ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಬಿಜೆಪಿ ಶಾಸಕರ ಅಸಮಾಧಾನ: ಶೀಘ್ರದಲ್ಲೇ ಮಧ್ಯಂತರ ಚುನಾವಣೆ ಎದುರಾಗಬಹುದು ಎಂದ ಸಿದ್ದರಾಮಯ್ಯ

ಬೆಂಗಳೂರು, ಆ. 05: ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿಯಲ್ಲಿ ಭುಗಿಲೆದ್ದಿರುವ ಭಿನ್ನಮತ ನೋಡಿದರೆ ಶೀಘ್ರದಲ್ಲಿಯೇ ಮಧ್ಯಂತರ ಚುನಾವಣೆ ಎದುರಾಗಬಹುದು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟ ರಚನೆ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ದೆಹಲಿಯಲ್ಲಿ ಪಕ್ಷದ ಹೈಕಮಾಂಡ್ ಜೊತೆಗಿನ ಮೂರು ದಿನಗಳ ನಿರಂತರ ಚರ್ಚೆ-ಸಮಾಲೋಚನೆಗಳ ನಂತರ ರಚನೆಯಾದ ರಾಜ್ಯದ ಸಚಿವ ಸಂಪುಟವನ್ನು ನೋಡಿದರೆ ಮುಖ್ಯಮಂತ್ರಿಗಳು ಬೆಟ್ಟ ಅಗೆದು ಇಲಿ ಹಿಡಿದಂತಾಗಿದೆ ಎಂದು ಲೇವಡಿ ಮಾಡಿದ್ದಾರೆ.

ದಲಿತ ಸಮುದಾಯದ ಉದ್ಧಾರಕ್ಕೆ ಅವತಾರ ಎತ್ತಿಬಂದಂತೆ ಇತ್ತೀಚಿನ ದಿನಗಳಲ್ಲಿ ಮಾತನಾಡುತ್ತಿರುವ ಬಿಜೆಪಿ ರಾಜ್ಯ ಸಚಿವಸಂಪುಟ ರಚನೆಯಲ್ಲಿ ದಲಿತ ಸಮುದಾಯವನ್ನು ಸಂಪೂರ್ಣ ಕಡೆಗಣಿಸಿದೆ. ರಾಜ್ಯದ ಶೇಕಡಾ 24ರಷ್ಟು ಜನಸಂಖ್ಯೆ ಇರುವ ಪರಿಶಿಷ್ಟ ಜಾತಿ-ಪಂಗಡ ಸಮುದಾಯಕ್ಕೆ ಕೇವಲ 4 ಸಚಿವರನ್ನು ನೀಡಿ ಅನ್ಯಾಯ ಎಸಗಿದೆ ಎಂದು ಟೀಕಿಸಿದ್ದಾರೆ.

ನೂತನ ಸಚಿವ ಸಂಪುಟ ರಚನೆಯಲ್ಲಿ ಬಿಜೆಪಿಯೊಳಗಿರುವ ಭಿನ್ನಮತೀಯ ಗುಂಪುಗಳನ್ನು ತೃಪ್ತಿ ಪಡಿಸುವ ಸರ್ಕಸ್ ಕಾಣುತ್ತಿದೆಯೇ ಹೊರತು, ಜನಪರವಾದ ಸಮರ್ಥ ಆಡಳಿತ ನಡೆಸಬೇಕೆಂಬ ಸದುದ್ದೇಶ ಕಾಣುತ್ತಿಲ್ಲ. ಎಲ್ಲರನ್ನೂ ಓಲೈಸಲು ಪ್ರಯತ್ನ ನಡೆಸಿರುವ ಮುಖ್ಯಮಂತ್ರಿಗಳು ಯಾರಿಗೂ ಬೇಡದ ಒಲ್ಲದ ಕೂಸು ಆಗಿರುವಂತೆ ಕಾಣಿಸುತ್ತಿದೆ ಎಂದಿದ್ದಾರೆ.

ಸಾಮರ್ಥ್ಯ, ಸಾಮಾಜಿಕ ನ್ಯಾಯ, ಪ್ರಾದೇಶಿಕ ಪ್ರಾತಿನಿಧ್ಯ, ಸ್ವಚ್ಛ ರಾಜಕಾರಣ ಮೊದಲಾದ ಯಾವ ಧನಾತ್ಮಕ ಅಂಶಗಳು ಹೊಸ ಸಚಿವ ಸಂಪುಟದಲ್ಲಿ ಕಾಣಿಸುತ್ತಿಲ್ಲ. ಇತ್ತೀಚೆಗಷ್ಠೇ ಮೊಟ್ಟೆ ಖರೀದಿ ಹಗರಣದಲ್ಲಿ ಆರೋಪಿಯಾಗಿರುವ ಶಶಿಕಲಾ ಜೊಲ್ಲೆ ಅವರಿಗೆ ಸಚಿವಸ್ಥಾನ ನೀಡಿರುವುದು ಬಿಜೆಪಿ ಮತ್ತು ಸಂಘಪರಿವಾರದ ನೈತಿಕ ದಿವಾಳಿತನಕ್ಕೆ ಸಾಕ್ಷಿ ಎಂದು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

Exit mobile version