ಅವಕಾಶವಾದಿ ಸಿದ್ದರಾಮಯ್ಯ ಸ್ವಾರ್ಥಿಗಳ ಕುಲಗುರು!

Congress

ಅವಕಾಶವಾದಿ ಸಿದ್ದರಾಮಯ್ಯ(Siddaramaiah) ಸ್ವಾರ್ಥಿಗಳ ಕುಲಗುರು. ಉಂಡಮನೆಗೆ ಎರಡು ಬಗೆಯುವ ಬಗ್ಗೆಯೇ ಸದಾ ಯೋಚಿಸುತ್ತಿದ್ದ ಸಿದ್ದರಾಮಯ್ಯ,

ಅಹಿಂದ ಹೋರಾಟದ ಮೂಲಕ ದೇವೇಗೌಡ(Devegowda) ಅವರಿಗೆ ಘೋರ ಅನ್ಯಾಯ ಎಸಗಿದರು. ರಾಜಕೀಯವಾಗಿ ಬೆಳೆಸಿದವರ ಬಗ್ಗೆಯೇ ಬಾಯಿಗೆ ಬಂದಂತೆ ನಿಂದಿಸಿದ ಸಿದ್ದರಾಮಯ್ಯ ಅವರನ್ನು ಇಂದಿಗೂ ಮೂಲ ಕಾಂಗ್ರೆಸ್ಸಿಗರು(Congress) ಪೂರ್ಣವಾಗಿ ನಂಬುತ್ತಿಲ್ಲ ಎಂದು ಬಿಜೆಪಿ(BJP) ವಿಪಕ್ಷ ನಾಯಕ ಸಿದ್ದರಾಮಯ್ಯನವರನ್ನು ಟೀಕಿಸಿದೆ. ಸರಣಿ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ಅಬಕಾರಿ ಖಾತೆಯೇ ಬೇಕು ಎಂದು ಮುಸುಕು ಹಾಕಿ ಮಲಗಿದ್ದವರು ಈಗ ಪ್ರಾಮಾಣಿಕತೆಯ ಸೋಗಿನಲ್ಲಿ ಮೆರೆಯುವುದು ಸೋಜಿಗವಲ್ಲವೇ? ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತರುವಲ್ಲಿ ಎಸ್.ಎಂ.ಕೃಷ್ಣ(SM Krishna) ಅವರ ಪ್ರಯತ್ನ ದೊಡ್ಡದು.

ಆದರೆ ಕಾಲ ಕಳೆದಂತೆ ಸಿದ್ದರಾಮಯ್ಯ ಅವರು ತಾನು ಹತ್ತಿದ ಏಣಿಯನ್ನೇ ತುಳಿದರು. ಹಿರಿಯರಾದ ಎಸ್‍ಎಂಕೆ ಅವರ ಬಗ್ಗೆ ನಿಂದನೆಯ ಮಾತನಾಡುವಾಗ ಆತ್ಮಸಾಕ್ಷಿಯ ಪ್ರಶ್ನೆ ಎದುರಾಗಲಿಲ್ಲವೇ? ಎಂದು ಪ್ರಶ್ನಿಸಿದೆ. ಮಾಜಿ ಪ್ರಧಾನಿ ದೇವೇಗೌಡ ಅವರ ಬಣ ಸೇರಿದ ಸಿದ್ದರಾಮಯ್ಯ ಅಲ್ಲೂ ನಿಯತ್ತಿನಿಂದ ನಡೆದುಕೊಳ್ಳಲೇ ಇಲ್ಲ. ಸಿದ್ದರಾಮಯ್ಯ ಅವರ ಕನಸು- ಮನಸಿನಲ್ಲಿ ಇದ್ದಿದ್ದು ಬರೇ ಅಧಿಕಾರ, ಅಧಿಕಾರ, ಅಧಿಕಾರ ಅಷ್ಟೇ! ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಗೊಂಡ ಸಿದ್ದರಾಮಯ್ಯ ಅವರಿಗೆ ಸಚಿವ ಸ್ಥಾನ ನೀಡಿ ರಾಜಕೀಯವಾಗಿ ಗುರುತಿಸಿದ್ದು ರಾಮಕೃಷ್ಣ ಹೆಗಡೆ.

ಆದರೆ ಸ್ವಾರ್ಥಕ್ಕಾಗಿ ಬಣ ಬದಲಾಯಿಸಿದ ಸಿದ್ದರಾಮಯ್ಯ ಮೊದಲ ಬಾರಿಗೆ ನಂಬಿಕೆ ದ್ರೋಹದ ಅಸ್ತ್ರ ಪ್ರಯೋಗಿಸಿದರು. ಉಂಡಮನೆಗೆ ಕನ್ನ ಹಾಕುವುದು ಹೇಗೆ ಎಂಬ ವಿಚಾರದ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ದೇಶಕ್ಕೇ ಟ್ಯೂಶನ್ ಹೇಳಿಕೊಡುವಷ್ಟು ಸಮರ್ಥರು. ಈ ವಿಚಾರದಲ್ಲಿ ಸಿದ್ದರಾಮಯ್ಯ ರೋಚಕ ಇತಿಹಾಸ ಹೊಂದಿದ್ದಾರೆ. ನಂಬಿದವರ ಬೆನ್ನಿಗೆ ಚೂರಿ ಹಾಕುವುದರಲ್ಲಿ ಈ “ಜಲದರ್ಶಿನಿ ವಾಸಿ” ನಿಸ್ಸೀಮ ಎಂದು ಬಿಜೆಪಿ ಸರಣಿ ಟ್ವೀಟ್‍ಗಳ ಮೂಲಕ ಟೀಕಿಸಿದೆ.

Exit mobile version