ಯೋಗಿ ವಿರುದ್ಧ ತೊಡೆತಟ್ಟಿದ ರಾವಣ ! ಯಾರೀ ರಾವಣ್‌? ರಾವಣನ ಸ್ಪರ್ಧೆಯಿಂದ ಯೋಗಿಗೆ ಎದುರಾಗಲಿದೆಯಾ ಸೋಲು?

chandrashekhar azad

ಉತ್ತರಪ್ರದೇಶ ಚುನಾವಣಾ ಕಣ ರಂಗೇರುತ್ತಿದೆ. ಈಗಂತು ಚುನಾವಣಾ ಕಣ ಅಕ್ಷರಶ: ರಣ ಕಣದಂತೆ ಭಾಸವಾಗುತ್ತದೆ. ಅದ್ರಲ್ಲೂ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರ ವಿರುದ್ಧ ಗೋರಖ್‌ಪುರದಲ್ಲಿ `ಭೀಮ್ ಆರ್ಮಿ’ಯ ನಾಯಕ ಚಂದ್ರಶೇಖರ್ ಅಜಾದ್ ರಾವಣ್ ಕಣಕ್ಕಿಳಿದ ಮೇಲೆ ದೊಡ್ಡ ದೊಡ್ಡ ಲೆಕ್ಕಾಚಾರಗಳೇ ತಲೆಗೆಳಗಾಗುತ್ತಿವೆ. ರಾವಣ ಯೋಗಿ ವಿರುದ್ಧ ತೊಡೆ ತಟ್ಟಿ ಕೇಂದ್ರದ ಬಿಜೆಪಿ ನಾಯಕರ ನಿದ್ದೆಗೆಡಿಸಿದ್ದಾರೆ. ಯುವಕರ ಕಣ್ಮಣಿ, ನವ ದಲಿತ ನಾಯಕ ಭೀಮ್‌ ಆರ್ಮಿಯ ಕಮಾಂಡರ್‌ ಚಂದ್ರಶೇಖರ್‌ ಆಜಾದ್‌ ರಾವಣ್‌ ಸ್ಪರ್ಧೆ ಯಾಕೆ ಇಷ್ಟೊಂದು ಸುದ್ದಿ ಜೊತೆಗೆ ಸದ್ದು ಮಾಡುತ್ತಿರೋದು ಯಾಕೆ? ಈ ಕುಡಿ ಮೀಸೆ ಹುಡುಗನ ಹಿನ್ನೆಲೆ ಏನು? ಆತನ ಸಾಧನೆ ಏನು? ತಿಳಿಯೋಣ.
ರಾವಣ್‌ ಅಂತಲೇ ಫೇಮಸ್‌ ಆಗಿರುವ ಚಂದ್ರಶೇಖರ್‌ ಆಜಾದ್‌ ಭಾರತದ ರಾಜಕೀಯ ಕ್ಷೇತ್ರದ ಹೊಸ ಸೆನ್ಸೇಷನ್‌. ಅತಿ ಹೆಚ್ಚು ಯುವ ಅಭಿಮಾನಿಗಳನ್ನು ಹೊಂದಿರುವ ಉತ್ತರಪ್ರದೇಶದ ಮೂವತ್ನಾಲ್ಕು ವರ್ಷದ ಚಂದ್ರಶೇಖರ್ ಆಜಾದ್ ರಾವಣ್ ಅವರು ಭೀಮ್ ಆರ್ಮಿಯ ನಾಯಕ. ದಲಿತರು ಶಿಕ್ಷಣದ ಮೂಲಕ ಬಡತನದಿಂದ ಪಾರಾಗಲು ಅನೇಕ ಶಾಲೆಗಳನ್ನು ಕಟ್ಟಿ ಅವರಿಗಾಗಿಯೇ ಮೀಸಲಿಟ್ಟು ವಿದ್ಯಾದಾನ ಮಾಡುತ್ತಿರುವ ಕ್ರಾಂತಿಕಾರಿ ಯುವಕ.

ಜಾತಿ ಆಧಾರಿತ ಹಿಂಸಾಚಾರದ ಸಂತ್ರಸ್ತರನ್ನು ರಕ್ಷಿಸಲು ಹಲವಾರು ಪ್ರತಿಭಟನೆಗಳು, ಹೋರಾಟಗಳನ್ನು ಬೃಹತ್ ಮಟ್ಟದಲ್ಲಿ ಕಟ್ಟುವ ಮೂಲಕ ಯುವಜನತೆಯ ಮನಸ್ಸನ್ನು ಗೆದ್ದಿರುವ ನಾಯಕ. ದಲಿತರ ನಾಯಕ ಎಂದೇ ಗುರುತಿಸಿಕೊಂಡಿರುವ ಅಜಾದ್ ರಾವಣ್ ಅವರು ಯು.ಪಿ ರಾಜ್ಯದ ಶರಣ್ ಪುರ್ ಜಿಲ್ಲೆಯಲ್ಲಿ ಜನಿಸಿದರು. ತಮ್ಮ ವಿಭಿನ್ನ ಹಾಗೂ ವಿಶೇಷ ಶೈಲಿಯಲ್ಲಿ ನಡೆಸಿರುವ ಎಷ್ಟೋ ಹೋರಾಟಗಳು ಅವರ ಹೆಸರನ್ನು ಇಂದಿಗೂ ಎಲ್ಲರಲ್ಲೂ ನೆನಪಾಗುವಂತೆ, ಗುನುಗುಡುವಂತೆ ಮಾಡಿದೆ.

ಉತ್ತರ ಪ್ರದೇಶದಲ್ಲಿ ೧೯ ವರ್ಷದ ಹತ್ರಾಸ್ ಎಂಬ ಯುವತಿ ಗ್ಯಾಂಗ್ ರೇಪ್ಗೆ ಒಳಗಾಗಿ, ದೆಹಲಿಯ ಆಸ್ಪತ್ರೆಯಲ್ಲಿ ಮೃತಪಟ್ಟಾಗ. ದೆಹಲಿಯಲ್ಲಿ ಆಜಾದ್ ಅವರು ತಮ್ಮ ಬೆಂಬಲಿಗರೊಡನೆ ದೊಡ್ಡ ಮಟ್ಟದ ಹೋರಾಟವನ್ನು ನಡೆಸುವ ಮೂಲಕ ಹತ್ರಾಸ್ ಸಾವಿಗೆ ಕಾರಣರಾದ ಆರೋಪಿಗಳನ್ನು ಸಾವಿಗೆ ಶರಣಾಗಿಸಬೇಕು ಎಂದು ಆಗ್ರಹಿಸಿ ಕಾನೂನಾತ್ಮಕವಾಗಿ ಅವರಿಗೆ ಸಾವಿನ ಶಿಕ್ಷೆಗೆ ಗುರಿಯಾಗಿಸಬೇಕು ಎಂದು ಹೋರಾಟ ಮಾಡುವಲ್ಲಿ ಪ್ರಮುಖರಾಗಿ ಕಾಣಿಸಿಕೊಂಡವರು.

ದೆಹಲಿ-ಗಝೀಪುರ್ ವಾರ್ಡ್ ನಲ್ಲಿ ಸಾವಿರಾರು ಆಝಾದ್ ಅವರ ಬೆಂಬಲಿಗರು ಸೇರಿದಂತೆ ರೈತರೊಟ್ಟಿಗೆ ಸೇರಿಕೊಂಡು, ರೈತರಿಗೆ ಎದುರಾದ ಹೊಸ ಕಾನೂನುಗಳನ್ನು ವಾಪಸ್ ಪಡೆಯುವಂತೆ ಮಾಡಿದರು. ರೈತರ ಬೆಂಗಾವಲಾಗಿ, ಬಡ ಕುಟುಂಬಗಳ ಕಣ್ಣಾಗಿ ನಿಂತು ಎಷ್ಟೋ ಹೋರಾಟಗಳಲ್ಲಿ ಜನರಿಗೆ ನ್ಯಾಯ ಒದಗಿಸಿಕೊಟ್ಟ ಆಝಾದ್ ರಾವಣ್ ಅವರು, ರಾಜಕೀಯ ಕ್ಷೇತ್ರದಲ್ಲೂ ಅಗಾಧವಾಗಿ ಗುರುತಿಸಿಕೊಂಡಿದ್ದಾರೆ.

ದಲಿತರಿಗೆ ಎಂದೇ ಒಂದು ಸಂಸ್ಥೆಯನ್ನು ಕಟ್ಟಿ ಅಲ್ಲಿ ಅವರಿಗೆ ವಿದ್ಯಾಭ್ಯಾಸವನ್ನು ಕೊಡುವ ಮೂಲಕ ಉಚಿತ ಶಿಕ್ಷಣವನ್ನು ಕಲ್ಪಿಸಿಕೊಟ್ಟಿದ್ದಾರೆ. ಭೀಮ್ ಆರ್ಮಿಯನ್ನು ಕಟ್ಟುವ ಮೂಲಕ ತಮ್ಮ ಜೀವನವನ್ನು ಬಲಿಷ್ಠವಾಗಿ ಪ್ರಾರಂಭಿಸಿದ ಆಝಾದ್ ರಾವಣ್ ಅವರು ಸಿಎಎ ವಿರುದ್ದ ಕೂಡ ಗುಡುಗಿದ್ದರು. ಈ ಪ್ರತಿಭಟನೆಗಾಗಿ ಕೆಲ ಕಾಲ ಜೈಲುವಾಸ ಕೂಡ ಅನುಭವಿಸಿದರು. ಯಾವುದೇ ಪೊಲೀಸ್ ಮತ್ತು ಕಾನೂನಿಗೆ ಹೆದರದೆ ಸಮಾಜದ ತೊಂದರೆಗಳ ವಿರುದ್ಧ ಪ್ರತಿಭಟನೆ ಮಾಡುವ ಮೂಲಕ ಹೊರಾಟ ನಡೆಸಿ ಜನರಿಗೆ ಹತ್ತಿರವಾಗಿ ಇಂದು ರಾಜಕೀಯ ಪ್ರವೇಶ ಕೂಡ ಮಾಡುತ್ತಿದ್ದಾರೆ.

ಕೇವಲ ನಾಲ್ಕು ವರ್ಷಗಳ ಹಿಂದೆ ಸ್ಥಾಪಿಸಲಾದ ಭೀಮ್ ಆರ್ಮಿ ಈಗ ಉತ್ತರ ಪ್ರದೇಶದ ದಲಿತರ ಸದಸ್ಯರಲ್ಲಿ ಜನಪ್ರಿಯ ಹೆಸರಾಗಿ ಉಳಿದಿದೆ. 18 ರಿಂದ 25 ವರ್ಷದೊಳಗಿನ ಯಾವುದೇ ದಲಿತರು ಘಟಕಕ್ಕೆ ಸೇರಲು ಸ್ವಾಗತ ಕೋರುತ್ತದೆ ಈ ತಂಡ. ಆಜಾದ್ ಅವರು ತಮ್ಮ ಗ್ರಾಮದ ಹೊರವಲಯದಲ್ಲಿ ‘ದಿ ಗ್ರೇಟ್ ಚಾಮರ್ಸ್ ಆಫ್ ಘಡ್ಖೌಲಿ ನಿಮಗೆ ಸ್ವಾಗತ’ ಎಂಬ ಬೋರ್ಡ್ ಅನ್ನು ಸ್ಥಾಪಿಸಿದ ನಂತರ ದಲಿತ ನಾಯಕರಾಗಿ ಬೆಳಕಿಗೆ ಬಂದು ನಿಂತವರು. ಪರಿಶಿಷ್ಟ ಜಾತಿಗಳ ಮೇಲಿನ ದೌರ್ಜನ್ಯದ ಹಿನ್ನೆಲೆಯಲ್ಲಿ ಸಹರಾನ್ಪುರದಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಉತ್ತರ ಪ್ರದೇಶ ಸರ್ಕಾರವು ಅವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್ಎಸ್ಎ) ಯನ್ನು ಜಾರಿಗೊಳಿಸಿತ್ತು.

ಇದಾರ ನಂತರ ಜೂನ್ 2017 ರಲ್ಲಿ ಆಜಾದ್ ಅವರನ್ನು ಬಂಧಿಸಲಾಗಿತ್ತು. ಅಜಾದ್ ಅವರು ಸೆಪ್ಟೆಂಬರ್ 2018 ರಲ್ಲಿ ಒಂದು ವರ್ಷದ ನಂತರ ಬಿಡುಗಡೆಯಾಗಿ ಹೊರಬಂದರು. ಅಜಾದ್ ಅವರು ಅಜಾದ್ ಸಮಾಜ್ ಪಾರ್ಟಿ ಸೃಷ್ಟಿಸಿ, ಇಂದು ಅನೇಕ ಸಮಾಜ ಕೆಲಸ ಕಾರ್ಯಗಳನ್ನು ಯಶಸ್ವಿಯತ್ತ ಸಾಗಿಸುತ್ತಿದ್ದಾರೆ. ಸದ್ಯ ದೇಶದ ನಾನಾ ಭಾಗಗಳಲ್ಲಿ ಯುವ ಜನತೆಯ ಅಭಿಮಾನ, ಪ್ರೀತಿಯನ್ನು ಸಂಪಾದಿಸಿರುವ ಚಂದ್ರಶೇಖರ್ ಅಜಾದ್ ರಾವಣ್ ಅವರು ಅದೇ ಜನರ ಬೆಂಬಲದಿಂದ ಖಡಕ್ ಆಗಿ ಉತ್ತರ ಪ್ರದೇಶದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ಅಧಿಕೃತ ಪ್ರಕಟಣೆಯನ್ನು ಹೊರಹಾಕಿದ್ದಾರೆ.

ಯಾರ ವಿರುದ್ದ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು ಭೀಮ್ ಆರ್ಮಿ ನಾಯಕ ಅಜಾದ್ ರಾವಣ್ ಅವರು ಕಣಕ್ಕಿಳಿಯಲಿದ್ದಾರೆ. ಅದು ಬೇರಾರೂ ಅಲ್ಲ ಉತ್ತರ ಪ್ರದೇಶದ ಫೈರ್ ಬ್ರಾಂಡ್ ಯೋಗಿ ಆದಿತ್ಯನಾಥ್ ಅವರ ವಿರುದ್ಧ. ಹೌದು, ಉತ್ತರಪ್ರದೇಶದ ಚುನಾವಣೆಯ ಅಖಾಡ ಇನ್ನೇನೂ ಕಾವೇರತೊಡಗಿದೆ. ಈ ಸಮಯದಲ್ಲಿ ಪಕ್ಷಾಂತರ ಪರ್ವ ಬಹು ಜೋರಾಗಿದ್ದು, ಬಿಜೆಪಿ, ಎಸ್ಪಿ, ಕಾಂಗ್ರೆಸ್ ಗೆಲುವನ್ನು ಅಳೆದು ತೂಗಿ ಹಲವು ನಾಯಕರು ತಮ್ಮ ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಜಿಗಿಯುತ್ತಿದ್ದಾರೆ.

ಉತ್ತರ ಪ್ರದೇಶದಲ್ಲಿ ಚುನಾವಣೆಯ ರಂಗು ಅನಾವರಣಾಗೊಳ್ಳುತ್ತಿದ್ದಂತೆ, ಭೀಮ್ ಆರ್ಮಿ ಅಧ್ಯಕ್ಷರಾದ ಚಂದ್ರಶೇಖರ್ ಆಜಾದ್ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ತೊಡೆ ತಟ್ಟಿದ್ದಾರೆ. ಹೌದು, ಉತ್ತರಪ್ರದೇಶದ ಗೋರಖ್ ಪುರ್ ನಲ್ಲಿ ಬಿಜೆಪಿ ಕಣಕ್ಕಿಳಿಸಿರುವ ಯೋಗಿ ಆದಿತ್ಯನಾಥ್ ವಿರುದ್ಧ ಸೆಣಸಾಡುವುದಾಗಿ ಆಜಾದ್ ರಾವಣ್ ಅವರು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಚಂದ್ರಶೇಖರ್ ಆಝಾದ್ ರಾವಣ್ ಅವರು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದು, ಚುನಾವಣೆ ಸ್ಪರ್ಧೆಯಲ್ಲಿ, ಹೇಗೆ ಪ್ರದರ್ಶನ ನೀಡುತ್ತಾರೆ ಎಂಬ ಕುತೂಹಲಗಳು ಕೆರಳಿವೆ.
ಈ ಮಧ್ಯೆ ಮುಲಾಯಂ ಸಿಂಗ್ ಅವರ ಸಂಬಂಧಿ ಪ್ರಮೋದ್ ಗುಪ್ತಾ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಒಂದು ದಿನದ ಹಿಂದಷ್ಟೇ ಮುಲಾಯಂ ಸಿಂಗ್ ಅವರ ಸೊಸೆ ಅಪರ್ಣಾ ಯಾದವ್ ಬಿಜೆಪಿ ಪಡೆಗೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ. ಹೀಗಾಗಿ, ಉತ್ತರ ಪ್ರದೇಶ ರಾಜಕೀಯ ಕಣದಲ್ಲಿ ಆರ್ಭಟ ಜೋರಾಗಿಯೇ ಸದ್ದು ಮಾಡಲು ಪ್ರಾರಂಭಿಸಿದ್ದು,, ಲಾಭ-ನಷ್ಟ ಲೆಕ್ಕಾಚಾರದಲ್ಲಿ ಪಕ್ಷಗಳಿಗೆ ಜಿಗಿಯಲು ತುದಿಗಾಲಲ್ಲಿ ನಿಂತಿದ್ದಾರೆ.

Exit mobile version