ಅಸ್ತಿತ್ವದಲ್ಲಿರುವ ವರ್ಗಾವಣೆ ನೀತಿಯನ್ನು ಬಲಗೊಳಿಸಿದ ಭಾರತ ಚುನಾವಣಾ ಆಯೋಗ

Delhi: ಭಾರತ ಚುನಾವಣಾ ಆಯೋಗವು (Election Commission of India) ಇನ್ನೇನು ಲೋಕಸಭೆ ಚುನಾವಣೆಗೆ ಕೆಲವು ದಿನಗಳು ಬಾಕಿಯಿರುವ ಬೆನ್ನಲ್ಲೇ, 3 ವರ್ಷ ಪೂರೈಸಿದ ನಂತರ ಜಿಲ್ಲೆಯಿಂದ ಹೊರಗೆ ವರ್ಗಾವಣೆಗೊಂಡ ಅಧಿಕಾರಿಗಳನ್ನು ಅದೇ ಸಂಸದೀಯ ಕ್ಷೇತ್ರದೊಳಗೆ ಬೇರೆ ಜಿಲ್ಲೆಯಲ್ಲಿ ನಿಯೋಜಿಸದಂತೆ ನೋಡಿಕೊಳ್ಳಲು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರಿಕಾ ಪ್ರಕಟಣೆ ಹೊರಡಿಸಿದೆ.

ರಾಜ್ಯ ಸರ್ಕಾರಗಳು ಇದೇ ಸಂಸದೀಯ ಕ್ಷೇತ್ರದ ವ್ಯಾಪ್ತಿಯ ಪಕ್ಕದ ಜಿಲ್ಲೆಗಳಲ್ಲಿ ಅಧಿಕಾರಿಗಳನ್ನು ವರ್ಗಾವಣೆ ಮಾಡುವ/ ನಿಯೋಜನೆ ಮಾಡುತ್ತಿರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ಆಯೋಗವು ತನ್ನ ಅಸ್ತಿತ್ವದಲ್ಲಿರುವ ವರ್ಗಾವಣೆ ನೀತಿಯನ್ನು ಬಲಪಡಿಸಿದೆ ಎಂದು ಭಾರತದ ಚುನಾವಣಾ ಆಯೋಗ ನಿರ್ದೇಶನ ಮಾಡಿದೆ.

ಅಸ್ತಿತ್ವದಲ್ಲಿರುವ ಸೂಚನೆಗಳಲ್ಲಿನ ಲೋಪದೋಷಗಳನ್ನು ಸರಿಪಡಿಸುವ (Transfer Policy) ಮೂಲಕ, ಆಯೋಗವು ಎರಡು ಸಂಸದೀಯ ಕ್ಷೇತ್ರಗಳನ್ನು ಒಳಗೊಂಡಿರುವ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳನ್ನು ಹೊರತುಪಡಿಸಿ, ಎಲ್ಲಾ ರಾಜ್ಯಗಳು ಜಿಲ್ಲೆಯಿಂದ ಹೊರಗೆ ವರ್ಗಾವಣೆಗೊಂಡ ಅಧಿಕಾರಿಗಳನ್ನು ಅದೇ ಸಂಸದೀಯ ಕ್ಷೇತ್ರದೊಳಗೆ ನಿಯೋಜನೆ ಮಾಡದಂತೆ ನೋಡಿಕೊಳ್ಳಬೇಕು ಎಂದು ನಿರ್ದೇಶಿಸಿದೆ ಎಂದು ಪ್ರಕಟಣೆ ತಿಳಿಸಿದೆ.

ಆಯೋಗದ ಪೂರ್ವ ಸೂಚನೆಗಳಿಗೆ ಅನುಸಾರವಾಗಿ ಈಗಾಗಲೇ ಜಾರಿಗೊಳಿಸಲಾದ ವರ್ಗಾವಣೆಗಳು ಮತ್ತು ನಿಯೋಜನೆಗಳಿಗೆ ಹಿಂದಿನ ನಿಯಮ ಅನ್ವಯಿಸುತ್ತದೆ. ಆಯೋಗದ ವರ್ಗಾವಣೆ ನೀತಿಯನ್ನು ಅಕ್ಷರಶಃ ಪಾಲಿಸಬೇಕು ಎಂದು ಹೇಳಲಾಗಿದೆ.

ಚುನಾವಣಾ ಆಯೋಗದ ನೀತಿಯ ಪ್ರಕಾರ, ತಮ್ಮ ತವರು ಜಿಲ್ಲೆಯಲ್ಲಿ ನಿಯೋಜನೆಗೊಂಡಿರುವ ಅಥವಾ ಮೂರು ವರ್ಷಗಳನ್ನು ಒಂದು ಸ್ಥಳದಲ್ಲಿ ಪೂರ್ಣಗೊಳಿಸಿದ ಎಲ್ಲಾ ಅಧಿಕಾರಿಗಳನ್ನು ವರ್ಗಾವಣೆ ಮಾಡಲು ನಿರ್ದೇಶಿಸಲಾಗಿದೆ. ಇದರಲ್ಲಿ ನೇರವಾಗಿ ಅಥವಾ ಮೇಲ್ವಿಚಾರಣಾ ಕೆಲಸಕ್ಕೆ ಯಾವುದೇ ರೀತಿಯಲ್ಲಿ ಸಂಪರ್ಕ ಹೊಂದಿರುವ ಅಧಿಕಾರಿಗಳು ಸೇರಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಇತ್ತೀಚೆಗೆ ನಡೆದ 5 ರಾಜ್ಯಗಳ (States) ವಿಧಾನಸಭಾ ಚುನಾವಣೆಯಲ್ಲಿ ಆಯೋಗವು ರಾಜ್ಯಗಳಲ್ಲಿ ವಿವಿಧ ಅಧಿಕಾರಿಗಳನ್ನು, ಹಿರಿಯ ಮಟ್ಟದ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿರುವುದನ್ನು ನೆನಪಿಸಿಕೊಳ್ಳಬಹುದು ಮತ್ತು ಚುನಾವಣೆಯಲ್ಲಿ ಯಾವುದೇ ಕಾರ್ಯಕ್ಕೆ ಧಕ್ಕೆಯಾಗದಂತೆ ಆಯೋಗವು ಶೂನ್ಯ ಸಹಿಷ್ಣುತೆಯ ನೀತಿಯನ್ನು ಅನುಸರಿಸಿದೆ.

Exit mobile version