ಬಾಗಲಕೋಟೆ : ಪ್ರಥಮ ದರ್ಜೆ ಸಹಾಯಕ (ಎಫ್ಡಿಎ) ಹುದ್ದೆಗಳ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಸಿಬಿ ಪೊಲೀಸರು, ಪ್ರಮುಖ ಆರೋಪಿ ಎನ್ನಲಾದ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ದ್ವಿತೀಯ ದರ್ಜೆ ಸಹಾಯಕ (ಎಸ್ಡಿಎ) ರಮೇಶ್ ಅಲಿಯಾಸ್ ರಾಮಪ್ಪ ಹೆರಕಲ್ ಎಂಬಾತನನ್ನು ಜಮಖಂಡಿಯಲ್ಲಿ ವಶಕ್ಕೆ ಪಡೆದಿದ್ದಾರೆ.
ರಮೇಶ್ ಹೆರಕಲ್ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಬೂದಿಹಾಳ ಎಸ್ ಜಿ ಗ್ರಾಮದ ನಿವಾಸಿ.ಕೆಪಿಎಸ್ಸಿ ಬೆಂಗಳೂರು ಕಚೇರಿಯ ಗೌಪ್ಯ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ. ಎಫ್.ಡಿ.ಎ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದು ಬಹಿರಂಗ ವಾಗುತ್ತಿದ್ದಂತೆ ಚಿಕ್ಕಪಡಸಲಗಿ ಗ್ರಾಮಕ್ಕೆ ತೆರಳಿದ್ದಾನೆ.ಸಂಶಯ ಬಂದ ಪೊಲೀಸರು ಜಮಖಂಡಿಗೆ ತೆರಳಿ ರಮೇಶ್ ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.