ರೈತರ ಪರ ನಿಲ್ಲದಿದ್ದರೆ ಅದು ಆತ್ಮವಂಚನೆ; ಸ್ಟಾರ್‌ಗಳು ಅರ್ಥ ಮಾಡಿಕೊಳ್ಳಲಿ: ದಿನೇಶ್ ಗುಂಡೂರಾವ್

ಬೆಂಗಳೂರು, ಫೆ. 04: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ‌ರೈತರು ಕಳೆದೆರಡು ತಿಂಗಳಿಂದ ನಡೆಸುತ್ತಿರುವ ಹೋರಾಟದ ಬಗ್ಗೆ ದನಿ ಎತ್ತದ‌ ವಿವಿಧ ಕ್ಷೇತ್ರದ ಸೆಲೆಬ್ರಿಟಿಗಳ ನಡೆಗೆ ಆಕ್ಷೇಪ ವ್ಯಕ್ತವಾಗುತ್ತಿದೆ.

ಅನ್ನದಾತರ ಮುಷ್ಕರದ ಬಗ್ಗೆ ಯಾವುದೇ ಪ್ರತಿಕ್ರಿಯೆ ‌ನೀಡದ ಸ್ಟಾರ್ ಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್, ಭಾರತದ ಆಂತರಿಕ ವಿಚಾರದಲ್ಲಿ ವಿದೇಶಿಯರ ಮಧ್ಯಪ್ರವೇಶ ಒಪ್ಪಲಾಗದು. ಆದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಮುಜುಗರದ ಸ್ಥಿತಿಗೆ ತಂದಿದ್ಯಾಕೆ ಎಂದು ಆಳುವ ಸರ್ಕಾರವನ್ನು ಪ್ರಶ್ನೆ ಮಾಡಬಹುದಲ್ಲವೆ? ಕೇಂದ್ರ ಸರ್ಕಾರದ ಪರ ಈಗ ಬ್ಯಾಟಿಂಗ್ ಮಾಡುವವರು ಕರಾಳ ಕೃಷಿ ಕಾಯ್ದೆ ರದ್ದು ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಬಹುದಿತ್ತಲ್ಲವೆ? ಎಂದು ಪ್ರಶ್ನಿಸಿದ್ದಾರೆ.

ರೈತರ ಪ್ರತಿಭಟನೆ ವಿಚಾರದಲ್ಲಿ ಸೆಲೆಬ್ರಿಟಿಗಳ ಅಷಾಢಭೂತಿತನ ಎದ್ದು ಕಾಣುತ್ತಿದೆ. ಎರಡು ತಿಂಗಳಿನಿಂದಲೂ ರೈತರು ಜೀವ ಪಣಕಿಟ್ಟು ಹೋರಾಟ ನಡೆಸುತ್ತಿದ್ದಾರೆ. 140ಕ್ಕೂ ಹೆಚ್ಚು ರೈತರು ಹುತಾತ್ಮರಾಗಿದ್ದಾರೆ.
ಈ ಸಂದರ್ಭದಲ್ಲಿ ಸೆಲಿಬ್ರಿಟಿಗಳು ರೈತರ ಜೊತೆ ನಿಂತು,ಸಮಸ್ಯೆ ಬಗೆಹರಿಸಲು ಸರ್ಕಾರಕ್ಕೆ ಸಲಹೆ ನೀಡಿದ್ದರೆ ಅದಕ್ಕೊಂದು ಅರ್ಥವಿರುತಿತ್ತು.

ರೈತ ದೇಶದ ಬೆನ್ನೆಲುಬು ಎಂಬ ತೋರುಗಾಣಿಕೆಯ ಹೇಳಿಕೆಯಿಂದ ಏನು ಪ್ರಯೋಜನ? ದೇಶದ ಬೆನ್ನೆಲುಬಾದ ರೈತರನ್ನೇ ಈ ಸರ್ಕಾರ ದೇಶದ್ರೋಹಿಗಳಂತೆ ಬಿಂಬಿಸುತ್ತಿದೆ. ರೈತರು ದೆಹಲಿ ಪ್ರವೇಶಿದಂತೆ ರಸ್ತೆಯ ತುಂಬಾ ಮೊಳೆ ಹೊಡೆದು, ಗೋಡೆ ಕಟ್ಟಿ, ಅನಾಗರಿಕವಾಗಿ ನಡೆಸಿಕೊಳ್ಳುತ್ತಿದೆ. ಸ್ಟಾರ್‌ಗಳಿಗೆ ಇದನ್ನು ಪ್ರಶ್ನಿಸಬೇಕೆಂಬ ಆತ್ಮಸಾಕ್ಷಿ ಕಾಡಲಿಲ್ಲವೆ?

ಇಂದು ಉಳ್ಳವರ ದೃಷ್ಟಿಯಲ್ಲಿ ಬಂಡವಾಳಶಾಹಿಗಳ ದೃಷ್ಟಿಯಲ್ಲಿ, ಬಂಡವಾಳಶಾಹಿಗಳಿಗೆ ತಮ್ಮನ್ನು ಮಾರಿಕೊಂಡಿರುವ ಸರ್ಕಾರದ ದೃಷ್ಟಿಯಲ್ಲಿ ರೈತ ಖಳನಾಯಕನಿರಬಹುದು.
ಆದರೆ ವಾಸ್ತವವಾಗಿ ಭಾರತದ ಆತ್ಮ ಮತ್ತು ಅಸ್ಮಿತೆಯ ಸಂಕೇತವೇ ರೈತ ಎಂಬುದು ಕಟು ಸತ್ಯ. ಇಂತಹ ರೈತರ ಪರ ನಿಲ್ಲದೆ ಹೋದರೆ ಅದು ಆತ್ಮವಂಚನೆ. ಇದನ್ನು ಸ್ಟಾರ್‌ಗಳು ಅರ್ಥ ಮಾಡಿಕೊಳ್ಳಲಿ ಎಂದಿದ್ದಾರೆ.

Exit mobile version