Mysore: ನರೇಂದ್ರ ಮೋದಿಯವರು ಪ್ರಧಾನಿಯಾಗಿ 10 ವರ್ಷ ಆಯ್ತು. ಅವರು ಕೊಟ್ಟ ಭರವಸೆಯಲ್ಲಿ ಒಂದೇ ಒಂದನ್ನೂ ಈಡೇರಿಸಿಲ್ಲ. ಹೀಗಾಗಿ ದೇಶದ ಜನ ಈ ಬಾರಿ ನರೇಂದ್ರ ಮೋದಿಯವರ ಮಾತು ಮತ್ತು ಕೆಲಸ ಎರಡನ್ನೂ ತುಲನೆ ಮಾಡಿ ಮತ ಹಾಕುತ್ತಾರೆ. ಮೋದಿ ಬರೀ ಮಾತಲ್ಲಿ ಮನೆ ಕಟ್ಟಿದ್ದು ಸಾಕು ಎಂದು ದೇಶದ ಜನ ತೀರ್ಮಾನಿಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ದೇಶದಲ್ಲಿರುವ ಕಪ್ಪು ಹಣವನ್ನೆಲ್ಲಾ ಕರಗಿಸ್ತೀನಿ ಎಂದು ಹೇಳಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಡಿಮಾನಟೈಸೇಷನ್ ಮಾಡಿದರು. ಆದರೆ ಇದರಿಂದ ಕಪ್ಪು ಹಣ ಕರಗಲಿಲ್ಲ. ಇದರಿಂದ ಲಾಭ ಆಗಿದ್ದು ಅಂಬಾನಿ-ಅದಾನಿಗೆ ಮಾತ್ರ. ನೋಟು ನಿಷೇಧಕ್ಕೂ ಮೊದಲು ಇವರ ಬಳಿ ಇದ್ದ ಆಸ್ತಿ, ನೋಟು ನಿಷೇಧದ ಬಳಿಕ ಅವರ ಆಸ್ತಿಯಲ್ಲಿ ಆದ ಏರಿಕೆಯನ್ನು ನೀವೇ ತುಲನೆ ಮಾಡಿ ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು.
ವಿದೇಶದಲ್ಲಿರುವ ಕಪ್ಪುಹಣ ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಾಕ್ತೀವಿ ಅಂದ್ರು, ಹಾಕಿದ್ರಾ? ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀನಿ ಅಂದ್ರು, ಇವರ ಮಾತನ್ನು ನಂಬಿದ ದೇಶದ ಯುವಕ – ಯುವತಿಯರು ಎಲ್ಲಿ ಉದ್ಯೋಗ ಎಂದರೆ ಪಕೋಡಾ ಮಾರಾಟ ಮಾಡಿ ಎಂದರು. ಇನ್ನು ಸಬ್ ಕಾ ಸಾಥ್, ಸಬ್ ಕಾ ವಿಕಾಸ್ (Sab Ka Sath, Sab Ka Vikas) ಅಂದ್ರು. ಯಾರದ್ದಾದರೂ ವಿಕಾಸ ಆಗಿದ್ಯಾ? ಅಚ್ಛೆ ದಿನ್ ಆಯೆಗಾ ಅಂದರು, ನಿಮ್ಮಲ್ಲಿ ಯಾರ ಬದುಕಲ್ಲಾದರೂ ಅಚ್ಚೆ ದಿನ್ ಬಂದಿದೆಯಾ? ಭಾರತೀಯರನ್ನು ಕೇವಲ ಭಾವನಾತ್ಮಕವಾಗಿ ಕೆರಳಿಸಿ ಅವರ ಬದುಕನ್ನು ಹಾಳು ಮಾಡಿದ ಸುಳ್ಳುಕೋರರಿಗೆ ದೇಶದ ಪ್ರಜ್ಞಾವಂತ ಸಮುದಾಯ ತಕ್ಕ ಪಾಠ ಕಲಿಸಲಿದೆ.
ದೇಶದ ಜನ ಈ ಬಾರಿ ಮೋದಿಯವರ ಮಾತು ಮತ್ತು ಕೆಲಸ ಎರಡನ್ನೂ ತುಲನೆ ಮಾಡಿ ಮತ ಹಾಕುತ್ತಾರೆ. ಹೀಗಾಗಿ ಅವರಿಗೆ 200 ಸೀಟು ದಾಟುವುದೇ ಕಷ್ಟ ಎನ್ನುವ ವಾಸ್ತವದ ಮನವರಿಕೆಯಾಗಿದೆ ಹಾಗಾಗಿ 400 ಸೀಟು ಗೆಲ್ಲುತ್ತೇವೆ ಎಂದು ಹೇಳಿ ಜನರಲ್ಲಿ ಭ್ರಮೆ ಸೃಷ್ಟಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.