ಮೀಸಲಾತಿ ಬೇಡಿಕೆ ಪರಿಶೀಲನೆಗೆ ಉನ್ನತಾಧಿಕಾರದ ಸಮಿತಿ ರಚನೆ: ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಕುತಂತ್ರ: ಸಿದ್ದು ಟೀಕೆ

ಬೆಂಗಳೂರು, ಮಾ. 04: ಮೀಸಲಾತಿ ಬೇಡಿಕೆಗಳ ಪರಿಶೀಲನೆಗಾಗಿ ಉನ್ನತಾಧಿಕಾರದ ಸಮಿತಿ ರಚಿಸುವ ಮುಖ್ಯಮಂತ್ರಿಗಳ ನಿರ್ಧಾರ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಕುತಂತ್ರವಾಗಿದ್ದು, ಇದರಲ್ಲಿ ಲವಲೇಶದಷ್ಟು ಪ್ರಾಮಾಣಿಕತೆ ಇಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಮೀಸಲಾತಿ ಬಿಕ್ಕಟ್ಟನ್ನು ಶಾಶ್ವತವಾಗಿ ಪರಿಹರಿಸುವ ಪ್ರಾಮಾಣಿಕ ಉದ್ದೇಶವನ್ನು ಮುಖ್ಯಮಂತ್ರಿ ಹೊಂದಿದ್ದರೆ ಪೂರ್ಣಗೊಂಡು ಸಿದ್ದ ಇರುವ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯ ವರದಿಯನ್ನು ಒಪ್ಪಿಕೊಂಡು ಕೂಡಲೇ ಅದನ್ನು ಅನುಷ್ಠಾನಗೊಳಿಸಲಿ ಎಂದು ಒತ್ತಾಯಿಸಿದ್ದಾರೆ.

ಅಲ್ಲದೇ, ಮೀಸಲಾತಿ ಹೆಚ್ಚಳ ಮತ್ತು ಪ್ರವರ್ಗಗಳ ಬದಲಾವಣೆಯ ಬೇಡಿಕೆಯನ್ನು ಮೀಸಲಾತಿ ಹೆಚ್ಚಳದ ಮೂಲಕ ಮಾತ್ರ ಶಾಶ್ವತವಾಗಿ ಪರಿಹರಿಸಲು ಸಾಧ್ಯ. ಹೀಗಾಗಿ
ತಕ್ಷಣ ಈ ಬೇಡಿಕೆಯನ್ನು ಕೇಂದ್ರ ಸರ್ಕಾರದ ಮುಂದಿಟ್ಟು ಒತ್ತಾಯಿಸಬೇಕು. ಜತೆಗೆ ಈಗ ಎದ್ದಿರುವ ಮೀಸಲಾತಿ ವಿವಾದ ಬಿಜೆಪಿ ಮತ್ತು ಸಂಘ ಪರಿವಾರದ ಕುಟಿಲ ರಾಜಕಾರಣದ ಫಲ. ಇವರು ಹಚ್ಚಿರುವ ವಿವಾದದ ಬೆಂಕಿಗೆ ಇವರೇ ಸ್ವಯಂ ಬಲಿಯಾಗಲಿದ್ದಾರೆ ಎಂದು ಟೀಕಿಸಿದ್ದಾರೆ.

Exit mobile version