ಬೆಂಗಳೂರು, ಜೂ. 04: ಮಂಗಳೂರಿನ ಎಂಆರ್ ಪಿಎಲ್ ಸಂಸ್ಥೆಯು ಸ್ಥಳೀಯರಿಗೆ ವಂಚಿಸಿ ಉತ್ತರ ಭಾರತೀಯರಿಗೆ ಉದ್ಯೋಗ ನೀಡಿರುವ ಹಿನ್ನೆಲೆಯಲ್ಲಿ ಕರಾವಳಿಯ ಜನಪರ ಸಂಘಟನೆಗಳು ಜೂ.5ಕ್ಕೆ ಕರೆ ನೀಡಿರುವ ಮನೆ ಮನೆ ಪ್ರತಿಭಟನೆಗೆ ಕರ್ನಾಟಕ ರಕ್ಷಣಾ ವೇದಿಕೆ ಬೆಂಬಲಿಸುತ್ತದೆ ಎಂದು ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಹೇಳಿದರು.
ಎಂಆರ್ ಪಿಎಲ್ ಸಂಸ್ಥೆ 233 ಹುದ್ದೆಗಳಿಗೆ ಉತ್ತರ ಪ್ರದೇಶ, ಬಿಹಾರ ಮತ್ತಿತರ ರಾಜ್ಯಗಳ ಜನರನ್ನೇ ತುಂಬಿಕೊಂಡಿದೆ. ಎಂಆರ್ ಪಿಎಲ್ ಗೆ ಭೂಮಿ ಕೊಟ್ಟ ಜನರಿಗೇ ಉದ್ಯೋಗ ನೀಡದಿದ್ದರೆ ಇಂಥ ಉದ್ಯಮಗಳು ನಮಗೆ ಬೇಕಾಗಿಲ್ಲ. ಸ್ಥಳೀಯರಿಗೆ ಉದ್ಯೋಗ ದೊರೆಯಬೇಕಿರುವುದು ಸಹಜ ನ್ಯಾಯ.
ಡಾ. ಸರೋಜಿನಿ ಮಹಿಷಿ ವರದಿ ಇಂದಿಗೂ ಜಾರಿಯಾಗಿಲ್ಲ. ರಾಜ್ಯ ಸರ್ಕಾರ ಪರಿಷ್ಕೃತ ಆದೇಶವನ್ನೂ ಹೊರಡಿಸಿತು, ಅದೂ ಕೂಡ ಪಾಲನೆ ಆಗುತ್ತಿಲ್ಲ. ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳೇ ಹೀಗೆ ಸ್ಥಳೀಯರಿಗೆ ವಂಚಿಸಿದರೆ ಜನರು ಏನು ಮಾಡಬೇಕು? ಎಂದು ಪ್ರಶ್ನಿಸಿದ್ದಾರೆ.
ಮಣ್ಣಿನ ಮಕ್ಕಳಿಗೆ ಉದ್ಯೋಗ ಒದಗಿಸದ ಎಂಆರ್ಪಿಎಲ್ ವಿಸ್ತರಣೆಗಾಗಿ ಬೇಡಿಕೆ ಇಟ್ಟಿರುವ ಒಂದಿಂಚು ಜಾಗವನ್ನೂ ಕೊಡಕೂಡದು. ಎಂಆರ್ ಪಿಎಲ್ ನಲ್ಲಿ ಸ್ಥಳೀಯರಿಗೆ ಸಿಂಹಪಾಲು ಇರಬೇಕು. ಉಳಿದ ಹುದ್ದೆಗಳು ಕರ್ನಾಟಕದ ಇತರ ಜಿಲ್ಲೆಗಳಿಗೆ ಲಭ್ಯವಾಗಬೇಕು ಎಂದು ಸರಣಿ ಟ್ವೀಟ್ ಮಾಡಿದ್ದಾರೆ.