ಸರ್ಕಾರ ದೇಶದ ಜನರಿಗೆ ಮಾನಸಿಕವಾಗಿ ಧೈರ್ಯ ತುಂಬಿ, ಆರ್ಥಿಕವಾಗಿ ಶಕ್ತಿ ತುಂಬಬೇಕು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌

ಬೆಂಗಳೂರು, ಏ. 22: ದೇಶದೆಲ್ಲೆಡೆ ಉಲ್ಬಣಿಸಿರುವ ಕೊರೊನಾ ಸೋಂಕಿನ ಆತಂಕದ ಹಿನ್ನೆಲೆಯಲ್ಲಿ ಸರ್ಕಾರ ಮೊದಲು ದೇಶದ ಜನರಿಗೆ ಮಾನಸಿಕವಾಗಿ ಧೈರ್ಯ ತುಂಬಿ, ಆರ್ಥಿಕವಾಗಿ ಶಕ್ತಿ ತುಂಬಬೇಕಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ತಾಂತ್ರಿಕ ಸಮಿತಿ ಸಲಹೆಯಂತೆ ನಿರ್ಧಾರ ಕೈಗೊಳ್ಳಬೇಕು ಎಂದು ನಾವು ಸರ್ಕಾರಕ್ಕೆ ತಿಳಿಸಿದ್ದೇವೆ. ಮಾಧ್ಯಮಗಳ ವರದಿ ಪ್ರಕಾರ ಸರ್ಕಾರಕ್ಕೆ ಲಾಕ್ ಡೌನ್ ಬಗ್ಗೆ ಆಸಕ್ತಿ ಇತ್ತು ಅನಿಸುತ್ತದೆ. ಆದರೆ ನಿನ್ನೆ ಪ್ರಧಾನಮಂತ್ರಿಗಳ ಸಂದೇಶ ಮೇರೆಗೆ ಕೆಲವು ಬದಲಾವಣೆ ಮಾಡಿಕೊಂಡಿದ್ದಾರೆ.

ಸರ್ಕಾರ ಈಗ ಮಾರ್ಗಸೂಚಿ ಹೊರಡಿಸಿದ್ದು, ಎಲ್ಲ ವರ್ಗದ ಜನ ಈಗ ಸಹಕಾರ ನೀಡಬೇಕಾದ ಅವಶ್ಯಕತೆ ಇದೆ. ಸರ್ಕಾರದ ವೈಫಲ್ಯದ ಬಗ್ಗೆ ರಾಜ್ಯಪಾಲರ ಸಭೆಯಲ್ಲಿ ಹೇಳಿದ್ದೇವೆ. ವಿವರವಾಗಿ ಹೇಳಲು ಸಾಧ್ಯವಾಗದಿದ್ದರೂ ಕಳೆದ ಒಂದು ವರ್ಷದಿಂದ ಸರ್ಕಾರದ ವೈಫಲ್ಯ ತಿಳಿಸಿದ್ದೇವೆ. ಅವರು ಈ ವಿಚಾರದಲ್ಲಿ ವಿಫಲರಾಗಿದ್ದಾರೆ ಎಂಬುದಕ್ಕೆ ಸೋಂಕಿನ ಸಂಖ್ಯೆಗಳೇ ಸಾಕ್ಷಿಯಾಗಿದೆ.

ಅಲ್ಲದೇ, ನಿನ್ನೆ ಪ್ರಧಾನಮಂತ್ರಿಗಳ ಭಾಷಣವನ್ನು ಖರ್ಗೆ ಅವರು ಪ್ರವಚನ ಎಂದು ಹೇಳಿದ್ದಾರೆ. ಪ್ರಧಾನ ಮಂತ್ರಿಗಳು ಲಸಿಕೆ ವಿಚಾರವಾಗಿ ಹೇಳಿದ ತೀರ್ಮಾನಗಳನ್ನು ಯಾಕೆ ಮುಂಚಿತವಾಗಿ ಮಾಡಿರಲಿಲ್ಲ? ಇದೆಲ್ಲವೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವೈಫಲ್ಯಗಳನ್ನು ಸಾಬೀತುಪಡಿಸುತ್ತಿವೆ.

ಪರಿಸ್ಥಿತಿ ಕೈತಪ್ಪಿದಾಗ ಲಸಿಕೆ ಹೆಚ್ಚಿನ ಉತ್ಪಾದನೆಗೆ ಅವಕಾಶ ಕೊಟ್ಟಿದ್ದೇನೆ, ತೆರಿಗೆ ವಿನಾಯಿತಿ ಕೊಟ್ಟಿದ್ದೇನೆ ಎಂದು ಹೇಳುತ್ತಿದ್ದಾರೆ. ಲಸಿಕೆಗಳನ್ನು ಬೇರೆ ದೇಶಗಳಿಗೆ ಕಳುಹಿಸಿ ದೊಡ್ಡ ಮನುಷ್ಯ ಎಂದು ಕರೆಸಿಕೊಳ್ಳುವ ಬದಲು, ನಿಮಗೆ ಮತ ಹಾಕಿ ಆಶೀರ್ವಾದ ಮಾಡಿ ಅಧಿಕಾರಕ್ಕೆ ತಂದ ಜನರಿಗೆ ಔಷಧಿ ನೀಡಬಹುದಿತ್ತು. ತಮ್ಮ ದೊಡ್ಡಸ್ಥಿಕೆ ತೋರಿಸಿಕೊಳ್ಳಲು ಲಸಿಕೆಗಳನ್ನು ಬೇರೆ ದೇಶಗಳಿಗೆ ಹಂಚಿದ್ದಾರೆ.

ಸರ್ಕಾರ ಮೊದಲು ದೇಶದ ಜನರಿಗೆ ಮಾನಸಿಕವಾಗಿ ಧೈರ್ಯ ತುಂಬಿ, ಆರ್ಥಿಕವಾಗಿ ಶಕ್ತಿ ತುಂಬಬೇಕು. ಇಷ್ಟು ದಿನಗಳಿಂದ ಆರೋಗ್ಯ, ಕಂದಾಯ ಹಾಗೂ ಗೃಹ ಸಚಿವರು ಮಾತನಾಡುತ್ತಿದ್ದರು. ಈಗ ಜನರ ಆಕ್ರೋಶಕ್ಕೆ ಮುಖ್ಯಕಾರ್ಯದರ್ಶಿಗಳ ಮೂಲಕ ಹೇಳಿಕೆ ಕೊಡಿಸುತ್ತಿದ್ದಾರೆ. ಇದು ಸರ್ಕಾರ ವಿಫಲವಾಗಿದೆ ಎಂಬುದನ್ನು ತೋರಿಸುತ್ತದೆ.
ಡಬಲ್ ಇಂಜಿನ್ ಸರ್ಕಾರದಲ್ಲಿ ಏನಾಗುತ್ತಿದೆ. ಔಷಧಿ ತಯಾರಿಕೆಗೆ ಎಲ್ಲರಿಗೂ ಅವಕಾಶ ಕೊಟ್ಟು ನೀವೇ ಪರಿಶೀಲಿಸಿದ್ದರೆ ಏನಾಗುತ್ತಿತ್ತು? ನಮ್ಮ ರಾಜ್ಯದಲ್ಲೇ ನವೆಂಬರ್ 20ರಂದು ಮುನ್ನಚ್ಚರಿಕೆ ನೀಡಲಾಗಿದ್ದರೂ ಯಾಕೆ ಯಾವುದೇ ಕ್ರಮಕೈಗೊಳ್ಳಲಿಲ್ಲ. ಇದು ಕರ್ನಾಟಕ ಸರ್ಕಾರದ ವೈಫಲ್ಯ ಎಂದು ಟೀಕಿಸಿದರು.

ರಾಜ್ಯದಲ್ಲಿ ಮೊದಲ ಲಸಿಕೆ ಹಾಕಿಸಿಕೊಂಡವರಿಗೆ ಎರಡನೇ ಲಸಿಕೆ ನೀಡಿಲ್ಲ. ಪ್ರಧಾನಿಗಳು ಭಾಷಣ ಮಾಡಿ ಎಲ್ಲವನ್ನು ಮಾಡಿದ್ದೇವೆ ಎನ್ನುತ್ತಾರೆ. ಈಗಲೂ ನಮಗೆ ಹಾಸಿಗೆ, ಆಕ್ಸಿಜನ್ ಬೇಕೆಂದು ನೂರಾರು ಕರೆ ಬರುತ್ತಿದೆ. ಮಾಧ್ಯಮಗಳು ಕೂಡ ಜನರಲ್ಲಿ ಭಯ ಹುಟ್ಟಿಸುವುದು ಬೇಡ. ನೀವು ವಾಸ್ತವದ ಸ್ಥಿತಿ ತೋರಿಸುತ್ತಿದ್ದೀರಿ, ಅದರ ಜತೆಗೆ ಜನರಿಗೆ ಧೈರ್ಯ ತುಂಬುವ ಕೆಲಸ ಮಾಡಿ ಎಂದು ಹೇಳಿದರು.

Exit mobile version