ಶ್ರೀನಗರ, ಮೇ. 06: ಜಮ್ಮು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಭಾರತೀಯ ಭದ್ರತಾ ಪಡೆ ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಈ ದಾಳಿಯಲ್ಲಿ ಭಾರತೀಯ ಭದ್ರತಾ ಪಡೆಯ ಸಿಬ್ಬಂದಿ ಮೂವರು ಉಗ್ರರನ್ನು ಎನ್ಕೌಂಟರ್ನಲ್ಲಿ ಹತ್ಯೆ ಮಾಡಿದ್ದಾರೆ. ಈ ವೇಳೆ, ಇತ್ತೀಚೆಗಷ್ಟೆ ಉಗ್ರ ಸಂಘಟನೆಗೆ ಸೇರಿದ್ದ ತೌಷಿಫ್ ಅಹಮದ್ ಎಂಬ ಉಗ್ರ ಭಾರತೀಯ ಸೇನೆಗೆ ಶರಣಾಗಿದ್ದಾನೆ.
ಶೋಪಿಯಾನ್ನಲ್ಲಿ ಉಗ್ರರು ಮತ್ತು ಬಿಎಸ್ಎಫ್ ಯೋಧರ ನಡುವಿನ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ. ಶೋಪಿಯಾನ್ನಲ್ಲಿ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಇವರೆಲ್ಲರೂ ಇತ್ತೀಚೆಗಷ್ಟೆ ಉಗ್ರ ಸಂಘಟನೆಗೆ ಸೇರ್ಪಡೆಯಾಗಿದ್ದರು. ಈ ನಾಲ್ವರನ್ನು ಶರಣಾಗುವಂತೆ ಮನವೊಲಿಸಲು ಜಮ್ಮು ಕಾಶ್ಮೀರದ ಪೊಲೀಸರು ಮತ್ತು ಭದ್ರತಾ ಪಡೆಯ ಯೋಧರು ಪ್ರಯತ್ನಿಸುತ್ತಿದ್ದಾರೆ.
ದಕ್ಷಿಣ ಕಾಶ್ಮೀರದ ಕನಿಗಮ್ ಪ್ರದೇಶದಲ್ಲಿ ನಿನ್ನೆ ಭದ್ರತಾ ಪಡೆಯ ಸಿಬ್ಬಂದಿ ಶೋಧ ಕಾರ್ಯಾಚರಣೆ ಆರಂಭಿಸಿದ್ದರು. ಆ ಪ್ರದೇಶದಲ್ಲಿ ಉಗ್ರರು ಅಡಗಿದ್ದಾರೆಂಬ ಖಚಿತ ಮಾಹಿತಿ ಸಿಕ್ಕಿ ಹಿನ್ನೆಲೆಯಲ್ಲಿ ಯೋಧರು ಮತ್ತು ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದ್ದರು.