ಎಲ್ಲಾ ಹಿಂದೂ ದೇವಾಲಯಗಳನ್ನು ಆರ್‌ಎಸ್ಎಸ್ ಸುಪರ್ದಿಗೆ ಕೊಡ್ಬೇಕಾ ?– ಹೆಚ್‌.ಡಿ. ಕುಮಾರಸ್ವಾಮಿ

ಬೆಂಗಳೂರು ಅ 16 :  ಆರ್‌ಎಸ್‌ಎಸ್‌ ವಿರುದ್ಧ ಕಳೆದ ಕೆಲವು ದಿನಗಳಿಂದ ನಿರಂತರ ವಾಗ್ದಾಳಿ ನಡೆಸುತ್ತಿರುವ ಮಾಜಿ ಮುಖ್ಯಮಂತ್ರಿ, ಎಚ್ ಡಿ ಕುಮಾರಸ್ವಾಮಿ, ಸಂಘ ಪರಿವಾರದ ವಿರುದ್ಧ ಮತ್ತೊಮ್ಮೆ ಗುಡುಗಿದ್ದಾರೆ.

ಚನ್ನಪಟ್ಟಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಎಲ್ಲಾ ಯೂನಿವರ್ಸಿಟಿಗಳಲ್ಲಿಯೂ RSS ಕಾರ್ಯಕರ್ತರನ್ನು ಸಿಂಡಿಕೇಟ್ ಸದಸ್ಯರನ್ನಾಗಿ ಮಾಡಿದ್ದಾರೆ. ಯಾವುದೇ ಕೆಲಸವಾಗಬೇಕು ಅಂದರೆ 1 ರಿಂದ 2 ಲಕ್ಷ ರೂಪಾಯಿ ಬೇಡಿಕೆ ಈಡುತ್ತಾರೆ ಎಂದು ಆರೋಪಿಸಿದ್ದಾರೆ.

ದೇವಾಲಯದ ನಿರ್ವಹಣಾ ಹಕ್ಕುಗಳನ್ನು ಹಿಂದೂಗಳಿಗೆ ನೀಡಬೇಕು ಮತ್ತು ಅದರ ಸಂಪತ್ತನ್ನು ಹಿಂದೂ ಸಮುದಾಯದ ಕಲ್ಯಾಣಕ್ಕಾಗಿ ಮಾತ್ರ ಬಳಸಬೇಕು ಎಂದು ವಿಜಯದಶಮಿ ದಿನ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದರು. ಈ ಕುರಿತು ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಅವರಲ್ಲಿ ದೇಶ ಒಡೆಯುವ ಉದ್ದೇಶವಿದೆ. ದೇಶವನ್ನು ಇವರಿಗೆ ನಾವು ಗುತ್ತಿಗೆ ಕೊಟ್ಟಿದ್ದೀವಾ? ಎಂದು ಪ್ರಶ್ನಿಸಿ ಹರಿಹಾಯ್ದಿದ್ದಾರೆ.

ಎಲ್ಲಾ ಹಿಂದೂ ದೇವಾಲಯಗಳನ್ನು ಇವರ ಸುಪರ್ದಿಗೆ ಕೊಡಬೇಕಂತೆ, ಇವರ ಅಕೌಂಟ್ ಎಲ್ಲಿಟ್ಟಿದ್ದಾರೆ? 1989 – 1991 ರವರೆಗೆ ಅಡ್ವಾನಿಯವರು ರಥಯಾತ್ರೆ ಮಾಡಿದ್ರಲ್ಲ. ಇಟ್ಟಿಗೆ, ಹಣ ಸಂಗ್ರಹ ಮಾಡಿದ್ರಲ್ಲ. ಅದರ ಬಗ್ಗೆ ಮಾಹಿತಿ ಎಲ್ಲಿದೆ? ಅವರು ಸಂಗ್ರಹಿಸಿದ ಹಣ ಎಷ್ಟು, ಅದಕ್ಕಾದ ಬಡ್ಡಿ ಎಷ್ಟು? ಎಲ್ಲಿದೆ ಆ ಹಣ. ಈಗ ಸಹ ರಾಮಮಂದಿರ ನಿರ್ಮಾಣಕ್ಕೆ ಜನರಿಂದ ಹಣ ಸಂಗ್ರಹ ಮಾಡಿದ್ದಾರೆ. ಅದರ ಲೆಕ್ಕ ಎಲ್ಲಿದೆ? ಎಂದು ಪ್ರಶ್ನಿಸಿದರು. ರಾಮಮಂದಿರ ನಿರ್ಮಾಣದ ಹಣದ ವಿಚಾರದಲ್ಲಿ 200% ಲೋಪ ಆಗಿದೆ. ರಾಮನ ಹೆಸರಿನಲ್ಲಿ ಆಗಿರುವ ದುರುಪಯೋಗದ ಬಗ್ಗೆ ನಾನು ಹೇಳಿದ್ದೇನೆ ಎಂದು ತಿಳಿಸಿದರು

Exit mobile version