ಬೆಂಗಳೂರು, ಮೇ. 14: ರೆಮ್ಡಿಸಿವಿರ್ ಕೊರತೆ ಇರುವ ಹಿನ್ನೆಲೆ ಇತರೆ ರಾಜ್ಯದಲ್ಲಿ ಬಳಕೆಯಾಗದೆ ಉಳಿದ ಲಸಿಕೆ ನೀಡಲು ಕೇಂದ್ರಕ್ಕೆ ಮನವಿ ಮಾಡಲಾಗುವುದು ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇಲಾಖೆ ವ್ಯಾಪ್ತಿಯಲ್ಲಿ 24 ಸಾವಿರ ಆಕ್ಸಿನೇಡೆಡ್ ಬೆಡ್ 1,145 ಐಸಿಯು 2,019 ವೆಂಟಿಲೇಟರ್ ಬೆಡ್ ಲಭ್ಯವಿದೆ ಎಂದು ಮಾಹಿತಿ ನೀಡಿದ್ದಾರೆ.
ಕೊರೊನಾ ನಿಯಂತ್ರಣ ಹಿನ್ನೆಲೆ ರಾಜ್ಯಾದ್ಯಂತ ಜಾರಿ ಮಾಡಲಾದ ಲಾಕ್ಡೌನ್ ಬಳಿಕ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿದೆ. ರಾಜ್ಯದಲ್ಲಿ ಹೆಚ್ಚುತ್ತಿರುವ ಆಮ್ಲಜನಕ ಬೇಡಿಕೆ ಸರಿದೂಗಿಸಲು ಮೂರು ಅಂಶಗಳ ಕಾರ್ಯಕಂತ್ರ ರೂಪಿಸಲಾಗಿದೆ.
ಅದರಂತೆ ಲಿಕ್ವಿಡ್ ಆಕ್ಸಿಜನ್ ಪೂರೈಕೆ ಹೆಚ್ಚಳ, ಆಕ್ಸಿಜನ್ ಜನರೇಟರ್ ಮೂಲಕ ಸ್ಥಳೀಯವಾಗಿ ಅಕ್ಸಿಜನ್ ಉತ್ಪಾದನೆ ಹೆಚ್ಚಳ ಹಾಗೂ ಆಕ್ಸಿಜನ್ ಸಿಲಿಂಡರ್ ಹೆಚ್ಚಾಗಿ ಖರೀದಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದಿದ್ದಾರೆ.18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು 3 ಕೋಟಿ ಡೋಸ್ ಖರೀದಿಗೆ ಬೇಡಿಕೆ ಇಟ್ಟಿದೆ.
ಹೆಚ್ಚುವರಿಯಾಗಿ 2ಕೋಟಿ ಡೋಸ್ ಪೂರೈಕೆಗೆ ಟೆಂಡರ್ ಕರೆಯಲಾಗಿದೆ. ಈವರೆಗೆ 8.94 ಲಕ್ಷ ಡೋಸ್ ಲಭ್ಯವಾಗಿದೆ ಎಂದಿದ್ದಾರೆ.
ಅಲ್ಲದೇ, ಡಿಸಿಎಂ ಅಶ್ವಥ್ ನಾರಾಯಣ, ಸಚಿವರಾದ ಆರ್ ಅಶೋಕ್, ಸುಧಾಕರ್ ಅರವಿಂದ್ ಲಿಂಬಾವಳಿ ತಮಗೆ ವಹಿಸಿರುವ ಜವಾಬ್ದಾರಿ ಹಾಗೂ ಸರ್ಕಾರದಿಂದ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ವಿವರಣೆ ನೀಡಿದರು.