ಕಲಾಪ ಕೋಲಾಹಲ, ರಾಜ್ಯದ ಮಾನ ಹರಾಜು!

ಬೆಂಗಳೂರು, ಡಿ. 15: ಕರ್ನಾಟಕ ವಿಧಾನ ಪರಿಷತ್‌ ಇತಿಹಾಸದಲ್ಲಿಯೇ ಇಂದಿನ ಮೇಲ್ಮನೆ ಕಲಾಪದಲ್ಲಿ ಭುಗಿಲೆದ್ದ ಕೋಲಾಹಲ ಕಪ್ಪು ಚುಕ್ಕೆಯಾಗಿ ಪರಿಣಮಿಸಿದೆ. ಇದೇ ಮೊದಲ ಬಾರಿಗೆ ದೇಶದ ಎದುರು ರಾಜ್ಯದ ಮಾನ ಹರಾಜಾಗಿದೆ. ಕಾರಣ, ವಿಧಾನ ಪರಿಷತ್ ಸಭಾಪತಿ ವಿರುದ್ಧ ಹಕ್ಕು ಚ್ಯುತಿಯ ವೇಳೆ, ತಮ್ಮ ನಡತೆ ಮೀರಿ, ರೌಡಿಗಳಂತೆ ಬಿಜೆಪಿ-ಕಾಂಗ್ರೆಸ್ ಸದಸ್ಯರು ಕಿತ್ತಾಡಿದ್ದಾರೆ.

ರಾಜ್ಯ ವಿಧಾನಮಂಡಲದ ಇತಿಹಾಸದಲ್ಲಿ ಇಂದು ಕರಾಳ ಅಧ್ಯಾಯವೊಂದು ಬರೆಯಲ್ಪಟ್ಟಿದೆ. ವಿಧಾನ ಪರಿಷತ್‌ನ ಕಲಾಪದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಕೈ ಕೈ ಮಿಲಾಯಿಸಿ ಕೋಲಾಹಕಾರಿ ವಾತಾವರಣವೇ ಸೃಷ್ಠಿಯಾಗಿದೆ. ಸಭಾಧ್ಯಕ್ಷರ ಪೀಠದಲ್ಲಿದ್ದ ಉಪ ಸಭಾಪತಿಯ ಪೀಠದಿಂದ ಕೆಳಗೆ ಇಳಿಯುವಂತೆ ಆಗ್ರಹಿಸಿದ ಕಾಂಗ್ರೆಸ್ ಸದಸ್ಯರು, ಪೀಠದ ಮುಂದೆ ಧರಣಿ ಆರಂಭಿಸಿದರು.

ಈ ಸಮಯದಲ್ಲಿ ಮಾತಿಗೆ ಮಾತು ಬೆಳೆದು, ಕೈ ಕೈ ಮಿಲಾಯಿಸುವ ವಾತಾವರಣ ಸೃಷ್ಠಿಯಾಯಿತು. ಆಡಳಿತಾರೂಢ ಬಿಜೆಪಿ ಜೆಡಿಎಸ್ ಸದಸ್ಯರ ಬೆಂಬಲದೊಂದಿಗೆ, ಸಭಾಪತಿ ಪ್ರತಾಪ ಚಂದ್ರ ಶೆಟ್ಟಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದರು. ನಿಯಮಾನುಸಾರ ಅವಿಶ್ವಾಸದ ಸೂಚನೆ ನೀಡಿದ್ದು, ಈ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿದ ಬಿಜೆಪಿ, ಸಭಾಧ್ಯಕ್ಷರ ವಿರುದ್ಧವೇ ಅವಿಶ್ವಾಸ ಗೊತ್ತುವಳಿ ನೀಡಿರುವ ಹಿನ್ನಲೆಯಲ್ಲಿ ಅವರು ಪೀಠಾಸೀನರಾಗುವಂತಿಲ್ಲ. ಅವರ ಬದಲಿಗೆ, ಉಪ ಸಭಾಪತಿ, ಧರ್ಮೇಗೌಡ ಅವರು, ಸದನ ಕಾರ್ಯಕಲಾಪ ನಡೆಸಬೇಕೆಂದು ಆಗ್ರಹಿಸಿ, ವಿಧಾನ ಪರಿಷತ್ ನ ಕಾರ್ಯದರ್ಶಿಗೆ ಪತ್ರ ನೀಡಿದ್ದರು.

ಇದನ್ನು ವಿರೋಧಿಸಿದಂತ ಕಾಂಗ್ರೆಸ್ ಸದಸ್ಯರು, ಇಂದಿನ ಕಾರ್ಯಕಲಾಪ ಪಟ್ಟಿಯಲ್ಲಿ ಸಭಾದ್ಯಕ್ಷರ ವಿರುದ್ಧದ ಅವಿಶ್ವಾಸ ನಿರ್ಣಯ ಚರ್ಚೆ ವಿಷಯ ಇಲ್ಲ. ಹೀಗಾಗಿ ಎಂದಿನಂತೆ ಸಭಾಪತಿಗಳೇ ನಿಗದಿತ ಕಾರ್ಯಕಲಾಪ ನಡೆಸಬೇಕೆಂದು ವಾದಿಸಿದರು. ಹೀಗಾಗಿ ಪರಿಷತ್ ಕಲಾಪ ಕುತೂಹಲ ಮೂಡಿಸಿತು. ಇಂದು ಬೆಳಿಗ್ಗೆ ಕಲಾಪ ಆರಂಭದ ಕೋರಂ ಗಂಟೆ ಹೊಡೆಯುತ್ತಿರುವಾಗಲೇ ಸದನ ಪ್ರವೇಶಿಸಿದ ಉಪ ಸಭಾಪತಿ ಧರ್ಮೇಗೌಡ, ಏಕಾಏಕಿ ಪೀಠಾಸೀನರಾದರು. ಇದನ್ನು ಕಂಡ ಕಾಂಗ್ರೆಸ್ ಸದಸ್ಯರು, ಕಲಾಪ ನಿಯಮವಾಳಿಗಳ ಪ್ರಕಾರ ನಡೆಯುತ್ತಿಲ್ಲ ಎಂದು ಕಲಾಪ ಆರಂಭಕ್ಕೂ ಮುನ್ನವೇ ಉಪ ಸಭಾಪತಿಗಳು ಪೀಠಾಸೀನರಾಗುವುದು ಸರಿಯಲ್ಲ ಎಂದು ಪ್ರಶ್ನಿಸಿ, ಧರ್ಮೇ ಗೌಡ ಅವರನ್ನು ಪೀಠದಿಂದ ಕೆಳಗಿಳಿಯುವಂತೆ ಆಗ್ರಹಿಸಿದರು.

ಇದಕ್ಕೆ ಪ್ರತಿಯಾಗಿ ಬಿಜೆಪಿ ಸದಸ್ಯರು, ಸಭಾಪತಿಗಳ ವಿರುದ್ಧ ಅವಿಶ್ವಾಸ ಮಂಡನೆಯಾಗಿರುವುದರಿಂದ ಅವರು ಪೀಠದಲ್ಲಿ ಆಸೀನರಾಗುವಂತಿಲ್ಲ ಎಂದು ಹೇಳಿ, ಚರ್ಚೆಗೆ ಮುಂದಾದರು. ಇಂದು ಆಡಳಿತ ಮತ್ತು ಪ್ರತಿ ಪಕ್ಷಗಳ ನಡುವಿನ ವಾಗ್ವಾದಕ್ಕೆ ಕಾರಣವಾಯಿತು. ಕೂಡಲೇ ಧರಣಿ ಆರಂಭಿಸಿದ ಕಾಂಗ್ರೆಸ್ ಸದಸ್ಯರು, ಸಭಾಧ್ಯಕ್ಷರ ಪೀಠದತ್ತ ಧಾವಿಸಿ, ಧರ್ಮೇಗೌಡ ಅವರನ್ನು ಕೆಳಗಿಳಿಯುವಂತೆ ಒತ್ತಾಯಿಸಿದರು. ಅಲ್ಲದೇ ಅವರ ಕೈಹಿಡಿದು ಎಳೆಯಲು ಮುಂದಾದರು. ಕೂಡಲೇ ಸಭಾಧ್ಯಕ್ಷರ ಪೀಠದತ್ತ ಧಾವಿಸಿದ ಬಿಜೆಪಿ ಸದಸ್ಯರು, ಇದಕ್ಕೆ ಅಡ್ಡಿಪಡಿಸಲು ಯತ್ನಿಸಿದರು. ಇದರಿಂದಾಗಿ ಸದನದಲ್ಲಿ ಗದ್ದಲ, ಕೋಲಾಹಲ ಉಂಟಾಗಿ, ಬಿಜೆಪಿ-ಜೆಡಿಎಸ್ ಸದಸ್ಯರು ಕೈ ಕೈ ಮಿಲಾಯಿಸಿ ಕಿತ್ತಾಡಿದರು. ಇದರಿಂದಾಗಿ ಸದನ ಅನಿರ್ಧಿಷ್ಟಾವತಿಗೆ ಮುಂದೂಡಲ್ಪಟ್ಟಿತು.

Exit mobile version