ನವದೆಹಲಿ ಸೆ 16 : ಪ್ರಧಾನಿ ಮೋದಿ ಅವರ ಸಂಪುಟದಲ್ಲಿ ದೂರಸಂಪರ್ಕ ಕ್ಷೇತ್ರದಲ್ಲಿ 100% ವಿದೇಶಿ ನೇರ ಬಂಡವಾಳಕ್ಕೆ ಸಮ್ಮತಿ ಸಿದ್ದು, ದೇಶದ ಎಲ್ಲಾ ಜಿಲ್ಲೆಗಳಲ್ಲಿಯೂ ಸಂಯೋಜಿತ ಆರೋಗ್ಯ ಕೇಂದ್ರಗಳ ಸ್ಥಾಪನೆ, ಎಜಿಆರ್ ಬಾಕಿ ಪಾವತಿಗೆ ಟೆಲಿಕಾಂ ಕಂಪೆನಿಗಳಿಗೆ ನಾಲ್ಕು ವರ್ಷಗಳಿಗೆ ಅವಕಾಶ ಸೇರಿದಂತೆ ಇನ್ನೂ ಕೆಲವು ಮಹತ್ವದ ಸುಧಾರಣಾ ಕ್ರಮಗಳಿಗೆ ಅನುಮೋದನೆ ನೀಡಲಾಗಿದೆ.
ದೂರ ಸಂಪರ್ಕ ಕ್ಷೇತ್ರದಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಇದು ದೂರಸಂಪರ್ಕ ಕಂಪೆನಿಗಳ ಜೊತೆಗೆ ಮೊಬೈಲ್ ಬಳಕೆದಾರರಿಗೂ ಹೆಚ್ಚು ಅನುಕೂಲ ಒದಗಿಸಲಿದೆ. ಮುಂದಿನ ದಿನಗಳಲ್ಲಿ ಕೆವೈಸಿಯನ್ನು ಡಿಜಿಟಲೀಕರಣ ಮಾಡುವುದಾಗಿಯೂ ಸರ್ಕಾರ ಹೇಳಿದೆ
ದೇಶದಲ್ಲಿ ಆತ್ಮನಿರ್ಭರ ಸ್ವಸ್ಥ ಭಾರತ ಯೋಜನೆಯ ಅನುಷ್ಠಾನಕ್ಕೆ 64 ಸಾವಿರ ಕೋಟಿ ರೂ. ಗಳನ್ನು ಮೀಸಲಿಡಲಾಗಿದೆ. ದೇಶದ ಎಲ್ಲ ಜಿಲ್ಲೆಗಳು, ಹೋಬಳಿಗಳಿಗೆ ಸಂಬಂಧಿಸಿದಂತೆ ಸುಸಜ್ಜಿತ ಸಂಯೋಜಿತ ಆರೋಗ್ಯ ಕೇಂದ್ರಗಳ ಸ್ಥಾಪನೆಗೂ ಕೇಂದ್ರ ಸರ್ಕಾರ ನಿರ್ಣಯ ಕೈಗೊಂಡಿದೆ. ಎಲ್ಲಾ ರಾಜ್ಯಗಳಿಗೆ ಸಂಬಂಧಿಸಿದಂತೆ 11,024 ನಗರ ಆರೋಗ್ಯ ಕೇಂದ್ರಗಳ ಸ್ಥಾಪನೆ, 15 ಆರೋಗ್ಯ ತುರ್ತು ಶಸ್ತ್ರಚಿಕಿತ್ಸಾ ಕೇಂದ್ರ, ಎರಡು ಸಂಚಾರಿ ಆಸ್ಪತ್ರೆ ನಿರ್ಮಾಣದ ಗುರಿ ಹೊಂದಲಾಗಿದೆ. 2025 – 26 ರ ಒಳಗಾಗಿ ಈ ಎಲ್ಲವುಗಳನ್ನು ಸಂಪೂರ್ಣಗೊಳಿಸುವ ಗುರಿಯನ್ನು ಸರ್ಕಾರ ಹೊಂದಿದೆ.