ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಗೆ ರಕ್ಷಾಬಂಧನ ಕಟ್ಟಲು ನೀಡಿದ್ದ ಆದೇಶವನ್ನು ರದ್ದುಗೊಳಿಸಿದ ಸುಪ್ರೀಂಕೋರ್ಟ್

ನವದೆಹಲಿ, ಮಾ. 18: ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಗೆ ರಕ್ಷಾಬಂಧನ ಕಟ್ಟಲು ಆರೋಪಿಗೆ ಹೇಳಿರುವ ಮಧ್ಯ ಪ್ರದೇಶ ಹೈಕೋರ್ಟ್​ನ ಆದೇಶವನ್ನು ಸುಪ್ರೀಂಕೋರ್ಟ್ ರದ್ದು ಮಾಡಿದೆ. ಪ್ರಸ್ತುತ ಪ್ರಕರಣದ ಬಗ್ಗೆ 9 ವಕೀಲೆಯರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಈ ರೀತಿಯ ಪ್ರಕರಣದಲ್ಲಿ ಸ್ಟೀರಿಯೊಟೈಪ್ ಬಿಟ್ಟು ಬಿಡಬೇಕು ಎಂದು ಹೇಳಿದೆ. ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಗೆ ಷರತ್ತು ಬದ್ಧ ಜಾಮೀನು ನೀಡಿರುವುದನ್ನು ಪ್ರಶ್ನಿಸಿದ ನ್ಯಾಯವಾದಿಗಳು, ಈ ರೀತಿಯ ತೀರ್ಪುಗಳು ಮಹಿಳೆಯರನ್ನು ವಸ್ತುವಾಗಿ ಪರಿಗಣಿಸುತ್ತವೆ ಎಂದಿದ್ದಾರೆ.

ಉಜೈನ್ ಜೈಲಿನಲ್ಲಿದ್ದ ವಿಕ್ರಂ ಬಂಗ್ರಿ ಎಂಬಾತ 2020 ಏಪ್ರಿಲ್ ತಿಂಗಳಲ್ಲಿ ನೆರೆಮನೆಯ ಯುವತಿ ಮೇಲೆ ದೌರ್ಜನ್ಯ ನಡೆಸಿದ ಪ್ರಕರಣದಲ್ಲಿ ಜಾಮೀನು ಕೋರಿ ಇಂದೋರ್​ನಲ್ಲಿ ಮನವಿ ಸಲ್ಲಿಸಿದ್ದನು. ಜುಲೈ 30ರಂದು ಮಧ್ಯಪ್ರದೇಶದ ಹೈಕೋರ್ಟ್​ನ ಇಂದೋರ್ ನ್ಯಾಯಪೀಠ ವಿಕ್ರಂಗೆ ಷರತ್ತುಬದ್ಧ ಜಾಮೀನು ನೀಡಿತ್ತು. ಆ ಷರತ್ತುಗಳ ಪೈಕಿ ಒಂದು ಷರತ್ತು ಆರೋಪಿಯು ಸಂತ್ರಸ್ತೆಯ ಮನೆಗೆ ಹೋಗಿ ರಕ್ಷಾಬಂಧನ ಕಟ್ಟಬೇಕು ಎಂಬುದಾಗಿತ್ತು. ಇಷ್ಟೇ ಅಲ್ಲದೆ ಆ ಮಹಿಳೆಯನ್ನು ಸಹೋದರಿಯಂತೆ ಕಾಪಾಡಬೇಕು, ಆಕೆಗೆ ₹11,000 ನೀಡಬೇಕು. ಆ ಮಹಿಳೆಯ ಮಗನಿಗೆ 5000, ಹೊಸ ಬಟ್ಟೆ ಮತ್ತು ಸಿಹಿತಿಂಡಿ ಕೊಡಿಸಬೇಕು ಎಂದು ನ್ಯಾಯಾಲಯ ಹೇಳಿತ್ತು. ಇದೆಲ್ಲದರ ಫೋಟೊವನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ನ್ಯಾಯಪೀಠ ಆದೇಶಿಸಿತ್ತು.

Exit mobile version