ಬಿಬಿಎಂಪಿ ನಿಯಮಗಳಿಗೆ ಗಣೇಶೋತ್ಸವ ಸಮಿತಿಯಿಂದ ತೀವ್ರ ವಿರೋಧ

ಬೆಂಗಳೂರು ಸೆ 9 : ಗಣೇಶ ಉತ್ಸವ ಆಚರಣೆಗೆ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ಹೊರಡಿಸಿರುವ ನಿಯಮಗಳನ್ನು ವಿರೋಧಿಸಿ ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿ ಇಂದು ಬಿಬಿಎಂಪಿ ಕೇಂದ್ರ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದು ಬಿಬಿಎಂಪಿ ಮುಂದೆ ಸಾಕಷ್ಟು ಜನರು ಜಮಾಯಿಸಿದ್ದಾರೆ.

ಬಿಬಿಎಂಪಿ ಮಾಡಿರುವ ನಿಯಮವನ್ನು ವಿರೋಧಿಸಿ ನೂರಾರು ಹಿಂದೂಪರ ಕಾರ್ಯಕರ್ತರು ವಿನೂತನ ಪ್ರತಿಭಟನೆಗೆ ಮುಂದಾಗಿದ್ದು, ಈ ವೇಳೆ ಬಿಬಿಎಂಪಿ ಆವರಣಕ್ಕೆ 12 ಅಡಿ ಗಣೇಶ ಮೂರ್ತಿಯನ್ನು ತರಲು ಯತ್ನಿಸಿದ್ದು, ಈ ವೇಳೆ ಪೊಲೀಸರು ಅಡ್ಡಿಪಡಿಸಿದರು. ಆದರೂ, ಪ್ರತಿಭಟನಾಕಾರರು-ಪೊಲೀಸರ ಮಧ್ಯೆ ತಳ್ಳಾಟ, ನೂಕಾಟ ನಡೆದು, ಸಂಘಟನೆಗಳು ಗಣೇಶ ವಿಗ್ರಹವನ್ನು ಪಾಲಿಕೆ ಆವರಣಕ್ಕೆ ತರಲು ಯಶಸ್ವಿಯಾದರು. ಮನವಿ ಆಲಿಸಲು ಬಂದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಕಾರಿಗೆ ಸಮಿತಿ ಸದಸ್ಯರು ಮುತ್ತಿಗೆ ಹಾಕಿದ್ದು, ಕಚೇರಿಗೂ ಕೂಡ ಮುತ್ತಿಗೆ ಹಾಕಲು ಯತ್ನಿಸಿದ್ದು, ಈ ಹಿನ್ನಲೆಯಲ್ಲಿ ಪೊಲೀಸರು ಮತ್ತು ಹಿಂದೂಪರ ಸಂಘಟನೆಯ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ.

ಈ ಬಗ್ಗೆ ಮಹಾನಗರ ಗಣೇಶ ಉತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ರಾಜು ಮಾತನಾಡಿ, ಬಿಬಿಎಂಪಿ ಹೊರಡಿಸಿರುವ ಮಾರ್ಗಸೂಚಿಗಳನ್ನು ಯಾರೂ ಒಪ್ಪಲು ಸಾಧ್ಯವಿಲ್ಲ. ಗಣಪತಿಯ ಎತ್ತರ, ವಾರ್ಡ್​​ಗೆ ಒಂದು ಗಣಪ ಹಾಗೂ ಕೇವಲ ಮೂರು ದಿನಕ್ಕೆ ಸೀಮಿತ ಮಾಡಿ ಗಣೇಶೋತ್ಸವ ಆಚರಣೆ ನಿಯಮವನ್ನು ನಾವ್ಯಾರೂ ಒಪ್ಪಲು ಸಾಧ್ಯವಿಲ್ಲ. ಗಣೇಶ ವಿಸರ್ಜನೆಗೆ ಬಿಬಿಎಂಪಿ ಎಲ್ಲಾ ಕಡೆ, ಎಲ್ಲಾ ದಿನ ಕಲ್ಯಾಣಿ ವ್ಯವಸ್ಥೆ ಮಾಡಲೇ ಬೇಕು, ಇಲ್ಲವಾದಲ್ಲಿ ಕೆರೆಗೆ ವಿಸರ್ಜಿಸಲಾಗುವುದು ಎಂದರು. ಮನೆಯಲ್ಲಿ ಎರಡು ಅಡಿ ಎತ್ತರದ್ದೇ ಗಣೇಶ ಇಡಬೇಕೆಂದು ಹೇಳಲು ನಿಮಗ್ಯಾವ ಅಧಿಕಾರವಿದೆ, ಈವರೆಗೆ ಇರದ ನಿಯಮಗಳು ಈಗ್ಯಾಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Exit mobile version