Chennai: ಕಳೆದ ಕೆಲ ದಿನಗಳಿಂದ ವಿರಾಮ ನೀಡಿದ್ದ ಮಳೆಯೀಗ ಚೆನ್ನೈ (Chennai)ನಲ್ಲಿ ಅರ್ಭಟಿಸುತ್ತಿದೆ. ಸೋಮವಾರ ಸುರಿದ ಧಾರಾಕಾರ ಮಳೆಯಿಂದ ಚೆನ್ನೈ ಸೇರಿದಂತೆ ಅದರ ಸುತ್ತಮುತ್ತಲಿನ ಪ್ರದೇಶಗಳು ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತವಾಗಿದೆ. ಚೆನ್ನೈನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಹಲವಾರು ವಿಮಾನಗಳು ವಿಳಂಬವಾಗಿವೆ. ಸಾರಿಗೆ ಸಂಚಾರ ಕೂಡ ವಿರಳವಾಗಿದೆ.
![](https://sp-ao.shortpixel.ai/client/to_webp,q_glossy,ret_img,w_1024,h_569/https://vijayatimes.com/wp-content/uploads/2024/06/chennai-rain-Ep-1024x569.jpg)
ಚೆನ್ನೈ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರಾತ್ರಿಯಿಡೀ ತೀವ್ರ ಗಾಳಿಯೊಂದಿಗೆ ಧಾರಾಕಾರ ಮಳೆ (Rain) ಸುರಿದಿದ್ದು ಹಲವೆಡೆ ಮರಗಳು, ವಿದ್ಯುತ್ ಕಂಬಗಳು ಉರುಳಿವೆ. ನಗರದಲ್ಲಿ ಕೋಡಂಬಾಕ್ಕಂ (Kodambakkam) ಸೇರಿದಂತೆ ಕೆಲವೆಡೆ ಮರಗಳು ಧರೆಗುರುಳಿದ್ದು, ಅವುಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ಪೌರಕಾರ್ಮಿಕರು ನಿರತರಾಗಿದ್ದು ಮಳೆ ಬಿಟ್ಟುಬಿಡದಂತೆ ಸುರಿಯುತ್ತಿದೆ. ಬಿಸಿಲಿನ ಬೇಗೆಯಿಂದ ಕಂಗೆಟ್ಟಿದ್ದ ಇಲ್ಲಿನ ನಿವಾಸಿಗಳಿಗೆ ಮಳೆ ಕೊಂಚ ನೆಮ್ಮದಿ ತರುವುದರ ಬದಲಾಗಿ ತತ್ತರಿಸುವಂತೆ ಮಾಡುತ್ತಿದೆ.
ರಾತ್ರಿ ಇಡೀ ವರುಣನ ಅರ್ಭಟಕ್ಕೆ ಹಲವಾರು ಅಂತಾರಾಷ್ಟ್ರೀಯ ಮತ್ತು ದೇಶೀಯ ವಿಮಾನಗಳ ಆಗಮನ ಮತ್ತು ನಿರ್ಗಮನ ವಿಳಂಬವಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಹೇಳಿದ್ದಾರೆ. ದುಬೈ, ದೆಹಲಿ ಮತ್ತು ಪುಣೆ (Dubai, Dehli And Pune)ಗೆ ವಿಮಾನ ಆಗಮನ ಹಾಗೂ ನಿರ್ಗಮನ ಸೇವೆಗಳು ವಿಳಂಬಗೊಂಡವುಗಳಲ್ಲಿ ಸೇರಿವೆ.ಚೆನ್ನೈನಲ್ಲಿ ಈ ವಾರ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ನೀಡಿದೆ.