ಕೊರೋನಾದಿಂದಾಗಿ ಅಪೌಷ್ಟಿಕತೆಯಿಂದ ನರಳುತ್ತಿರುವ ಮಕ್ಕಳ ಸಹಾಯಕ್ಕೆ ಸರ್ಕಾರ ಮುಂದಾಗಿದೆ. ರಾಜ್ಯದ ಒಟ್ಟು ಏಳು ಜಿಲ್ಲೆಗಳ ಮಕ್ಕಳಿಗೆ 46 ದಿನಗಳವರೆಗೆ ಮಧ್ಯಾಹ್ನದ ಊಟಕ್ಕೆ ಮೊಟ್ಟೆ ನೀಡಲು ನಿರ್ಧರಿಸಿದೆ.
ಬೆಂಗಳೂರು: ಕರ್ನಾಟಕದ ಏಳು ಜಿಲ್ಲೆಗಳ ಮಕ್ಕಳಿಗೆ ಈ ಶೈಕ್ಷಣಿಕ ವರ್ಷದಲ್ಲಿ 46 ದಿನಗಳವರೆಗೆ ಮಧ್ಯಾಹ್ನದ ಊಟದೊಂದಿಗೆ ಮೊಟ್ಟೆಗಳನ್ನು ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ರಕ್ತಹೀನತೆ ಹೆಚ್ಚಾಗಿರುವ ಬೀದರ್, ಬಳ್ಳಾರಿ, ಕಲಬುರಗಿ, ಕೊಪ್ಪಳ ಮತ್ತು ವಿಜಯಪುರ ಜಿಲ್ಲೆಗಳ 1-8ನೇ ತರಗತಿಯ 14.4 ಲಕ್ಷ ಮಕ್ಕಳು ಈ ಅವಧಿಗೆ ದಿನಕ್ಕೆ ಒಂದು ಮೊಟ್ಟೆಯನ್ನು ಪಡೆಯುತ್ತಾರೆ ಎಂದು ಶಿಕ್ಷಣ ಸಚಿವಾಲಯದ ಮಧ್ಯಾಹ್ನದ ಊಟ ವಿಭಾಗದ ಯೋಜನಾ ಅನುಮೋದನೆ ಮಂಡಳಿಯು ತಿಳಿಸಿದೆ.
ಆಗಸ್ಟ್ 4 ರಂದು ನಡೆದ ಪಿಎಬಿ ಸಭೆಯಲ್ಲಿ, ರಾಜ್ಯದಲ್ಲಿ ಮಕ್ಕಳ ಆರೋಗ್ಯದ ಸಾಮಾನ್ಯ ಸ್ಥಿತಿಯನ್ನು ಚರ್ಚಿಸಲಾಗಿದ್ದು, ನಿರ್ದಿಷ್ಟವಾಗಿ ಕ್ವಾಶಿಯೋರ್ಕರ್ ಬಗ್ಗೆ ಚರ್ಚೆಯಾಗಿದ್ದು ಇದು ಸಾಮಾನ್ಯವಾಗಿ ಪ್ರೋಟೀನ್ ಕೊರತೆಯಿಂದ ಉಂಟಾಗುತ್ತದೆ. ಸಭೆಯ ನಂತರದ ಮಾಹಿತಿ ಪ್ರಕಾರ, “ಒಂದು ವೇಳೆ ಕೆಲ ಜಿಲ್ಲೆಗಳಲ್ಲಿ ಅಪೌಷ್ಟಿಕತೆ ಮತ್ತು ರಕ್ತಹೀನತೆ ಅಧಿಕ ಮಟ್ಟದಲ್ಲಿ ಕಂಡುಬಂದಲ್ಲಿ ಪೂರಕ ಪೌಷ್ಠಿಕಾಂಶದ ವಸ್ತುಗಳನ್ನು ಒದಗಿಸುವಂತೆ ಪಿಎಬಿ ರಾಜ್ಯಕ್ಕೆ ಸಲಹೆ ನೀಡಿದೆ.”
ಮುಂದಿನ ವರ್ಷ ಇದನ್ನು 220 ದಿನಗಳಿಗೆ ವಿಸ್ತರಿಸಲು ನಾವು ಸಿದ್ಧ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ವಿ ಅನ್ಬುಕುಮಾರ್ ಹೇಳಿದ್ದು, ಮೊಟ್ಟೆಗಳನ್ನು ಸೇವಿಸದ ಮಕ್ಕಳಿಗೆ ಪರ್ಯಾಯವಾಗಿ ಇಲಾಖೆ ಕರ್ನಾಟಕ ಹಾಲು ಒಕ್ಕೂಟದ ಜೊತೆ ಮಾತುಕತೆ ನಡೆಸುತ್ತಿದೆ. “ಅಂತಹ ಮಕ್ಕಳಿಗೆ ಪೌಷ್ಠಿಕಾಂಶದ ಬಿಸ್ಕತ್ತುಗಳನ್ನು ನೀಡಲು ನಾವು ಅವರಿಗೆ ವಿನಂತಿಸಿದ್ದೇವೆ. ಬಾಳೆಹಣ್ಣು ಮತ್ತೊಂದು ಪರ್ಯಾಯವಾಗಿದ್ದರೂ ಪ್ರಾಯೋಗಿಕ ಸಮಸ್ಯೆಗಳಿವೆ. ಅಲ್ಲದೆ, ಇದು ಮಕ್ಕಳಿಗೆ ಆಕರ್ಷಕ ಆಯ್ಕೆಯಾಗಿಲ್ಲ ಎಂದು ಆಯುಕ್ತರು ಹೇಳಿದ್ದಾರೆ.