ಬೆಂಗಳೂರು, ಜೂ. 08: ಮೆಡಿಕಲ್, ಡೆಂಟಲ್ ಹಾಗೂ ಎಂಜಿನಿಯರಿಂಗ್ ಕೋರ್ಸ್ ಸೇರುವ ವಿದ್ಯಾರ್ಥಿಗಳಿಗೆ ಸಿಇಟಿ ಅಂಕಗಳನ್ನು ಮಾತ್ರ ಪರಿಗಣಿಸಲಾಗುತ್ತದೆ. ಪಿಯುಸಿ ಗ್ರೇಡಿಂಗ್ ಅಂಕವನ್ನು ಗಣನೆಗೆ ತೆಗೆದುಕೊಳ್ಳಲ್ಲ ಎಂದು ಡಿಸಿಎಂ ಅಶ್ವತ್ಥ ನಾರಾಯಣ ಸ್ಪಷ್ಟಪಡಿಸಿದ್ದಾರೆ. ಸಭೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸುರೇಶ್ ಕುಮಾರ್ ನೀಡಿದ್ದ ಸಲಹೆ ಬಗ್ಗೆ ಸಮಾಲೋಚನೆ ನಡೆಸಲಾಯಿತು. ಆಗಸ್ಟ್ 28, 29 ರಂದು ಸಿಇಟಿ ಪರೀಕ್ಷೆ ನಡೆಯಲಿದೆ. ಎಲ್ಲಾ ವಿಜ್ಞಾನ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬಹುದು ಎಂದು ಮಾಹಿತಿ ನೀಡಿದರು. ಜೂನ್ 15 ರಿಂದ ಸಿಇಟಿಗೆ ರಿಜಿಸ್ಟರ್ ಮಾಡೋಕೆ ಅವಕಾಶ ಪ್ರಾರಂಭವಾಗಲಿದೆ. ಈ ವರ್ಷ 6.5 ಲಕ್ಷ ಪಿಯುಸಿ ವಿದ್ಯಾರ್ಥಿಗಳಿಗೆ ಸೀಟು ಬೇಕು. ಇದಕ್ಕೆ ಅಗತ್ಯ ಸೀಟು ಹೆಚ್ಚಳ ಮಾಡಲು ಕ್ರಮ ತೆಗೆದುಕೊಳ್ತೀವಿ. ಪ್ರತಿ ವಿಷಯಕ್ಕೂ 60 ಅಂಕಗಳಿರುತ್ತವೆ ಎಂದು ಹೇಳಿದರು. ಮುಂದುವರೆದ ಅವರು, ಲಾಕ್ಡೌನ್ ಮುಗಿದು ಕಾಲೇಜು ಪ್ರಾರಂಭವಾದ ಕೂಡಲೇ ಎಲ್ಲಾ ಡಿಗ್ರಿ ಮಕ್ಕಳಿಗೆ ಟ್ಯಾಬ್ ಕೊಡುತ್ತೇವೆ. ಆನ್ಲೈನ್ ಕ್ಲಾಸಿಗೂ ಹೆಚ್ಚು ಒತ್ತು ನೀಡ್ತೀವಿ. ವಿದ್ಯಾರ್ಥಿಗಳಿಗೆ ಅಗತ್ಯ ಸಹಕಾರ ಕೊಡ್ತೀವಿ ಎಂದರು.
ವಿಜ್ಞಾನ ವಿದ್ಯಾರ್ಥಿಗಳು ಯಾವುದೇ ಕೋರ್ಸ್ ಪಡೆಯಲು ಸಿಇಟಿ ಮಾನದಂಡ ಮಾಡಬೇಕು ಅಂತ ಚಿಂತನೆ ಮಾಡಲಾಗ್ತಿದೆ. ಸಾಧ್ಯವಾದರೆ ಈ ವರ್ಷವೇ ಈ ನಿಯಮ ಜಾರಿ ಮಾಡುತ್ತೇವೆ. ನೀಟ್(NEET) ಮಾದರಿಯಲ್ಲಿ ಎಂಜಿನಿಯರಿಂಗ್ ಸೀಟು ಹಂಚಿಕೆಗೆ ಮಾನದಂಡ ಮಾಡಬೇಕಾ ಎನ್ನುವ ಬಗ್ಗೆಯೂ ಚರ್ಚೆ ಆಗ್ತಿದೆ. ಮುಂದೆ ಈ ಬಗ್ಗೆ ತೀರ್ಮಾನ ಮಾಡ್ತೀವಿ ಎಂದು ಹೇಳಿದರು. ಸಿಇಟಿಯಲ್ಲಿ ನೀಟ್(NEET) ತರಹ ಮಿನಿಮಮ್ ಮಾರ್ಕ್ಸ್ ಪರಿಗಣಿಸಬಹುದಾ ಅಂತ ನಿರ್ಧಾರ ಮಾಡ್ತೇವೆ. ಸ್ಕ್ರೀನಿಂಗ್ ಮೆಥಡ್ ಪಾಲಿಸುವುದಕ್ಕೆ ಚರ್ಚೆ ಮಾಡ್ತಿದ್ದೇವೆ. ಶೇ.100 ರಷ್ಟು ಪಿಯುಸಿಯಲ್ಲಿ ಉತ್ತೀರ್ಣರಾಗುತ್ತಾರೆ. 6.5 ಲಕ್ಷ ವಿದ್ಯಾರ್ಥಿಗಳು ಪಿಯುಸಿಯಿಂದ ಡಿಗ್ರಿಗೆ ಬರ್ತಾರೆ. ಹೆಚ್ಚಿನ ಸಂಖ್ಯೆಯಲ್ಲಿ ಪಾಸ್ ಔಟ್ ಆಗ್ತಿರೋದ್ರಿಂದ ಪದವಿ ಕೋರ್ಸ್ ಹೇಗೆ ಹೆಚ್ಚಿಸಬೇಕು? ಹೇಗೆ ಇಲಾಖೆ ತಯಾರಾಗಬೇಕು? ಅಂತಲೂ ಯೋಚನೆ ಮಾಡ್ತಿದ್ದೇವೆ ಎಂದರು. ಸೈನ್ಸ್ ನವರಿಗೆಲ್ಲ ಯಾವುದೇ ಕೋರ್ಸ್ಗೂ ಸಿಇಟಿ ಮೂಲಕವೇ ಪರಿಗಣಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ. ಪ್ರತಿ ವಿಷಯಕ್ಕೆ 60 ಅಂಕಗಳು ಇರಲಿವೆ. ಸೈನ್ಸ್ ಮೇಲೆ ಹೋಗುವ ಕೋರ್ಸ್ ಗಳಿಗೆ ಸಿಇಟಿ ಪರೀಕ್ಷೆಯನ್ನೇ ಮಾನದಂಡ ಮಾಡಬೇಕು ಎನ್ನುವ ಚಿಂತನೆ ನಡೆಯುತ್ತಿದೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳ ಹಿನ್ನಲೆ ಖಾಸಗಿ, ಸರ್ಕಾರಿ ಕಾಲೇಜುಗಳ ಜೊತೆ ಚರ್ಚೆ ನಡೆಸಲಾಗುತ್ತಿದೆ. ಸೀಟು ಕೂಡ ಹೆಚ್ಚಳವಾಗಲಿದೆ ಎಂದು ಹೇಳಿದರು.
ಕೊರೋನಾ ಕಾರಣದಿಂದಾಗಿ ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದು ಮಾಡಲಾಗಿದೆ. ಪಿಯು ಮಕ್ಕಳಿಗೆ ಫಲಿತಾಂಶ ನೀಡಲು ಪ್ರಥಮ ಪಿಯುಸಿ ಹಾಗೂ ಎಸ್ಎಸ್ಎಲ್ಸಿ ಅಂಕಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. ಜೊತೆಗೆ ಈ ಬಾರಿ ಸೆಕೆಂಡ್ ಪಿಯುಸಿ ಪರೀಕ್ಷೆ ನಡೆಸಿಲ್ಲವಾದ್ದರಿಂದ ವೃತ್ತಿಪರ ಕೋರ್ಸ್ಗಳಿಗೆ ಕೇವಲ ಸಿಇಟಿ ಅಂಕಗಳನ್ನು ಮಾತ್ರ ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಡಿಸಿಎಂ, ಉನ್ನತ ಶಿಕ್ಷಣ ಅಶ್ವತ್ಥ ನಾರಾಯಣ ಅವರಿಗೆ ಮನವಿ ಮಾಡಿದ್ದರು. ಈಗ ಅವರ ಮನವಿಯನ್ನು ಪರಿಗಣಿಸಿರುವ ಡಿಸಿಎಂ ಮೆಡಿಕಲ್, ಡೆಂಟಲ್ ಹಾಗೂ ಎಂಜಿನಿಯರಿಂಗ್ ಕೋರ್ಸ್ಗಳಿಗೆ ಸೇರಬಯಸುವ ವಿದ್ಯಾರ್ಥಿಗಳಿಗೆ ಸಿಇಟಿ ಅಂಕಗಳನ್ನು ಮಾತ್ರ ಮಾನದಂಡ ಮಾಡುವುದಾಗಿ ಹೇಳಿದ್ದಾರೆ.