ಇದು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಹಟಿಕಿನಾಳ ಗ್ರಾಮದ ಜಿಗಳಿ ಕೆರೆ ಕಟ್ಟೆ ಒಡೆದು ಉಂಟಾಗಿರುವ ದೃಶ್ಯ.
ಕಳೆದ ನಾಲ್ಕು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣ ಹಟಕಿನಾಳ ಕೆರೆ ಕೋಡಿ ಒಡೆದು ಹೋಗಿದೆ.
ಕೆರೆ ಕಟ್ಟೆ ಒಡೆದು ನೀರು ರಭಸವಾಗಿ ಗದ್ದೆಗಳಿಗೆ ನುಗ್ಗಿದೆ. ಗದ್ದೆಯಲ್ಲಿದ್ದ ಭತ್ತದ ಬೆಳೆ ಸಂಪೂರ್ಣವಾಗಿ ನಾಶವಾಗಿದೆ.
ನೆರೆ ನೀರು ಒಂದೇ ಸಮನೆ ರಭಸವಾಗಿ ನುಗ್ಗಿದ್ದರಿಂದ 30 ರಿಂದ 35 ಎಕರೆ ಬೆಳೆ ಸಂಪೂರ್ಣವಾಗಿ ಕೊಚ್ಚಿ ಹೋಗಿದೆ ಅನ್ನೋದು ರೈತರ ದೂರು.
ಕೊರೋನಾ ಸಂಕಷ್ಟ ಕಾಲ, ಜೊತೆ ನೆರೆ ಹಾವಳಿಯಿಂದ ರೈತನ ಬದುಕೂ ಕೊಚ್ಚಿ ಹೋಗಿದೆ. ಹಾಗಾಗಿ ಸರ್ಕಾರ ರೈತರಿಗೆ ಬೆಳೆ ನಾಶ ಪರಿಹಾರ ನೀಡಬೇಕಾಗಿ ಮನವಿ ಸಲ್ಲಿಸುತ್ತಿದ್ದಾರೆ.
ಅಷ್ಟು ಮಾತ್ರವಲ್ಲ ಜಿಗಳಿ ಕೆರೆ ಹಟಕಿನಾಳ ಗ್ರಾಮದ ಜನರ ಜೀವನಾಡಿಯಾಗಿದೆ. ಈ ಕೆರೆ ನೀರು ಇಲ್ಲಿನ ರೈತರ ಬೆಳೆಗೆ ಆಸರೆಯಾಗಿದೆ. ಆದ್ರೆ ಈಗ ಈ ಕೆರೆ ಕಟ್ಟೆ ಒಡೆದು ಹೋಗಿರುವುದರಿಂದ ಬೇಸಿಗೆ ಕಾಲದಲ್ಲಿ ನೀರು ಸಂಪೂರ್ಣ ಬತ್ತಿ ಹೋಗಿ ಬರ ಪರಿಸ್ಥಿತಿ ಎದುರಾಗುತ್ತೆ. ಹಾಗಾಗಿ ಸರ್ಕಾರ ಒಡೆದು ಹೋಗಿರುವ ಕೆರೆ ಕಟ್ಟೆಯನ್ನು ದುರಸ್ಥಿತಿ ಮಾಡಬೇಕಾಗಿ ವಿನಂತಿಸುತ್ತಿದ್ದಾರೆ ರೈತರು.
ರೈತರ ದೂರಿನ ಮೇರೆಗೆ ಸ್ಥಳಕ್ಕೆ ಕಲಘಟಗಿಯ ಶಾಸಕರಾದ ಸಿಎಂ ನಿಂಬಣ್ಣವರ್, ತಾಲೂಕ ತಹಸಿಲ್ದಾರ್ ಅಶೋಕ್ ಸಿಗ್ಗಾವ, ಕಟ್ಟೆ ಗೌಡರು ಸಹಾಯಕ ಕೃಷಿ ನಿರ್ದೇಶಕರು ಕಲಘಟಗಿ, ಮತ್ತು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಆಗಮಿಸಿದ್ರು.
ಹಾನಿಯಾದ ಕೆರೆ ದುರಸ್ತಿ ಮಾಡುವ ಹಾಗೂ ಬೆಳೆ ಹಾಳಾದ ರೈತರಿಗೆ ಸರ್ಕಾರದ ಗಮನ ಸೆಳೆದು ಸೂಕ್ತ ಪರಿಹಾರ ಒದಗಿಸಿ ಕೊಡಲಾಗುವುದಾಗಿ ಶಾಸಕರು ಭರವಸೆ ನೀಡಿದ್ರು.
ಶಾಸಕರ ಭರವಸೆ ಬೇಗ ಈಡೇರಲಿ, ರೈತರಿಗೆ ಪರಿಹಾರ ಸಿಗಲಿ ಅನ್ನೋದು ವಿಜಯಟೈಮ್ಸ್ಆಶಯ.
ಧಾರವಾಡದಿಂದ ಪ್ರಕಾಶ ಧೂಪದ ಸಿಟಿಜನ್ ಜರ್ನಲಿಸ್ಟ್