ಸಿಲಿಂಡರ್‌ ಬಾಂಬ್‌ !! ಯಾವಾಗ ಬೇಕಾದ್ರೂ ಸ್ಫೋಟಿಸಬಹುದು. ದಂಧೆಕೋರರ ಭಯಾನಕತೆ ಬಯಲು ಮಾಡಿತು ವಿಜಯಟೈಮ್ಸ್‌

COVER STORY EPISODE | ಟೈಂ ಬಾಂಬ್‌!  Cylinder bomb !!

ಸ್ಫೋಟ…. ಧ್ವಂಸ…. ಭಯಾನಕತೆ……. ಸಾವು…… ನೋವು. ಎಂಥಾ ಭಯಾನಕ ದೃಶ್ಯ ಅಲ್ವಾ ಇದು ಯಾವುದೇ ಬಾಂಬ್‌ ಸ್ಫೋಟದ ವಿಷುವಲ್‌ ಅಲ್ಲ. ಇದು ನಾವು ನಿತ್ಯ ಬಳಸೋ ಗ್ಯಾಸ್‌ ಸಿಲಿಂಡರ್ ಸ್ಫೋಟಗೊಂಡ ದೃಶ್ಯ. ಒಂದು ಸಣ್ಣ ಬೆಂಕಿ ಕಿಡಿ, ಇಡೀ ಏರಿಯಾವನ್ನೇ ಸುಟ್ಟು ಭಸ್ಮ ಮಾಡಿದೆ. ಒಂದು ಸಣ್ಣ ತಪ್ಪು ಅನೇಕರ ಪ್ರಾಣಕ್ಕೆ ಕುತ್ತು ತಂದಿದೆ.

ಗ್ಯಾಸ್‌ ಸಿಲಿಂಡರಿನ ಬಳಕೆಯ ವೇಳೆ ತುಂಬಾನೇ ಕೇರ್‌ಫುಲ್‌ ಆಗಿರಬೇಕು. ಇಲ್ಲದಿದ್ರೆ ಭಾರೀ ಅಪಾಯ ಕಟ್ಟಿಟ್ಟ. ಅದಕ್ಕಾಗಿಯೇ ಗ್ಯಾಸ್‌ ಸಿಲಿಂಡರ್‌ ಬಳಕೆ, ಸಂಗ್ರಹಣೆಗೆ ಕಟ್ಟು ನಿಟ್ಟಿನ ನಿಯಮಗಳನ್ನು ರೂಪಿಸಲಾಗಿದೆ. ಯಾರೂ ಬೇಕಾದ್ರೂ, ಎಷ್ಟು ಬೇಕಾದ್ರೂ ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್‌ ಮಾರುವ ಹಾಗಿಲ್ಲ. ಅಕ್ರಮ ಗ್ಯಾಸ್‌ ಸಿಲಿಂಡರ್‌ ಸಂಗ್ರಹಣೆ ಕಾನೂನು ಪ್ರಕಾರ ಅಪರಾಧ.

ಆದ್ರೆ ನಮ್ಮ ರಾಜ್ಯದಲ್ಲಿ ಕಾನೂನನ್ನ ಕಾಲಕಸ ಮಾಡಿ, ಜನರೇ ಪ್ರಾಣಕ್ಕೇ ಕುತ್ತು ತರೋ ಭಯಾನಕ ದಂಧೆಯೊಂದು ನಡೀತಿದೆ. ಆ ದಂಧೆ ಯಾವಾಗ ಬೇಕಾದ್ರೂ ಬಾಂಬ್ ಆಗಿ ಸ್ಫೋಟಗೊಳ್ಳಬಹುದು. ಅನೇಕರ ಪ್ರಾಣಕ್ಕೆ ಕುತ್ತು ಆಗಬಹುದು ಅನ್ನೋ ಮಾಹಿತಿ ವಿಜಯಟೈಮ್ಸ್‌ನ ಕವರ್‌ಸ್ಟೋರಿ ತಂಡಕ್ಕೆ ಸಿಕ್ತು. ಆ ಮಾಹಿತಿಯ ಬೆನ್ನತ್ತಿ ಹೊರಟ ನಮ್ಮ ತಂಡಕ್ಕೆ ಕಾದಿತ್ತು ಶಾಕ್‌.

ಇದು ಚಿತ್ರದುರ್ಗ ತಾಲ್ಲೂಕಿನ ಹಿರಿಯೂರಿನ ದೃಶ್ಯ. ಗ್ಯಾಸ್‌ ಏಜೆನ್ಸಿಯವರೇ ಗ್ರಾಹಕರಿಗೆ ಎಂಥಾ ದೋಖಾ ಮಾಡ್ತಿದ್ದಾರೆ ನೋಡಿ. ಗ್ರಾಹಕರಿಗೆ ಕೊಡಬೇಕಾದ ಗ್ಯಾಸ್‌ ಸಿಲಿಂಡರ್‌ನಿಂದ ಅಕ್ರಮವಾಗಿ ಗ್ಯಾಸ್‌ ಕದ್ದು ಬೇರೆಯವರಿಗೆ ಮಾರಾಟ ಮಾಡ್ತಿದ್ದಾರೆ. ಆದ್ರೆ ಸಿಲಿಂಡರ್‌ ಖರೀದಿಸೋ ಗ್ರಾಹಕರಿಗೆ ಇದೆಲ್ಲಾ ಗೊತ್ತೇ ಆಗಲ್ಲ.

ಇದಕ್ಕಿಂತಲೂ ಭಯಾನಕವಾದ ವಿಚಾರ ಅಂದ್ರೆ, ಈ ಗ್ಯಾಸ್‌ ಏಜೆನ್ಸಿ ಸಿಬ್ಬಂದಿ ಅನಿಲವನ್ನು ಯಾವುದೇ ಮುನ್ನೆಚ್ಚರಿಕೆ ಇಲ್ಲದೆ ಅಕ್ರಮವಾಗಿ ಫೀಲ್ಲಿಂಗ್ ಮಾಡ್ತಿದ್ದಾನೆ. ನೀವು ದೃಶ್ಯದಲ್ಲಿ ಕಾಣಬಹುದು, ಈತನ ಎಡ ಮತ್ತು ಬಲಕ್ಕೆ ಸಿಲಿಂಡರ್‌ ತುಂಬಿದ ಲಾರಿ ನಿಂತಿವೆ. ಅಲ್ಲದ ಲಾರಿಯ ಪೆಟ್ರೋಲ್‌ ಟ್ಯಾಂಕ್‌ ಪಕ್ಕದಲ್ಲೇ ಈ ಅಕ್ರಮ ಕೆಲಸ ಮಾಡ್ತಿದ್ದಾನೆ. ಸಂದರ್ಭದಲ್ಲಿ ಒಂದು ಸಣ್ಣ ಬೆಂಕಿಯ ಕಿಡಿ ಬಿದ್ರೂ ಸಾಕು, ಗ್ಯಾಸ್‌ ಸ್ಫೋಟಗೊಂಡು ಇಡೀ ಪ್ರದೇಶ ಸುಟ್ಟು ಕರಕಲಾಗಬಹುದು.

ಒಂದು ಕಡೆ ಗ್ರಾಹಕರಿಗೆ ಗ್ಯಾಸ್‌ನಲ್ಲಿ ಮೋಸ. ಮತ್ತೊಂದು ಕಡೆ ಜನರ ಪ್ರಾಣದ ಜೊತೆ ಚಲ್ಲಾಟ.  ನಮ್ಮ ಕಾರ್ಯಾಚರಣೆಯನ್ನು ರಾಜಧಾನಿ ಬೆಂಗಳೂರಿನಲ್ಲಿ ಮುಂದುವರೆಸಿದ್ವಿ. ಬೆಂಗಳೂರಿನ ಬೊಮ್ಮನಹಳ್ಳಿಯ ಮಂಗಮ್ಮನ ಪಾಳ್ಯದಲ್ಲಿ ಮನೆಗಳ ಮಧ್ಯೆಯೇ ಅಕ್ರಮ ಗ್ಯಾಸ್‌ ಫಿಲ್ಲಿಂಗ್‌ ದಂಧೆ ನಡೀತಿರೋ ಮಾಹಿತಿ ಲಭ್ಯವಾಯಿತು. ಮಾಹಿತಿಯ ಬೆನ್ನು ಹತ್ತಿ ನಾವು ಆ ಜಾಗಕ್ಕೆ ಹೊರಟೇ ಬಿಟ್ವಿ. ಈ ಅಕ್ರಮ ದಂಧೆ ಮಂಗಮ್ಮನ ಪಾಳ್ಯದ ಗಲ್ಲಿಯೊಳಗೆ ನಡೀತಿದೆ. ಈ ದಂಧೆ ನಡೆಸುತ್ತಿರುವುದು ಅಕ್ಬರ್‌ ಅನ್ನೋ ವ್ಯಕ್ತಿ.

ನಾವು ಮೊದಲು ಈ ದಂಧೆ ನಡೀತಿರೋದಕ್ಕೆ ಸಾಕ್ಷ್ಯ ಸಂಗ್ರಹಿಸಲು ಗ್ಯಾಸ್‌ ಖರೀದಿಸುವವರ ವೇಷ ಧರಿಸಿ, ಗ್ಯಾಸ್‌ ಸಿಲಿಂಡರ್‌ ಹಿಡ್ಕೊಂಡು ಆ ಜಾಗಕ್ಕೆ ತೆರಳಿದ್ವಿ. ಅಲ್ಲಿ ಒಂದು ಮನೆಯೊಳಗೆ ಈ ದಂಧೆ ಬಿಂದಾಸಾಗಿ ನಡೀತಿದೆ. ಯಾವುದೇ ಭಯ ಆತಂಕ ಇಲ್ಲದೆ ಬಂದವರಿಗೆಲ್ಲಾ ಇಲ್ಲಿ ಕೆ.ಜಿಗೆ 130 ರೂಪಾಯಿ ಪಡೆದು ಗ್ಯಾಸ್‌ ತುಂಬಿಸಿ ಕೊಡುತ್ತಿದ್ದಾರೆ.

ಈ ಜಾಗ ಅತ್ಯಂತ ಅಪಾಯಕಾರಿಯಾಗಿದೆ. ಗ್ಯಾಸ್‌ ರಿಫಿಲ್ಲಿಂಗ್ ಮಾಡೋ ಜಾಗದಲ್ಲೇ ಮಕ್ಕಳು ಆಟ ಆಡ್ತಾ ಇರ್ತಾರೆ. ಈ ಕರಾಳ ದಂಧೆಯ ಬಗ್ಗೆ ಇನ್ನಷ್ಟು ಮಾಹಿತಿ ಸಂಗ್ರಹಿಸಲು ನಾವು ಮನೆಯೊಳಗೆ ನುಗ್ಗಿಯೇ ಬಿಟ್ವಿ.

ಇವರ ಬಳಿಯಿಂದ ಗಲ್ಲಿ ಮಂದಿಯೆಲ್ಲಾ ಬಂದು ಕೆ.ಜಿಗೆ 130 ರೂಪಾಯಿ ಕೊಟ್ಟು ಗ್ಯಾಸ್‌ ಖರೀದಿಸಿಕೊಂಡು ಹೋಗ್ತಾರಂತೆ. ಇವರು ಚಿಕ್ಕ ಚಿಕ್ಕ 5ಕೆ.ಜಿ ತೂಕದ ಸಿಲಿಂಡರ್‌ಗೂ ಗ್ಯಾಸ್‌ ಫಿಲ್‌ ಮಾಡಿ ಕೊಡ್ತಾರೆ, ದೊಡ್ಡ ದೊಡ್ಡ ಗ್ಯಾಸ್‌ ಸಿಲಿಂಡರ್‌ಗೂ ಗ್ಯಾಸ್‌ ತುಂಬಿಸಿ ಕೊಡ್ತಾರೆ. ಇವರು ಈ ಮನೆಯೊಳಗೆ ಗ್ಯಾಸ್‌ ತುಂಬಿಸಲು ಬೇಕಾದ ಎಲ್ಲಾ ಉಪಕರಣಗಳನ್ನೂ ಇಟ್ಟುಕೊಂಡಿದ್ದಾರೆ. ಇನ್ನು ಈ ಮನೆಯೊಳಗೆ ನುಗ್ಗಿದ ನಮಗೆ ಅಚ್ಚರಿಯೇ ಕಾದಿತ್ತು. ಅಲ್ಲಿನ ಕೋಣೆಗಳ ತುಂಬಾ ಬರೀ ಸಿಲಿಂಡರ್‌ಗಳೇ ತುಂಬಿದ್ವು.

ನಮ್ಮ ರಹಸ್ಯ ಕಾರ್ಯಾಚರಣೆಯಲ್ಲಿ ಇಲ್ಲಿ ಅಪಾಯಕಾರಿಯಾಗಿರುವ ಅಕ್ರಮ ದಂಧೆ ನಡೀತಿರೋದಕ್ಕೆ ಪಕ್ಕಾ ಸಾಕ್ಷಿಗಳು ಲಭ್ಯವಾದವು. ಇನ್ನು ಈ ದಂಧೆಕೋರರನ್ನ ಹೀಗೆ ಬಿಟ್ರೆ ಇವರು ಯಾರ ಭಯವೂ ಇಲ್ಲದೆ ಅಕ್ರಮ ಕೆಲಸ ಮಾಡಿ ಜನರ ಪ್ರಾಣಕ್ಕೆ ಕುತ್ತು ತರ್ತಾರೆ. ಒಂದಲ್ಲಾ ಒಂದು ದಿನ ಇಲ್ಲಿ ಭಾರೀ ಅವಘಡ ಸಂಭವಿಸಿಯೇ ಸಂಭವಿಸುತ್ತೆ. ಇದನ್ನು ತಡೆಯಲೇ ಬೇಕು ಅಂತ ನಿರ್ಧರಿಸಿ ವಿಜಯಟೈಮ್ಸ್‌ ಕವರ್‌ಸ್ಟೋರಿ ತಂಡ ಬಂಡೇ ಪಾಳ್ಯ ಪೊಲೀಸ್‌ ಠಾಣೆಗೆ ತೆರಳಿ ಈ ಅಕ್ರಮದ ಬಗ್ಗೆ ಮಾಹಿತಿ ನೀಡಿತು.

ನಾವು ನೀಡಿದ ಮಾಹಿತಿಗೆ ತಕ್ಷಣ ಸ್ಪಂದಿಸಿದ ಎಸಿಪಿ ಪವನ್‌ ಕುಮಾರ್‌ ಹಾಗೂ ಬಂಡೇ ಪಾಳ್ಯ ಸಬ್‌ ಇನ್ಸ್‌ಪೆಕ್ಟರ್‌ ಅವರು ಒಂದು ತಂಡ ರಚಿಸಿ ಅಕ್ರಮ ನಡೆಯೋ ಜಾಗದ ಮೇಲೆ ದಾಳಿ ಮಾಡಿಸಿದರು. ದಾಳಿ ಮಾಡಿದಾಗ ಮನೆ ತುಂಬಾ ಅಡುಗೆ ಅನಿಲ ಸಿಲಿಂಡರ್‌ಗಳು, ಗ್ಯಾಸ್‌ ಫಿಲ್ಲಿಂಗ್‌ ಮಾಡೋ ಉಪಕರಣಗಳು ಸಿಕ್ಕಿದವು. ಅಲ್ಲದೆ ಗ್ಯಾಸ್‌ ಫಿಲ್ ಮಾಡುವುದನ್ನು ಕೂಡ ರೆಡ್‌ ಹ್ಯಾಂಡ್‌ ಆಗಿ ಪತ್ತೆ ಹಚ್ಚಿದ್ರು. ಈ ದಂಧೆ ಮಾಡುತ್ತಿದ್ದ ಅಕ್ಬರ್‌ನನ್ನು ತನಿಖೆಗೆ ಒಳಪಡಿಸಿದ್ರು.

ಪ್ರತಿನಿತ್ಯ ಇವರ ಬಳಿ ಸಾಕಷ್ಟು ಮಂದಿ ಬಂದು ಗ್ಯಾಸ್‌ ರೀ ಫಿಲ್ ಮಾಡ್ಕೊಂಡು ಹೋಗ್ತಾರೆ. ಇದು ಜನನಿಬಿಡ ಪ್ರದೇಶ. ಒತ್ತೊತ್ತಾಗಿ ಮನೆಗಳಿಗೆ. ಅಗ್ನಿ ಅವಘಡ ಸಂಭವಿಸಿದ್ರೆ ಅಗ್ನಿಶಾಮಕದಳದ ವಾಹನ ಬರಲೂ ಜಾಗ ಇಲ್ಲ. ಅಂಥಾ ಜಾಗದಲ್ಲಿ ಈ ಅಪಾಯಕಾರಿ ದಂಧೆ ನಡೆಸುತ್ತಿದ್ದಾರೆ. ಇಂಥಾ ಅನೇಕ ಅಡ್ಡಗಳು ರಾಜಧಾನಿ ಬೆಂಗಳೂರಲ್ಲಿವೆ. ಈ ಅಪಾಯಕಾರಿ ದಂಧೆ ಜನರ ಬಲಿ ಪಡೆಯೋ ಮುನ್ನ ಬೆಂಗಳೂರು ಪೊಲೀಸರು ಈ ದಂಧೆಕೋರರನ್ನು ಜೈಲಿಗಟ್ಟಬೇಕು.

Exit mobile version