ವರುಣ್ ಚಕ್ರವರ್ತಿ ದಾಳಿಗೆ ಕುಸಿದ ಆರ್‌ಸಿಬಿ, ಕನಿಷ್ಠ ಮೊತ್ತ ಪೇರಿಸಿದ ಕೊಹ್ಲಿ ಬಳಗ

ಅಬುಧಾಬಿ ಸೆ 21 : ಅಬುಧಾಬಿಯ ಶೈಖ್ ಝಾಯೆದ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್‌ನ ದ್ವಿತೀಯಾರ್ಧದ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಕನಿಷ್ಠ ಮೊತ್ತಕ್ಕೆ ಕುಸಿಯುವ ಮೂಲಕ ಮೊದಲ ಪಂದ್ಯದಲ್ಲೇ ಹೀನಾಯ ಸೋಲನಭವಿಸಿದೆ.

ಟಾಸ್‌ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಕೊಹ್ಲಿ ಬಳಗ ಆರಂಭದಲ್ಲೇ ಕೊಹ್ಲಿ ವಿಕೆಟ್‌ ಕಳೆದುಕೊಂಡಿತು. ಕನ್ನಡಿಗ ದೇವದತ್ತ ಪಡಿಕ್ಕಲ್‌ ಹೊರತು ಪಡಿಸಿ ಉಳಿದ್ಯಾವ ಬ್ಯಾಟ್ಸ್‌ಮನ್‌ಗಳು ಕೂಡ ಕೋಲ್ಕತ್ತಾ ಬೌಲರ್‌ಗಳ ಮುಂದೆ ಹೆಚ್ಚು ಹೊತ್ತು ನಿಲ್ಲಲು ವಿಫಲರಾದರು.

ಕೆಕೆಆರ್‌ ಪರ ಸ್ಪಿನ್ನರ್‌ ವರುಣ್ ಚಕ್ರವರ್ತಿ ಆಕರ್ಷಕ ಬೌಲಿಂಗ್‌ ದಾಳಿ ನಡೆಸಿ 3 ವಿಕೆಟ್‌ ಕಬಳಿಸಿದರು ಹಾಗೆ ಇವರಿಗೆ ಸಾಥ್ ನೀಡಿದ ರಸೆಲ್‌ ಕೂಡ 3 ವಿಕೆಟ್‌ ಕಬಳಿಸಿ ಆರ್‌ಸಿಬಿಯನ್ನು 100ರ ಒಳಗೆ ಕಟ್ಟಿಹಾಕುವಲ್ಲಿ ಸಫಲರಾದರು.

ಕನಿಷ್ಠ ಮೊತ್ತ ಬೆನ್ನತ್ತಿದ್ದ ಕೆಕೆಆರ್‌ ಶುಭಂಗಿಲ್‌ ಮತ್ತು ವೆಂಕಟೇಶ್ ಅಯ್ಯರ್‌ ಅವರ ಬಿರುಸಿನ ಬ್ಯಾಟಿಂಗ್‌ ನೆರವಿಂದ 10 ಓವರ್‌ಗಳಲ್ಲಿ ಒಂದು ವಿಕೆಟ್‌ ಕಳೆದುಕೊಂಡು ಸುಲಭವಾಗಿ ಗುರಿ ಬೆನ್ನತ್ತಿದ್ದರು.

ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮೊದಲನೇ ಭಾಗದಲ್ಲಿ 7 ಪಂದ್ಯಗಳನ್ನಾಡಿ 5 ಪಂದ್ಯಗಳಲ್ಲಿ ಜಯಗಳಿಸಿ, ಕೇವಲ 2 ಪಂದ್ಯಗಳಲ್ಲಿ ಮಾತ್ರ ಸೋಲನ್ನು ಅನುಭವಿಸಿದ್ದ ಕೊಹ್ಲಿ ಪಡೆ ಮೇಲೆ ಕ್ರೀಡಾಭಿಮಾನಿಗಳಿಗೆ ಬೆಟ್ಟದಷ್ಟು ನಿರೀಕ್ಷೆ ಇತ್ತು. ಅದರಲ್ಲಿಯೂ ಈ ಬಾರಿಯ ಟೂರ್ನಿಯ ಮೊದಲ ಭಾಗದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 204 ರನ್‌ಗಳ ದೊಡ್ಡ ಮೊತ್ತವನ್ನು ಕಲೆಹಾಕಿ 38 ರನ್‌ಗಳ ಭರ್ಜರಿ ಜಯವನ್ನು ಸಾಧಿಸಿತ್ತು. ಹೀಗಾಗಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಬೆಂಗಳೂರು ತಂಡ ಈ ಬಾರಿಯೂ ಉತ್ತಮ ಪ್ರದರ್ಶನ ನೀಡಲಿದೆ ಎಂಬ ನಿರೀಕ್ಷೆ ಇತ್ತು.

ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೀನಾಯವಾಗಿ ಸೋಲಲು ಕಾರಣರಾದ ಆಟಗಾರರಲ್ಲಿ ವರುಣ್ ಚಕ್ರವರ್ತಿ ಪ್ರಮುಖರು. ಬೌಲಿಂಗ್‌ನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್, ಸಚಿನ್ ಬೇಬಿ ಮತ್ತು ವನಿಂದು ಹಸರಂಗ ಅವರ ವಿಕೆಟ್‍ಗಳನ್ನು ಪಡೆದ ವರುಣ್ ಚಕ್ರವರ್ತಿ ಕೈಲ್ ಜೆಮಿಸನ್ ಅವರನ್ನು ರನ್‌ಔಟ್ ಕೂಡ ಮಾಡಿದರು ಹಾಗೂ ಮೊಹಮ್ಮದ್ ಸಿರಾಜ್ ಕ್ಯಾಚ್‌ನ್ನೂ ಕೂಡ ವರುಣ್ ಚಕ್ರವರ್ತಿ ಪಡೆದುಕೊಂಡು ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು

Exit mobile version