ಕಲ್ಲಿದ್ದಲು ಕೊರತೆ ಬಗ್ಗೆ ಕೇಂದ್ರಕ್ಕೆ ರಾಜ್ಯ ಸರ್ಕಾರಗಳ ಮೊರೆ, ಮುಖ್ಯಮಂತ್ರಿ ನಿವಾಸದಲ್ಲೂ ಪವರ್ ಕಟ್

ನವದೆಹಲಿ ಅ 13 : ದೇಶದಲ್ಲಿ ಕಲ್ಲಿದ್ದಲು ಕೊರತೆ ಎದುರಾಗುತ್ತಿದ್ದಂತೆ ರಾಜ್ಯಗಳಲ್ಲಿ ವಿದ್ಯುತ್‌ ಕಡಿತದ ಭೀತಿ ಆವರಿಸಿಕೊಳ್ಳತ್ತಿದೆ. ಕೇಂದ್ರ ಸರ್ಕಾರದ ಭರವಸೆಯ ಹೊರತಾಗಿಯೂ ಹಲವು ರಾಜ್ಯಗಳು ಕಳವಳ ವ್ಯಕ್ತಪಡಿಸಿವೆ. ಹೀಗಾಗಿ ತಕ್ಷಣಕ್ಕೆ ಪೂರೈಕೆ ಹೆಚ್ಚದೇ ಹೋದಲ್ಲಿ, ಹಲವು ರಾಜ್ಯಗಳಲ್ಲಿ ಲೋಡ್‌ಶೆಡ್ಡಿಂಗ್‌ ಅನಿವಾರ್ಯವಾಗಲಿದೆ ಎಂದು ಹೇಳಿವೆ.

ಕಲ್ಲಿದ್ದಲು ಕೊರತೆಯಿಂದರಾಜ್ಯದಲ್ಲಿ 3-4 ಗಂಟೆ ವಿದ್ಯುತ್‌ ಕಡಿತ ಮಾಡಲಾಗುತ್ತಿದೆ ಎಂದು ಪಂಜಾಬ್‌ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ ಹೇಳಿದ್ದಾರೆ. ಉತ್ತರ ಪ್ರದೇಶಕ್ಕೆ ಅಗತ್ಯವಿರುವ ಕಲ್ಲಿದ್ದಲು ಪೂರೈಕೆ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಉತ್ತರ ಪ್ರದೇಶ ಪವರ್‌ ಕಾರ್ಪೋರೇಶನ್‌ ಚೇರ್‌ಮನ್‌ಗೆ ಯೋಗಿ ಆದಿತ್ಯನಾಥ್‌ ಸೂಚನೆ ನೀಡಿದ್ದಾರೆ. ಹಾಗೆಯೇ ಸಾಯಂಕಾಲ 6 ರಿಂದ ಬೆಳಿಗ್ಗೆ 7ರವೆರೆಗೆ ವಿದ್ಯುತ್‌ ವ್ಯತ್ಯಯವಾಗದಂತೆ ನೋಡಿಕೊಳ್ಳಲು ತಿಳಿಸಿದ್ದಾರೆ. ಹೆಚ್ಚಿನ ವಿದ್ಯುತ್‌ ಖರೀದಿಗೆ ಕಳೆದ 5 ದಿನಗಳಿಂದ ಬಿಹಾರ 90 ಕೋಟಿ ರು. ವೆಚ್ಚ ಮಾಡಿರುವುದಾಗಿ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಹೇಳಿದ್ದಾರೆ.

ಛತ್ತೀಸ್‌ಗಢ ತನ್ನ ರಾಜ್ಯದ ವಿದ್ಯುತ್‌ ಕೊರತೆ ನೀಗಿಸಲು ಪ್ರತಿದಿನ 29,500 ಮೆಟ್ರಿಕ್‌ ಟನ್‌ ಕಲ್ಲಿದ್ದಲಿನ ಅವಶ್ಯಕತೆ ಇದೆ ಆದರೆ ಅಷ್ಟುಪ್ರಮಾಣದ ಪೂರೈಕೆ ಇಲ್ಲ ಹಾಗಾಗಿ ವಿದ್ಯುತ್‌ ಕಡಿತ ಮಾಡಬೇಕಾದ ಭೀತಿ ಎದುರಾಗಿದೆ ಎಂದು ಹೇಳಿದೆ. ರಾಜಸ್ಥಾನದಲ್ಲಿ ಕಲ್ಲಿದ್ದಲು ಕೊರತೆಯಿಂದಾಗಿ ಪ್ರತಿದಿನ ಒಂದು ಗಂಟೆ ವಿದ್ಯತ್‌ ಕಡಿತ ಮಾಡುತ್ತಿರುವುದಾಗಿ ಸರ್ಕಾರ ಹೇಳಿದೆ. ಇದರ ಜೊತೆಗೆ ಆಂಧ್ರಪ್ರದೇಶ, ಮಧ್ಯಪ್ರದೇಶ, ಜಾರ್ಖಂಡ್‌, ದೆಹಲಿ, ಗುಜರಾತ್‌ ಹಾಗೂ ಹರ್ಯಾಣ ರಾಜ್ಯಗಳ ಮುಖ್ಯಮಂತ್ರಿಗಳೂ ಸಹ ಕಲ್ಲಿದ್ದಲು ಪೂರೈಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಇನ್ನು ಕಲ್ಲಿದ್ದಲು ಪೂರೈಕೆ ಹೆಚ್ಚಳವಾಗದಿದ್ದರೆ ಲೋಡ್‌ ಶೆಡ್ಡಿಂಗ್‌ ಅನಿವಾರ್ಯ ಎಂದು ಕೇರಳ ಸರ್ಕಾರ ಹೇಳಿದೆ.

ದೇಶದಲ್ಲಿ ಈಗ ಎದುರಾಗಿರುವ ಕಲ್ಲಿದಲು ಕೊರತೆಗೆ ಸರ್ಕಾರವು ಹಲವು ಕಾರಣಗಳನ್ನು ಮುಂದಿಡುತ್ತಿದೆ. ಮುಖ್ಯವಾಗಿ ಭಾರಿ ಮಳೆಯಿಂದ ಕಲ್ಲಿದ್ದಲು ಗಣಿಗಳು ಕೆಲಸ ಮಾಡುತ್ತಿಲ್ಲ ಮತ್ತು ವಿದ್ಯುತ್‌ನ ಬೇಡಿಕೆ ಹೆಚ್ಚಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಈಗಿನ ಪರಿಸ್ಥಿತಿಗೆ ಸರ್ಕಾರವು ಮೂರು ಪ್ರಮುಖ ಕಾರಣಗಳನ್ನು ನೀಡಿದೆ.

1. ಹೆಚ್ಚು ಮಳೆ

ಈ ಸಾಲಿನ ಮುಂಗಾರಿನ ಅವಧಿ ದೀರ್ಘವಾಗಿದೆ. ಮುಂಗಾರಿನ ಅವಧಿಯಲ್ಲಿ ಎಷ್ಟೋ ದಿನ ಕಲ್ಲಿದ್ದಲು ಗಣಿಗಳು ಕಾರ್ಯನಿರ್ವಹಿಸಿಲ್ಲ, ಆ ಅವಧಿಯಲ್ಲಿ ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲನ್ನು ಪೂರೈಸಿಲ್ಲ, ಆದರೆ ಅದೇ ಅವಧಿಯಲ್ಲಿ ಸ್ಥಾವರಗಳು ತಮ್ಮಲ್ಲಿದ್ದ ಕಲ್ಲಿದ್ದಲಿನ ಸಂಗ್ರಹವನ್ನು ಬಳಕೆ ಮಾಡಿಕೊಂಡಿವೆ. ಅಲ್ಲಿನ ಸಂಗ್ರಹ ಮುಗಿಯುತ್ತಾ ಬಂದಿದೆ. ಆದರೆ ನಿರೀಕ್ಷಿತ ಅವಧಿಯಲ್ಲಿ ಕಲ್ಲಿದ್ದಲು ಗಣಿಗಳು ಕಾರ್ಯಾರಂಭ ಮಾಡದೇ ಇದ್ದ ಕಾರಣ ಕಲ್ಲಿದ್ದಲು ಪೂರೈಕೆ ಪೂರ್ಣ ಪ್ರಮಾಣದಲ್ಲಿ ಆರಂಭವಾಗಿರಲಿಲ್ಲ. ಹೀಗಾಗಿ ಸ್ಥಾವರಗಳಲ್ಲಿ ಕಲ್ಲಿದ್ದಲು ಕೊರತೆಯಾಗಿದೆ. ಎಂದು ಸರ್ಕಾರವು ಹೇಳಿದೆ.

2. ಅಮದು ಸಮಸ್ಯೆ

ಜಾಗತಿಕ ಮಟ್ಟದಲ್ಲಿ ಕಲ್ಲಿದ್ದಲಿನ ಸಮಸ್ಯೆಇದ್ದು. ಚೀನಾ, ಆಫ್ರಿಕಾ ಮತ್ತು ದಕ್ಷಿಣ ಅಮೆರಿಕದ ಕಲ್ಲಿದ್ದಲು ಗಣಿಗಳಲ್ಲಿ ಉತ್ಪಾದನೆ ಕಡಿಮೆಯಾಗಿದೆ. ಹೀಗಾಗಿ ವಿಶ್ವದ ಹಲವು ದೇಶಗಳಿಗೆ ಕಲ್ಲಿದ್ದಲಿನ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಭಾರತವೂ ಕಲ್ಲಿದ್ದಲನ್ನು ಹಲವು ದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ಆದರೆ ಕಲ್ಲಿದ್ದಲಿನ ಕೊರತೆ ಇರುವ ಕಾರಣ, ಭಾರತಕ್ಕೂ ಕಲ್ಲಿದ್ದಲು ಅಮದು ಅಗುವಲ್ಲಿ ವ್ಯತ್ಯಯಾವಾಗಿದೆ.

3. ಅತಿಯಾದ ಬೇಡಿಕೆ

ಕೋವಿಡ್ ಬಳಿಕ  ಬಹುತೇಕ ಎಲ್ಲಾ ಕಂಪನಿ, ಕಾರ್ಖಾನೆಗಳು ಕಾರ್ಯಾರಂಭ ಮಾಡಿವೆ ಹೀಗಾಗಿ ಬೇಡಿಕೆ ಹೆಚ್ಚಿದೆ.

ದೇಶದಾದ್ಯಂತ ಹಲವು ಪವರ್ ಸ್ಟೇಷನ್‌ಗಳಲ್ಲಿ ಕಲ್ಲಿದ್ದಲು ಕೊರತೆ ಎದುರಾಗಿದೆ. ಈ ಹಿನ್ನೆಲೆ ರಾಜ್ಯದ ಎರಡು ಜಿಲ್ಲೆಗಳ ಪವರ್ ಸ್ಟೇಷನ್‌ಗಳಲ್ಲಿ ಬಹುತೇಕ ವಿದ್ಯುತ್ ಉತ್ಪಾದನೆ ಕಡಿಮೆಯಾಗಿದೆ. ಮಳೆಯ ಕಾರಣದಿಂದ ಕಲ್ಲಿದ್ದಲು ಪೂರೈಕೆಯಲ್ಲಿ ವ್ಯತ್ಯಯವಾಗಿದೆ ಎಂದು ಕೆಲವರು ಹೇಳಿದರೆ.. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಲ್ಲಿದ್ದಲಿನ ಬೆಲೆ ಏರಿಕೆಯಾಗಿದ್ದು ಅಮದು ಕಡಿಮೆಯಾಗಿದೆ ಎಂದು ಕೆಲವರು ಹೇಳಿದ್ದಾರೆ. ಈ ಮಧ್ಯೆ ಸಿಎಂ ದೆಹಲಿಗೆ ತೆರಳಿದಾಗ ಕಲ್ಲಿದ್ದಲು ಸಚಿವರನ್ನ ಭೇಟಿಯಾಗಿ ಅಗತ್ಯ ಕಲ್ಲಿದ್ದಲು ಪೂರೈಕೆ ಮಾಡುವಂತೆ ಮನವಿ ಮಾಡಿ ಬಂದಿದ್ದಾರೆ. ಇನ್ನು ಕೇಂದ್ರ ಸರ್ಕಾರ ಕಲ್ಲಿದ್ದಲು ಪೂರೈಕೆ ಬಗ್ಗೆ ಗಮನಹರಿಸುವುದಾಗಿ ಹೇಳಿದ್ದಾರೆ ಎನ್ನಲಾಗಿದೆ

ಮುಖ್ಯಮಂತ್ರಿ ನಿವಾಸದಲ್ಲೂ ಪವರ್ ಕಟ್ : ಕಲ್ಲಿದ್ದಲು ಕೊರತೆಯಿಂದ ಕೆಲವೆಡೆ ಅನಧಿಕೃತವಾಗಿ ಲೋಡ್ ಶೆಡ್ಡಿಂಗ್ ಮಾಡಲಾಗಿದೆ ಎಂಬ ಮಾಹಿತಿ ಇದೆ. ಇದರಿಂದ ಸಿಎಂ ಗೃಹ ಕಚೇರಿ ಕೃಷ್ಣಾ ಹಾಗೂ ಯಡಿಯೂರಪ್ಪ ನಿವಾಸ ಇರೋ ರಸ್ತೆಯಲ್ಲೂ ಪವರ್ ಕಟ್ ಆಗಿದೆ. ಹೀಗಾಗಿ ಸಿಎಂ ನಿವಾಸ ಕುಮಾರ ಕೃಪಾ ರಸ್ತೆಗೂ ಲೋಡ್ ಶೆಡ್ಡಿಂಗ್‌ನ ಬಿಸಿ ತಟ್ಟಿದಂತಾಗಿದೆ.

Exit mobile version