ಕಲ್ಲು ಕ್ವಾರಿಯಲ್ಲಿ ಸ್ಪೋಟ: 10 ಮಂದಿ ದುರ್ಮರಣ, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ

ಹೈದರಾಬಾದ್, ಮೇ. 08: ಆಂಧ್ರಪ್ರದೇಶದ ಕಡಪಾ ಜಿಲ್ಲೆಯಲ್ಲಿರುವ ಕ್ವಾರಿಯಲ್ಲಿ ಕಲ್ಲು ಒಡೆಯುವ ಸ್ಫೋಟಕ ಸ್ಫೋಟಗೊಂಡ ಪರಿಣಾಮ 10ಕ್ಕೂ ಹೆಚ್ಚು ಮಂದಿ ಕೆಲಸಗಾರರು ಮೃತಪಟ್ಟಿದ್ದಾಗಿ ವರದಿಯಾಗಿದೆ. ಇಲ್ಲಿ ಕೆಲಸಗಾರರು ಸ್ಫೋಟಕವನ್ನು ಅಳವಡಿಸಲು ಗ್ರಾನೈಟ್​​ನ್ನು ಕೊರೆಯುತ್ತಿದ್ದ ವೇಳೆ ಏಕಾಏಕಿ ಸ್ಫೋಟಗೊಂಡಿದೆ. ಸದ್ಯ 10 ಮೃತದೇಹಗಳಷ್ಟೇ ಪತ್ತೆಯಾಗಿದ್ದು, ಸಾವಿನ ಸಂಖ್ಯೆ ಏರುವ ಸಾಧ್ಯತೆ ಇದೆ ಎಂಬ ಮಾಹಿತಿ ಇದೆ.

ಕಡಪಾದ ಕಳಸಪಾಡು ಬ್ಲಾಕ್​​ನಲ್ಲಿರುವ ಮಾಮಿಲ್ಲಪಲ್ಲೆ ಗ್ರಾಮದಲ್ಲಿ ಇಂದು ಬೆಳಗ್ಗೆ ದುರ್ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ, ಪೊರುಮಾಮಿಲ್ಲಾ ಠಾಣೆ ಪೊಲೀಸ್ ಅಧಿಕಾರಿ, ಸ್ಫೋಟವಾಗಿದ್ದು ಗ್ರಾನೈಟ್ ಕೊರೆಯುವಾಗ ಎಂದು ಹೇಳಲಾಗುತ್ತಿದೆ. ಆದರೆ ನಮ್ಮ ತನಿಖೆ ಪ್ರಕಾರ ಸ್ಫೋಟಕಗಳನ್ನು ಕ್ವಾರಿಗೆ ಸಾಗಿಸುವಾಗ ಈ ದುರಂತ ಸಂಭವಿಸಿದೆ ಎಂದು ತಿಳಿಸಿದ್ದಾರೆ.

ಇದರಲ್ಲಿ ಮೃತಪಟ್ಟವರು ಬಹುತೇಕ ಪುಲಿವೆಂದುಲಾದವರೇ ಆಗಿದ್ದಾರೆ. ಈ ಗ್ರಾಮ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್.ಜಗನ್​ ಮೋಹನ್​ ರೆಡ್ಡಿಯವರ ಸ್ವಗ್ರಾಮವೂ ಆಗಿದೆ. ಇನ್ನು ಜಗನ್​ಮೋಹನ್​ ರೆಡ್ಡಿಯವರು ಘಟನೆಯ ಸಂಪೂರ್ಣ ವಿವರವನ್ನು ಪಡೆದಿದ್ದು, ಮೃತರ ಕುಟುಂಬಗಳಿಗೆ ಸಾಂತ್ವನ ತಿಳಿಸಿದ್ದಾರೆ.

Exit mobile version