ಬಡತನ ಮೆಟ್ಟಿನಿಂತು ಲಾಯರ್ ಆದ ತೃತೀಯ ಲಿಂಗಿ: ಇದೀಗ ರಾಜ್ಯದ ಮೊದಲ ವಕೀಲೆ ಎಂಬ ಹೆಗ್ಗಳಿಕೆ

ಮೈಸೂರು: ಇಂದು ಎಲ್ಲಾ ರಂಗಗಳಲ್ಲೂ ತೃತೀಯ ಲಿಂಗಿಯರು ಸೇವೆ ಸಲ್ಲಿಸುತಿದ್ದಾರೆ. ದಶಕಗಳ ಹಿಂದೆ ಸಮಾಜದಿಂದ ಅವಮಾನ , ನಿಂದನೆ , ಅಪಹಾಸ್ಯಕ್ಕೆ ಗುರಿಯಾಗುತಿದ್ದ ಮಂಗಳ ಮುಖಿಯರು ನೂರಾರು ಜನರು ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುವ ಮೂಲಕ ಸಾಧನೆ ಮೆರೆಯುತಿದ್ದಾರೆ. ಇದೀಗ ರಾಜ್ಯದಲ್ಲೇ ಮೊದಲ ಬಾರಿಗೆ ಈ ಸಮುದಾಯದವರೊಬ್ಬರು ವಕೀಲರಾಗಿ ಹೊರಹೊಮ್ಮಿದ್ದಾರೆ.

ಮೈಸೂರಿನ ಜಯನಗರದ ನಿವಾಸಿ ಶಶಿ ಅಲಿಯಾಸ್ ಶಶಿಕುಮಾರ್ ಮೈಸೂರು ಜಿಲ್ಲೆಯಲ್ಲಿ ಕಾನೂನು ಪದವಿ ಪಡೆದ ಮೊದಲ ತೃತೀಯ ಲಿಂಗಿ ಎನಿಸಿದ್ದಾರೆ. ಬಾಲ್ಯದಲ್ಲಿ ತಮ್ಮ 14 ನೇ ವಯಸ್ಸಿನವರೆಗೂ ಶಶಿಕುಮಾರ್ ಆಗಿದ್ದ ಶಶಿ, ನಂತರ ದೇಹದಲ್ಲಿ ಹಾರ್ಮೋನ್ ವ್ಯತ್ಯಾಸದ ಕಾರಣದಿಂದ ಯುವತಿಯರ ವೇಷ ಭೂಷಣದ ಕಡೆಗೆ ಆಸಕ್ತರಾದರು. ಹುಡುಗಿಯರಂತೆ ಉಡುಪು ಧರಿಸುವುದು, ಮೇಕಪ್ ಮಾಡಿಕೊಳ್ಳುತೊಡಗಿದರು. ಇದರಿಂದ ಅವರಿಗೆ ಆತ್ಮ ತೃಪ್ತಿ ಸಿಗುತಿತ್ತು ಎಂದು ಅವರು ಹೇಳುತ್ತಾರೆ.

ಇವರು ಹಣ್ಣಿನಂತೆ ವೇಷ ಧರಿಸತೊಡಗಿದಂತೆ ಸಹಪಾಠಿಗಳೆಲ್ಲರೂ ದೂರ ಸರಿದರು. ಇದು ಶಶಿಗೆ ಅತೀವ ನೋವನ್ನುಂಟು ಮಾಡಿತು. ಆದರೆ ಅವರು ಓದಿನಿಂದ ಹಿಮ್ಮುಖರಾಗಲಿಲ್ಲ. ಬದಲಿಎಗ ಓದಿನಲ್ಲಿ ತೊಡಗಿಸಿಕೊಂಡು ಉತ್ತಮ ಅಂಕ ಗಳಿಸತೊಡಗಿದರು. ಅಶೋಕಪುರಂನ ಸಿದ್ಧಾರ್ಥ ಪ್ರೌಢಶಾಲೆಯಲ್ಲಿ 8 ರಿಂದ 10ನೇ ತರಗತಿ ಮುಗಿಸಿದ ಶಶಿ , ಲಕ್ಷ್ಮೀಪುರಂನಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಲ್ಲಿ ವಿಜ್ಞಾನ(ಪಿಸಿಎಂಬಿ) ಹಾಗೂ ಕುವೆಂಪುನಗರದ ಸೋಮಾನಿ ಕಾಲೇಜಲ್ಲಿ ಕಲಾ ವಿಭಾಗದಲ್ಲಿ ಶಿಕ್ಷಣ ಪಡೆದಿದ್ದಾರೆ.

ನಂತರ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಸಾರ್ವಜನಿಕ ಆಡಳಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಶಶಿ ಸಮಾಜದ ಅಪಹಾಸ್ಯ , ನಿಂದನೆಗೂ ಆಹಾರವಾದರು. ಈ ಮಧ್ಯೆ ಹಾಸಿಗೆ ಹಿಡಿದಿದ್ದ ಹಿರಿಯ ನಾಗರೀಕರೊಬ್ಬರ ಕೇರ್ ಟೇಕರ್ ಆಗ ಕೆಲಸ ಮಾಡುತ್ತಿದ್ದ ಶಶಿ ಅವರಿಗೆ ಆಯುರ್ವೇದ ಮತ್ತು ಪಂಚಕರ್ಮ ವೈದ್ಯರಾದ ಡಾ.ಜೆ.ರಶ್ಮಿರಾಣಿ ಉನ್ನತ ಶಿಕ್ಷಣ ಪಡೆಯಲು ಸಹಕಾರ ನೀಡಿದರು. ಶಶಿಗೆ ವಿವೇಕಾನಂದ ವೃತ್ತದ ಬಳಿ ಇರುವ ಚಿರಂತ್ ಆಯುರ್ವೇದ ಕ್ಲಿನಿಕ್ ಹಾಗೂ ಆಪ್ತಸಮಾಲೋಚನ ಕೇಂದ್ರದಲ್ಲಿ ಸಹಾಯಕರಾಗಿ ಕೆಲಸ ನೀಡಿದ್ದಲ್ಲದೆ, ಮುಕ್ತ ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಳ್ಳುವಂತೆ ಪ್ರೇರೇಪಿಸಿದರು.

ನಂತರ 2018ರಲ್ಲಿ ವಿದ್ಯಾವರ್ಧಕ ಕಾನೂನು ಕಾಲೇಜಿಗೆ ಶಶಿಯನ್ನು ಕಾನೂನು ಪದವಿ ಶಿಕ್ಷಣ ಪಡೆಯಲು ದಾಖಲು ಮಾಡಿಸಿ ಸ್ವತಃ . ಡಾ.ಜೆ.ರಶ್ಮಿರಾಣಿ ಅವರೇ ಪ್ರತಿ ವರ್ಷ ಕಾಲೇಜು ಶುಲ್ಕ 30 ಸಾವಿರ ರೂ. ಪಾವತಿಸಿದ್ದಾರೆ. ಇಷ್ಟೆಲ್ಲಾ ನಿಂದನೆ, ನೋವು ಅನುಭವಿಸಿ ಶಿಕ್ಷಣ ಪದವಿ ಸ್ನಾತಕೋತ್ತರ ಪದವಿ ಕಾನೂನು ಪದವಿ ಪಡೆದಿರುವ ಶಶಿ ಅವರು ಈಗ ಹಿರಿಯ ವಕೀಲರಾದ ಟಿ.ನಾಗರಾಜು ಅವರ ಬಳಿ ಪ್ರಾಕ್ಟೀಸ್ ಮಾಡಲು ಆರಂಬಿಸಿದ್ದಾರೆ.

ಈ ಕುರಿತು ಮಾತನಾಡಿದ ಶಶಿ ಮನೆ ಕೆಲಸ ಮಾಡಿ ಪದವಿ ಶಿಕ್ಷಣ ಪಡೆದಿದ್ದೆ. ನಾನು ಓದುವ ಹಂಬಲ ವ್ಯಕ್ತಪಡಿಸಿದಾಗ ಕೆಲವರು ಓದುವುದು ನಿಮ್ಮಂತಹವರಿಗಲ್ಲ, ಸಿಗ್ನಲ್‍ನಲ್ಲಿ ನಿಂತು ಬಿಕ್ಷೆ ಬೇಡುವಂತೆಯೂ, ವೇಶ್ಯಾವಾಟಿಕೆಯಲ್ಲಿ ತೊಡಗುವಂತೆಯೂ ಛೇಡಿಸಿದ್ದಾರೆ. ಅದೆಲ್ಲವನ್ನು ಬದಿಗೊತ್ತಿ ಇಂದು ಕಾನೂನು ಪದವಿ ಪಡೆದಿದ್ದೇನೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ನನಗೆ ನ್ಯಾಯಾಧೀಶರಾಗಬೇಕೆಂಬ ಹಂಬಲವಿದೆ. ಅದಕ್ಕಾಗಿ ಪರೀಕ್ಷೆ ಬರೆಯಲು ಸಿದ್ದತೆ ಮಾಡಿಕೊಳ್ಳುತ್ತಿದ್ದೇನೆ ಎಂದರು. ಸಮಾಜದಲ್ಲಿ ಅಪಹಾಸ್ಯ , ಕಿರುಕುಳಕ್ಕೆ ಒಳಗಾದ ತೃತೀಯ ಲಿಂಗಿ ಸಮುದಾಯಕ್ಕೆ ನೆರವು ನೀಡುವುದೂ ಅವರ ಗುರಿ ಅಗಿದೆ.

Exit mobile version