ಬೆಂಗಳೂರು, ಮೇ. 15: ಮಹಾಮಾರಿ ಕೊರೊನಾ ಸೋಂಕಿನಿಂದ ಸಂಕಷ್ಟದಲ್ಲಿರುವ ಚಿತ್ರರಂಗದ ಕಾರ್ಮಿಕರಿಗೆ ನೆರವಾಗಿದ್ದ ರಿಯಲ್ ಸ್ಟಾರ್ ಉಪೇಂದ್ರ ಇದೀಗ ರೈತರಿಗೂ ತಮ್ಮ ಸಹಾಯ ಹಸ್ತ ಚಾಚಿದ್ದಾರೆ.
ಕೋವಿಡ್ ಸಂಕಷ್ಟದಲ್ಲಿದ್ದ ಕನ್ನಡ ಚಿತ್ರರಂಗದ 3 ಸಾವಿರ ಕಾರ್ಮಿಕರಿಗೆ ದಿನಸಿ ಕಿಟ್ ನೀಡಿದ್ದ ನಟ ಉಪೇಂದ್ರ, ಲಾಕ್ ಡೌನ್ ಹಿನ್ನೆಲೆಯಲ್ಲಿ ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದ ಕುಟುಂಬದವರಿಗೆ ನೆರವಾಗಿದ್ದರು. ಆದರೆ ಇದೀಗ ಕೊರೊನಾ ಸಂಕಷ್ಟದಲ್ಲಿರುವ ರೈತರ ನೆರವಿಗೆ ಮುಂದಾಗಿರುವ ಉಪೇಂದ್ರ, ರೈತರಿಗೂ ತಮ್ಮ ಸಹಾಯ ಹಸ್ತ ಚಾಚಿದ್ದಾರೆ.
ಉಪೇಂದ್ರ ಅವರ ಸಮಾಜ ಸೇವೆಗೆ ಅಪಾರ ಪ್ರಶಂಸೆ ಹಾಗೂ ಬೆಂಬಲ ವ್ಯಕ್ತವಾಗಿತ್ತು. ಇದರಿಂದ ಸ್ಫೂರ್ತಿಗೊಂಡಿರುವ ಉಪೇಂದ್ರ ಅವರು ಕೋವಿಡ್ ಸಂಕಷ್ಟದಲ್ಲಿರುವ ರೈತರು ಬೆಳೆದ ಆಹಾರ ಪದಾರ್ಥಗಳನ್ನು ಖರೀದಿಸಲು ನಿರ್ಧರಿಸಿದ್ದಾರೆ.
ಈ ರೀತಿ ಖರೀದಿಸಿದ ಆಹಾರ ಪದಾರ್ಥಗಳನ್ನು ಅಗತ್ಯವಿರುವವರಿಗೆ ಹಂಚಲಾಗುವುದು ಎಂದು ಘೋಷಿಸಿದ್ದಾರೆ. ಈ ಕುರಿತು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಪೋಸ್ಟ್ ಹಾಕಿದ್ದು, ರೈತರು ತಮ್ಮ ಆಹಾರ ಪದಾರ್ಥಗಳನ್ನು ಮಾರಾಟ ಮಾಡಲು 9845763396ಗೆ ಕರೆ ಮಾಡಲು ಹೇಳಿದ್ದಾರೆ.