ಕೇರಳದಲ್ಲಿ ಕರ್ನಾಟಕ ವಾಹನಗಳಿಗೆ ತಡೆ

ಕೇರಳ, ಫೆ. 22: ಕೇರಳದಿಂದ ಕರ್ನಾಟಕಕ್ಕೆ ಬರುವವರಿಗೆ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದ್ದು ರಾಜ್ಯದ ಗಡಿಗಳಲ್ಲಿ ಆರೋಗ್ಯ ಇಲಾಖೆಯ ಕಾರ್ಯಕರ್ತರು ಬಿಗಿ ತಪಾಸಣೆ ನಡೆಸುತಿದ್ದಾರೆ.

ಮಂಗಳೂರು ಸಮೀಪದ ತಲಪಾಡಿ ಚೆಕ್‌ ಪೋಸ್ಟ್‌ ನಲ್ಲಿ ತಪಾಸಣೆ ನಡೆಯುತ್ತಿದ್ದು ಇದಕ್ಕೆ ಕೇರಳ ರಾಜ್ಯದವರಿಂದ ತೀವ್ರ ಪ್ರತಿರೋಧ ವ್ಯಕ್ತವಾಗಿದೆ. ಅಧಿಕಾರಿಗಳು ಜಿಲ್ಲೆಯ ಗಡಿ ಭಾಗದಲ್ಲಿ ಕೇರಳದ ವಾಹನಗಳನ್ನು ತಪಾಸಣೆಗೊಳಪಡಿಸುತ್ತಿದ್ದಾರೆ. ಆದರೆ ಇದಕ್ಕೆ ಪ್ರತಿರೋಧ ಒಡ್ಡಿರುವ ಕೇರಳದ ಕೆಲವು ಸಂಘಟನೆಗಳು ಕರ್ನಾಟಕ ರಾಜ್ಯದ ವಾಹನಗಳನ್ನು ತಲಪಾಡಿ ಗಡಿಯಲ್ಲಿ ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ.

ಕೆಎಸ್ ಆರ್ ಟಿಸಿ ಬಸ್ ಗಳು ಸೇರಿದಂತೆ ಕರ್ನಾಟಕದ ಎಲ್ಲಾ ವಾಹನಗಳು ಕೇರಳವನ್ನು ಪ್ರವೇಶಿಸಲಾಗದೆ ಸಾಲುಗಟ್ಟಿ ನಿಂತಿವೆ. ಕೇರಳದ ಆಂಬ್ಯುಲೆನ್ಸ್ ಸೇರಿದಂತೆ ತುರ್ತು ವಾಹನಗಳನ್ನು, ವಿದ್ಯಾರ್ಥಿಗಳನ್ನು ಕೂಡ ಕರ್ನಾಟಕ ರಾಜ್ಯದಲ್ಲಿ ತಡೆ ಹಿಡಿಯುತ್ತಿರುವುದರಿಂದ ಕೇರಳಕ್ಕೆ ಕರ್ನಾಟಕದ ಒಂದೇ ಒಂದು ವಾಹನ ಪ್ರವೇಶಿಸಲು ಬಿಡುವುದಿಲ್ಲವೆಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸುತ್ತಿದ್ದು, ಕರ್ನಾಟಕದ ಎಲ್ಲಾ ವಾಹನಗಳನ್ನು ತಡೆದಿದ್ದಾರೆ. ಕರ್ನಾಟಕ ಸರ್ಕಾರ ತಕ್ಷಣ ಮಧ್ಯ ಪ್ರವೇಶ ಮಾಡಿ ಪರಿಸ್ಥಿತಿಯನ್ನು ನಿಯಂತ್ರಿಸಬೇಕು ಮತ್ತು ಸಮಸ್ಯೆಯನ್ನು ಬಗೆಹರಿಸಬೇಕೆಂದು ವಾಹನಗಳಲ್ಲಿರುವ ಕನ್ನಡಿಗರು ಒತ್ತಾಯಿಸುತ್ತಿದ್ದಾರೆ.

Exit mobile version