Bengaluru: ಬೆಂಗಳೂರಿನ ತಮ್ಮ ನಿವಾಸದ ಬಳಿ ಡಿಸಿಎಂ ಡಿ.ಕೆ ಶಿವಕುಮಾರ್ (D K Shivakumar) ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದು, ಬಿಜೆಪಿ ಮತ್ತು ಜೆಡಿಎಸ್ ನಾಯಕರು ಕಾನೂನು ಸುವ್ಯವಸ್ಥೆಯನ್ನು ಹಾಳುಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ರಾಷ್ಟ್ರಧ್ವಜ ಮತ್ತು ಕನ್ನಡ ಧ್ವಜವನ್ನು ಮಾತ್ರ ಹಾರಿಸಬೇಕೆಂದು ಪಂಚಾಯಿತಿಯು ಹೇಳಿತ್ತು. ಆದರೆ ಹನುಮ ಧ್ವಜ ಹಾರಿಸಿದ್ದಾರೆ. ಬಿಜೆಪಿ (BJP) ನಾಯಕರೇ ಅಲ್ವಾ, ಘರ್ ಘರ್ ತಿರಂಗಾ ಅಂತ ಘೋಷಣೆ ಸಾರಿದ್ದು, ಎಲ್ಲಿ ಹೋಯಿತು ಆ ಘೋಷಣೆ? ಅವರು ರಾಷ್ಟ್ರಧ್ವಜವನ್ನು ಬಿಟ್ಟು ಹನುಮ ಧ್ವಜವನ್ನೇ ಹಾರಿಸಿಕೊಂಡಿರಲಿ ಎಂದು ಶಿವಕುಮಾರ್ ಮಾತನಾಡಿದರು.
ಮಂಡ್ಯ ಸೇರಿದಂತೆ ಹಳೆ ಮೈಸೂರು (Mysore) ಭಾಗದಲ್ಲಿ ಜನರು ಶಾಂತಿ-ಸೌಹಾರ್ದತೆಗಳಿಂದ ಬದುಕುತ್ತಿದ್ದರು. ಆದರೆ ಈಗ ಈ ಪ್ರಾಂತ್ಯದಲ್ಲೂ ಅವರು ಕಾನೂನು ಮತ್ತು ಸುವ್ಯವಸ್ಥೆ ಕದಡುವ ಹುನ್ನಾರದಲ್ಲಿದ್ದಾರೆ ಎಂದು ಶಿವಕುಮಾರ್ ಹೇಳಿದರು. ಈ ಪ್ರಾಂತ್ಯದ ಎಲ್ಲ ಗ್ರಾಮಗಳ ನಿವಾಸಿಗಳಲ್ಲಿ ಪರಸ್ಪರ ಭ್ರಾತೃತ್ವದ ಭಾವನೆಗಳಿವೆ, ಊರಹಬ್ಬಗಳನ್ನು ಎಲ್ಲರೂ ಒಟ್ಟಾಗಿ ಸೇರಿ ಸಂಭ್ರಮದಿಂದ ಆಚರಿಸುತ್ತಾರೆ.
ಬಿಜೆಪಿ ನಾಯಕರು ಅವರ ನಡುವಿನ ಸೌಹಾರ್ದತೆ ಹಾಳುಮಾಡು ಹೊಸ ಪ್ರಯೋಗವನ್ನು ಜಾರಿಗೆ ತಂದಿದ್ದಾರೆ ಎಂದು ಶಿವಕುಮಾರ್ ಹೇಳಿದರು.
ಏನಿದು ಹನುಮ ಧ್ವಜ ಪ್ರಕರಣ?
ಮಂಡ್ಯ ತಾಲ್ಲೂಕಿನ ಕೆರಗೋಡು (Keragodu) ಗ್ರಾಮದಲ್ಲಿ ಹಾರಿಸಲಾಗಿದ್ದ ಹನುಮ ಧ್ವಜವನ್ನು (Hanuma Flag) ತೆರವುಗೊಳಿಸಲು ಸ್ಥಳೀಯಾಡಳಿತ ಮುಂದಾಗಿರುವುದು ವಿವಾದಕ್ಕೆ ಕಾರಣವಾಗಿತ್ತು.
ಧ್ಚಜ ತೆರವುಗೊಳಿಸಲು ಬಂದಿದ್ದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವಿರುದ್ಧ ಗ್ರಾಮಸ್ಥರು ಮತ್ತು ಸಂಘ ಪರಿವಾರದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಇದರಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ 144 ಸೆಕ್ಷನ್ ಜಾರಿಯಾಗಿದೆ. ಹೀಗಿದ್ದರೂ ಪ್ರತಿಭಟನೆ ನಡೆಸಿದ್ದ ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.