ಕೇರಳ (Kerala) ಮುಖ್ಯಮಂತ್ರಿ ಪಿಣರಾಯಿ ವಿಜಯನ್ (Pinarayi Vijayan) ಅವರು ಅಂತರ್ಜಾತಿ ವಿವಾಹವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದು, ಹುಡುಗ-ಹುಡುಗಿ ಒಬ್ಬರನ್ನೊಬ್ಬರು ಇಷ್ಟಪಟ್ಟು ಮದುವೆಯಾಗಲು ನಿರ್ಧರಿಸಿದರೆ ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಮತ್ತು ಈ ಸಮಯದಲ್ಲಿ ಯಾವುದೇ ಜಾತಿ ಅಥವಾ ಧರ್ಮ ಅಡ್ಡಿಯಾಗುವುದಿಲ್ಲ ಎಂದಿರುವ ಅವರು ಇದನ್ನು ಬದಲಾವಣೆಯ ಭಾಗ ಎಂದು ಕರೆದಿದ್ದಾರೆ.
ಈ ರೀತಿಯಾದ ಮದುವೆಗಳಿಗೆ ಮೊದಲಿನಿಂದಲೂ ಆಕ್ಷೇಪವಿದ್ದು, ಕೆಲವೊಮ್ಮೆ ಒಂದು ಕಡೆಯವರು ಮಾತ್ರ ವಿರೋಧಿಸುತ್ತಾರೆ. ಮತ್ತೊಮ್ಮೆ ಎರಡೂ ಕಡೆಯಿಂದಲೂ ವಿರೋಧವಿರುತ್ತದೆ. ಆದರೆ ಅಂತಹ ಮದುವೆಗಳು ನಿಲ್ಲುವುದಿಲ್ಲ. ಮುಸ್ಲಿಂ (Muslim) ಮುಖಂಡರೊಬ್ಬರು ತಮ್ಮ ಪಕ್ಷದ ಮೇಲೆ ಮಾಡಿರುವ ಆರೋಪದ ಕುರಿತು ಪತ್ರಕರ್ತರ ಪ್ರಶ್ನೆಗೆ ಮುಖ್ಯಮಂತ್ರಿ ಉತ್ತರಿಸಿದರು.
ಸುನ್ನಿ ಯುವಜನ ಸಂಘದ ಕಾರ್ಯದರ್ಶಿ ನಾಸರ್ ಫೈಝಿ (Nasser Faizi) ಬುಧವಾರ ಈ ಆರೋಪ ಮಾಡಿದ್ದು, ಆರೋಪಗಳ ಪ್ರಕಾರ, ಪಿಣರಾಯಿ ವಿಜಯನ್ ನೇತೃತ್ವದ ರಾಜ್ಯದ ಎಡ ಸಮ್ಮಿಶ್ರ ಸರ್ಕಾರವು ಅಂತರ್ ಧರ್ಮೀಯ ವಿವಾಹಗಳನ್ನು ಉತ್ತೇಜಿಸುತ್ತಿದೆ. ಇದಕ್ಕೆ ನಾಸರ್ ಫೈಝಿ ಎಡಪಕ್ಷಕ್ಕೆ ಸಂಬಂಧಿಸಿದ ವಿದ್ಯಾರ್ಥಿ ಮತ್ತು ಯುವ ಸಂಘಟನೆಗಳನ್ನು ದೂರಿದ್ದರು. ಪಕ್ಷದ ಮೇಲಿನ ಈ ಆರೋಪ ನಿರಾಧಾರ ಎಂದು ಮುಖ್ಯಮಂತ್ರಿ ವಿಜಯನ್ ಹೇಳಿದ್ದಾರೆ.
ಎಡ ಸರ್ಕಾರದ ಜಾತ್ಯತೀತತೆ ಭ್ರಮೆಯಾಗಿದ್ದು, ಜಾತ್ಯತೀತತೆಯ ಹೆಸರಿನಲ್ಲಿ ಸಿಪಿಎಂ (CPM) ಮುಸ್ಲಿಮರಿಗೆ ಏನು ಮಾಡುತ್ತಿದ್ದರೂ ಅದನ್ನು ಎಚ್ಚರಿಕೆಯಿಂದ ನೋಡಬೇಕು ಎಂದು ಕೋಳಿಕ್ಕೋಡ್ (Kolikkod) ಜಿಲ್ಲೆಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ನಾಸರ್ ಫೈಝಿ ಎಡ ಸಮ್ಮಿಶ್ರ ಸರ್ಕಾರದ ವಿರುದ್ಧ ಆರೋಪ ಮಾಡಿದ್ದರು.
ಸಿಪಿಐ(ಎಂ)ನ ವಿದ್ಯಾರ್ಥಿ ಘಟಕವಾದ ಎಸ್ಎಫ್ಐ (SFI) ಅಥವಾ ಯುವ ಸಂಘಟನೆ ಡಿವೈಎಫ್ಐ (DYFI) ಆಗಲಿ ಇದನ್ನು ಮಾಡುತ್ತಿಲ್ಲ ಎಂದು ವಿಜಯನ್ ಹೇಳಿದ್ದಾರೆ. ಇನ್ನು ಮುಖ್ಯಮಂತ್ರಿಗಳ ಪ್ರಕಾರ, ಈ ವಿದ್ಯಾರ್ಥಿ ಸಂಘಟನೆಗಳು ಅಂತರ್ಜಾತಿ ವಿವಾಹದ ಬ್ಯೂರೋ ಆಗಿ ಕೆಲಸ ಮಾಡುತ್ತಿಲ್ಲ. ಇದು ಸಮಯದೊಂದಿಗೆ ನಡೆಯುತ್ತಿರುವ ಬದಲಾವಣೆಯ ಸೂಚಕವಾಗಿದೆ ಮತ್ತು ಸರ್ಕಾರ ಅಥವಾ ಸಂಸ್ಥೆಗಳು ಅಂತಹ ಯಾವುದೇ ಬದಲಾವಣೆಗಾಗಿ ಕೆಲಸ ಮಾಡುತ್ತಿಲ್ಲ. ಅಂತಹ ಬದಲಾವಣೆಗಳನ್ನು ನಿಲ್ಲಿಸುತ್ತಾರೆ ಎಂದು ಯಾರಾದರೂ ಭಾವಿಸಿದರೆ ಅದು ತಪ್ಪಾಗುತ್ತದೆ ಎಂದು ಮುಖ್ಯಮಂತ್ರಿ ಹೇಳಿದರು.
ಭವ್ಯಶ್ರೀ ಆರ್ ಜೆ