ದುಬೈ ನ 1 : ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಟೀಮ್ ಇಂಡಿಯಾ ಆಘಾತಕಾರಿ ಸೋಲುಂಡಿದೆ. ಈ ಮೂಲಕ ಈ ಬಾರಿಯ ವಿಶ್ವಕಪ್ನ ಮೊದಲ ಎರಡು ಪಂದ್ಯಗಳಲ್ಲಿಯೂ ಗೆಲುವು ಭಾರತ ತಂಡಕ್ಕೆ ಮರೀಚಿಕೆಯಾಗಿದೆ. ಗೆಲ್ಲಬೇಕಾಗಿದ್ದ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ಭಾರತ ತಂಡ ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಸೆಮಿಫೈನಲ್ಗೇರುವ ಕನಸನ್ನು ಬಹುತೇಕ ಭಗ್ನಗೊಳಿಸಿದಂತಾಗಿದೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪಡೆ ನ್ಯೂಜಿಲೆಂಡ್ಗೆ ಕೇವಲ 111 ರನ್ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಕೇವಲ 14.3 ಓವರ್ಗಳಲ್ಲಿ ನ್ಯೂಜಿಲೆಂಡ್ ತಂಡ 2 ವಿಕೆಟ್ ಕಳೆದುಕೊಂಡು ಗೆದ್ದು ಬೀಗಿದೆ. ಈ ಮೂಲಕ ಕಿವೀಸ್ ಪಡೆ ಸೆಮಿಫೈನಲ್ ರೇಸ್ನಲ್ಲಿ ಮುನ್ನುಗ್ಗಿದೆ
ಟೀಮ್ ಇಂಡಿಯಾ ಪರವಾಗಿ ಯಾವ ಜೋಡಿಯಿಂದಲೂ ಉತ್ತಮ ಜೊತೆಯಾಟ ನೀಡಲು ಸಾಧ್ಯವಾಗಲೇ ಇಲ್ಲ. ಈ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದ ಇಶಾನ್ ಕಿಶನ್ ಹಾಗೂ ರಾಹುಲ್ ಜೋಡಿ ಕೇವಲ 11 ರನ್ಗಳ ಜೊತೆಯಾಟ ನೀಡಿದರು. 8 ಎಸೆತ ಎದುರಿಸಿ ಕೇವಲ 4 ರನ್ಗಳಿಸಿದ ಇಶಾನ್ ಕಿಶನ್ ನಿರಾಸೆ ಮೂಡಿಸಿದರು ಟ್ರೆಂಟ್ ಬೋಲ್ಟ್ ಎಸೆತದಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು. ನಂತರ ರೋಹಿತ್ ಶರ್ಮಾ 14 ರನ್ಗಳಿಸಿ ಇಶ್ ಸೋಧಿ ಎಸೆತದಲ್ಲಿ ವಿಕೆಟ್ ಕಳೆದುಕೊಂಡರು. ನಂತರ ನಾಯಕ ವಿರಾಟ್ ಕೊಹ್ಲಿ ಕೂಡ 9 ರನ್ಗಳಿಸಿ ಇಶ್ ಸೋಧಿ ಎಸೆತದಕ್ಕೆ ಔಟಾಗಿ ಫೆವಿಲಿಯನ್ ಸೇರಿದರು.
ಕಿವೀಸ್ ಪಡೆಯ ಪ್ರಧಾನ ಬೌಲಿಂಗ್ ಅಸ್ತ್ರವಾದ ಟ್ರೆಂಟ್ ಬೋಲ್ಟ್ ಮೂರು ವಿಕೆಟ್ ಪಡೆಯುವ ಮೂಲಕ ಭಾರತ ತಂಡಕ್ಕೆ ಆಘಾತ ನೀಡಿದರು. ಸ್ಪಿನ್ನರ್ ಇಶ್ ಸೋಧಿ ಎರಡು ವಿಕೆಟ್ ಕಬಳಿಸಿದರು. ಇನ್ನು ಟಿಮ್ ಸೌಥಿ ಹಾಗೂ ಆಡಂ ಮಿಲ್ನೆ ಈ ತಲಾ 1 ವಿಕೆಟ್ ಪಡೆದುಕೊಂಡರು.
ಇನ್ನು ಭಾರತ ತಂಡ ನೀಡಿದ 111 ರನ್ಗಳ ಗುರಿಯನ್ನು ಬೆನ್ನಟ್ಟಿದ ಕಿವೀಸ್ ಪಡೆಗೆ ಸಾಧಾರಣ ಆರಂಭ ದೊರೆಯಿತು. ಸ್ಪೋಟಕ ಪ್ರದರ್ಶನ ನಿಡುವ ಸೂಚನೆ ನೀಡಿದ ಮಾರ್ಟಿನ್ ಗಪ್ಟಿಲ್ ತಂಡದ ಮೊತ್ತ 24 ರನ್ಗಳಾಗಿದ್ದಾರ 20 ರನ್ಗಳನ್ನು ಗಳಿಸಿ ಔಟಾದರು. ನಂತರ ಡೇರಲ್ ಮಿಚೆಲ್ಗೆ ಜೊತೆಯಾದ ನಾಯಕ ಕೇನ್ ವಿಲಿಯಮ್ಸನ್ ಅದ್ಭುತ ಆಟವನ್ನು ಪ್ರದರ್ಶಿಸಿದರು. ಈ ಜೋಡಿ ಭರ್ಜರಿ 72 ರನ್ಗಳ ಜೊತೆಯಾಟವನ್ನು ನೀಡಿದರು. ಎಚ್ಚರಿಕೆಯ ಆಟವನ್ನು ಪ್ರದರ್ಶಿಸುತ್ತಾ ಸಾಗಿದ ಈ ಜೋಡಿ ಭಾರತದ ಗೆಲುವಿಗೆ ಸಣ್ಣ ಅವಕಾಶವನ್ನು ಕೂಡ ನೀಡಲಿಲ್ಲ. 49 ರನ್ಗಳಿಸಿದ್ದ ಮಿಚೆಲ್ ಬೂಮ್ರಾಗೆ ವಿಕೆಟ್ ಒಪ್ಪಿಸಿದರಾದರೂ ಇದು ಭಾರತಕ್ಕೆ ಯಾವುದೇ ಲಾಭ ನೀಡಲಿಲ್ಲ. ಅದಾಗಲೇ ಗೆಲುವಿನ ಸನಿಹಕ್ಕೆ ತಲುಪಿದ್ದು ಕೇನ್ ಬಳಗ. ನಂತರ ನಾಯಕ ಕೇನ್ ವಿಲಿಯಮ್ಸನ್ ಹಾಗೂ ಡೆವೋನ್ ಕಾನ್ವೆ ಸೇರಿಕೊಂಡು ತಂಡವನ್ನು ಗೆಲುವಿನತ್ತ ಕೊಂಡೊಯ್ದರು.