಲಾಗ್ತಿದೆ. 1500ಕ್ಕೂ ಹೆಚ್ಚು ಜನ ಗ್ಯಾಲರಿಗೆ ಹತ್ತಿದ್ದು, ಒಟ್ಟು 3 ಗ್ಯಾಲರಿ ವ್ಯವಸ್ಥೆ ಮಾಡಲಾಗಿತ್ತಾದರೂ ಈ ಪೈಕಿ 1 ಗ್ಯಾಲರಿ ಕುಸಿದಿದೆ. ಇನ್ನು ಈ ಘಟನೆ ಬಗ್ಗೆ ಪೊಲೀಸರು ಕೂಡ ತನಿಖೆ ನಡೆಸುತ್ತಿದ್ದಾರೆ.