Chikmagalur: ವೀಕೆಂಡ್ ಬಂದರೆ ಸಾಕು ಪಬ್, ಶಾಪಿಂಗ್ ಎನ್ನುವವರು ಒಂದೆಡೆಯಾದರೆ ಒಂದಿಷ್ಟು ಜನರ ಗುಂಪುಗಳ ಮಾಡಿಕೊಂಡು ಚಾರಣಕ್ಕೆ ಹೊರಡುವವರು ಮತ್ತೊಂದೆಡೆ. ಮಳೆಗಾಲ ಆರಂಭವಾಗಿದ್ದರೂ ಕೂಡ ಕಿಂಚಿತ್ ಭಯವಿಲ್ಲದೆ ಪ್ರವಾಸ ಮಾಡಿ ಟ್ರೆಕ್ಕಿಂಗ್ (Trekking) ಮಾಡುತ್ತಿದ್ದ ಜನರಿಗೆ ಚಿಕ್ಕಮಗಳೂರು ಅರಣ್ಯ ಇಲಾಖೆ ಶಾಕ್ ನೀಡಿದೆ.ದೂರದಿಂದ ನೋಡಿದರೆ ಎತ್ತಿನ ಭುಜದ ಆಕಾರದಲ್ಲಿ ಕಾಣುವ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಸುಪ್ರಸಿದ್ಧ ಪ್ರವಾಸಿ ತಾಣ ಎತ್ತಿನ ಭುಜ ಪ್ರವಾಸಿ ತಾಣಕ್ಕೆ ಅರಣ್ಯ ಇಲಾಖೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದೆ.
![](https://sp-ao.shortpixel.ai/client/to_webp,q_glossy,ret_img,w_1011,h_677/https://vijayatimes.com/wp-content/uploads/2024/06/IMG-20180421-WA0020.jpg)
ಕಳೆದ ಶನಿವಾರದಿಂದ ಸೋಮವಾರದವರೆಗೆ ಮೂರು ದಿನದಲ್ಲಿ 20,000ಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡಿದ್ದಾರೆ ಎಂದು ಅಂದಾಜಿಸಲಾಗಿದೆ. ಈಗಾಗಲೇ ಕಳೆದ ಕೆಲ ತಿಂಗಳ ಹಿಂದೆ ಅರಣ್ಯ ಸಚಿವ ಈಶ್ವರ ಖಂಡ್ರೆ ರಾಜ್ಯದ ಪ್ರವಾಸಿ ತಾಣಗಳಿಗೆ ಆನ್ಲೈನ್ ಟಿಕೆಟ್ ಮೂಲಕ ದಿನಕ್ಕೆ ನಿರ್ದಿಷ್ಟ ಪ್ರವಾಸಿಗರಿಗೆ ಮಾತ್ರ ಅವಕಾಶ ಕಲ್ಪಿಸಬೇಕೆಂದು ಸೂಚನೆ ನೀಡಿದ್ದರು.
ಆದರೆ, ಜಿಲ್ಲೆಯ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಹಿಗ್ಗಿಲ್ಲದೆ ಭೇಟಿ ನೀಡುತ್ತಿದ್ದಾರೆ. ಸಾಲದ್ದಕ್ಕೆ, ಎತ್ತಿನ ಭುಜದ ಕಿರಿದಾದ ಪ್ರದೇಶದಲ್ಲೂ ಕೂಡ ಪ್ರವಾಸಿಗರು ಮುಂಜಾನೆ 5 ಗಂಟೆಗೆಲ್ಲ ಟ್ರಕ್ಕಿಂಗ್ ಹೋಗುತ್ತಿದ್ದಾರೆ. ಭಾರೀ ಗಾಳಿ. ಆಗಾಗ್ಗೆ ಸುರಿಯುವ ಮಳೆ. ಮಂಜು. ಜಾರಿಕೆ ಮಧ್ಯೆ ಟ್ರೆಕ್ಕಿಂಗ್ ಮಾಡುತ್ತ ಫೋಟೋ (Photo) ತೆಗೆದುಕೊಂಡು ಎಂಜಾಯ್ ಮಾಡುತ್ತಿದ್ದಾರೆ.
![](https://sp-ao.shortpixel.ai/client/to_webp,q_glossy,ret_img,w_740,h_403/https://vijayatimes.com/wp-content/uploads/2024/06/ettina-buja.webp)
ಕಳೆದ ಕೆಲ ದಿನಗಳಿಂದ ಚಿಕ್ಕಮಗಳೂರಿ (Chikkamagalauru)ನಲ್ಲಿ ಜೋರು ಮಳೆ, ಗಾಳಿ, ಗುಡುಗು ಮಿಂಚು ಶುರುವಾಗಿದೆ. ಅತ್ಯಂತ ಕಿರಿದಾದ ಈ ಪ್ರವಾಸಿ ತಾಣದಲ್ಲಿ ಚಾರಣಕ್ಕೆ ಹೋಗುವುದು ಅಪಾಯಕರವಾಗಿದೆ. ಅದಾಗ್ಯೂ ಜನ ಈ ಪ್ರದೇಶದಲ್ಲಿ ಚಾರಕ್ಕೆ ಹೋಗುತ್ತಿರುವುದು ಕಂಡು ಬಂದಿದೆ. ಇದರಿಂದ ಏನಾದರೂ ಅನಾಹುತಗಳು ಸಂಭವಿಸದರೆ ಎಂಬ ಮುನ್ನೆಚ್ಚರಿಕೆಯಿಂದ ಚಾರಣ ಹೋಗುವ ವರ್ಗದಲ್ಲಿ ಪ್ರವಾಸಿಗರ ಸುರಕ್ಷತಾ ಕಾಮಗಾರಿಗೆ ಇಲಾಖೆ ಮುಂದಾಗಿದೆ.
ಹಾಗಾಗಿ ತಾತ್ಕಾಲಿಕವಾಗಿ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳು ಮತ್ತು ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಚಿಕ್ಕಮಗಳೂರು ಇವರ ಆದೇಶದಂತೆ ಮೂಡಿಗೆರೆ (Mudigere) ವಲಯ ಅರಣ್ಯ ಇಲಾಖೆ ಅಧಿಕಾರಿಗಳ ಕಚೇರಿಯಿಂದ ಚಾರಣ ನಿಷೇಧ ಆದೇಶ ಹೊರಡಿಸಿದೆ.