ಬೆಂಗಳೂರು, ಫೆ. 08: ಕೊರೊನಾ ಮಹಾಮಾರಿಯಿಂದಾಗಿ ಸಾಕಷ್ಟು ಸಂಕಷ್ಟ ಎದುರಾಗಿದೆ. ವೈದ್ಯರು, ಆರೋಗ್ಯ ಸಿಬ್ಬಂದಿ ಜೀವ ಪಣಕ್ಕಿಟ್ಟು ಸೇವೆ ಸಲ್ಲಿಸಿದ್ದಾರೆ. ಭವಿಷ್ಯದಲ್ಲಿ ಹೇಗೆ ಎಚ್ಚರವಾಗಿರಬೇಕು ಎಂಬುದನ್ನು ಕಲಿಸಿದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದರು.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 23ನೇ ಘಟಿಕೋತ್ಸವ ಭಾಷಣದಲ್ಲಿ ಮಾತನಾಡಿದ ಅವರು, ವಿಶ್ವದ ಆರೋಗ್ಯ ಕ್ಷೇತ್ರ ಕೊರೊನಾದಿಂದ ತಲ್ಲಣಗೊಂಡಿದ್ದು, ಕೊರೊನೊತ್ತರದ ವೇಳೆ ಸಾರ್ವಜನಿಕ ಆರೋಗ್ಯ ಕ್ಷೇತ್ರದ ಸುಧಾರಣೆಯೊಂದಿಗೆ ಬಲಪಡಿಸುವ ಅವಶ್ಯಕತೆ ಇದೆ. ದೇಶದ ವೈದ್ಯರು ಸೇರಿದಂತೆ ಅರೆವೈದ್ಯಕೀಯ ಸಿಬ್ಬಂದಿ ವರ್ಗವು ಕೊರೊನಾ ಸಾಂಕ್ರಾಮಿಕವನ್ನು ಸವಾಲಾಗ ಸ್ವೀಕರಿಸಿದ್ದು, ದೇಶದ ಜನತೆಯ ಪ್ರಾಣವನ್ನುಉಳಿಸಿದ್ದಾರೆ. ಭವಿಷ್ಯದಲ್ಲಿ ಈ ರೀತಿಯಾದ ಸಾಂಕ್ರಾಮಿಕಗಳನ್ನು ಸಮರ್ಪಕವಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಅವಶ್ಯಕತೆ ಇದೆ ಎಂದರು.
ಸಾರ್ವಜನಿಕರ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಮನ್ನಣೆ ನೀಡಬೇಕಿದೆ. ವಿದ್ಯಾರ್ಥಿ ಜೀವನ ಇಲ್ಲಿಗೆ ಮುಗಿಯುವುದಿಲ್ಲ. ಆರೋಗ್ಯ ಕ್ಷೇತ್ರದ ಹೊಸ ಬೆಳವಣಿಗೆಗೆ ಸಹಕರಿಸಿ, ಸಂಶೋಧನೆಗಳ ಮೂಲಕ ಕೊರೊನಾದಂತಹ ವೈರಸ್ ಗಳನ್ನು ತಕ್ಷಣವೇ ನಿವಾರಣೆ ಮಾಡುವಂತೆ ಅಧ್ಯಯನ ನಡೆಸಿ ಎಂದು ಸಲಹೆ ನೀಡಿದ ಅವರು, ಎಲ್ಲಾ ಕ್ಷೇತ್ರದಲ್ಲೂ ಕೂಡಾ ಮಹಿಳೆಯರು ಉತ್ತಮವಾದ ಸಾಧನೆಗೈದಿದ್ದಾರೆ. ಭವಿಷ್ಯದಲ್ಲೂ ಕೂಡಾ ಮಹಿಳೆಯರು ಎಲ್ಲಾ ಕ್ಷೇತ್ರವನ್ನು ಮುನ್ನಡೆಸಲಿದ್ದಾರೆ. ಕೊರೊನಾ ನಿಯಂತ್ರಣದ ವೇಳೆ ಆತ್ಮನಿರ್ಭರ ಭಾರತ ಪರಿಕಲ್ಪನೆಯಡಿ ವ್ಯಾಕ್ಸಿನ್ ಸಂಶೋಧನೆಯೊಂದಿಗೆ ವಿದೇಶಗಳಿಗೂ ಕೂಡಾ ಲಸಿಕೆಗಳನ್ನು ನೀಡುತ್ತಿದ್ದೇವೆ. ಜ್ಞಾನಾಧಾರಿತ ವೈದ್ಯಕೀಯ ಕ್ಷೇತ್ರದಲ್ಲಿ ಭಾರತ ಮುಂಚೂಣಿಯಲ್ಲಿದೆ ಎಂದು ಹೇಳಿದರು.
I am told that out of the 111 gold medal winners of this convocation, 87 are our daughters. This is almost 80% and is a tremendous achievement. I am happy that women are leading our country into the future in all fields including medical sciences. pic.twitter.com/Bvzn5JhQkv
— President of India (@rashtrapatibhvn) February 7, 2021