ಬೆಂಗಳೂರು ಡಿ 31 : ಇತ್ತೀಚಿನ ದಿನಗಳಲ್ಲಿ ಹಲವು ವಿವಾದಗಳಿಂದ ಸದ್ದು ಮಾಡುತ್ತಿರುವ ಸಂಗೀತ ನಿರ್ದೇಶಕ ಹಂಸಲೇಖ ಕಾಂಗ್ರೆಸ್ ಹಮ್ಮಿಕೊಂಡಿರುವ ಮೇಕೆದಾಟು ಯೋಜನೆಯ ಹೋರಾಟಕ್ಕೂ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ. ಈ ವಿಚಾರವಾಗಿ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಅವರು ಗುರುವಾರ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಗೆ ಭೇಟಿಯನ್ನು ನೀಡಿದ್ದರು. ಈಗ ಇದೇ ವಿಚಾರವಾಗಿ ಹೊಸದೊಂದು ವಿಷಯವು ಎಲ್ಲರ ಗಮನವನ್ನು ಸೆಳೆದಿದೆ. ಹೌದು ನಾದಬ್ರಹ್ಮ ಖ್ಯಾತಿಯ ಸಂಗೀತ ನಿರ್ದೇಶಕ ಹಂಸಲೇಖ ಅವರು ಕಾಂಗ್ರೆಸ್ ಗೆ ಸಾಥ್ ನೀಡುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ ಹಂಸಲೇಖ ಅವರಿಗೆ ಪಾದಯಾತ್ರೆಗೆ ಸಾಥ್ ನೀಡಲು ನೀಡಿದ ಆಹ್ವಾನವನ್ನು ಹಂಸಲೇಖ ಅವರು ಕೂಡ ಒಪ್ಪಿಕೊಂಡಿದ್ದಾರೆ ಅವರು ಮೇಕೆದಾಟು ಪಾದಯಾತ್ರೆ ಕುರಿತಾಗಿ ಎರಡು ಹಾಡುಗಳನ್ನು ಕೂಡಾ ಬರೆಯುವುದಾಗಿ ಹೇಳಿದ್ದಾರೆ ಎಂಧು ತಿಳಿದುಬಂದಿದೆ. ಕಾಂಗ್ರೆಸ್ ಏರ್ಪಡಿಸಿರುವ ಈ ಪಾದಯಾತ್ರೆಗೆ ಚಿತ್ರರಂಗದ ಇನ್ನೂ ಹಲವರು ಆಗಮಿಸುವುದಾಗಿ ತಿಳಿದುಬಂದಿದೆ
ಕಾಂಗ್ರೆಸ್ ಪಕ್ಷವು ಈ ಪಾದಯಾತ್ರೆಗೆ ಕನ್ನಡದ ಎಲ್ಲಾ ಸ್ಟಾರ್ ನಟರನ್ನೂ ಸಹಾ ಆಹ್ವಾನ ಮಾಡಲು ನಿರ್ಧಾರವೊಂದನ್ನು ಮಾಡಿದ್ದು, ಈ ಹೊಣೆಗಾರಿಕೆಯನ್ನು ಹಿರಿಯ ಕಲಾವಿದರಾದ ಉಮಾಶ್ರೀ, ಜಯಮಾಲಾ ಹಾಗೂ ಮುಖ್ಯಮಂತ್ರಿ ಚಂದ್ರು ಅವರಿಗೆ ವಹಿಸಲಾಗಿದೆ ಎನ್ನಲಾಗಿದೆ. ಅದಾದ ನಂತರ ಸ್ವತಃ ಡಿ.ಕೆ.ಶಿವಕುಮಾರ್ ಅವರೇ ನಟರಿಗೆ ಆಹ್ವಾನವನ್ನು ನೀಡಲಿದ್ದಾರೆ ಎಂದು ತಿಳಿದುಬಂದಿದೆ.