ಕಾಳಿಂಗ ಸರ್ಪದ(King Cobra) ಹೆಸರು ಕೇಳಿದರೇನೇ ಮೈ ನಡುಕ ಹುಟ್ಟುತ್ತದೆ. ಅತೀ ವಿಷಕಾರಿಯಾದ ಈ ಹಾವಿಂದ ಕಚ್ಚಿಸಿಕೊಂಡವರು ಬದುಕುಳಿಯುವುದು ತೀರಾ ಅಪರೂಪ.

ಆದರೆ ಉತ್ತರ ಪ್ರದೇಶದಲ್ಲಿ(Uttarpradesh) ಕೆಲವು ವರ್ಷಗಳ ಹಿಂದೆ ನಡೆದ ಪ್ರಸಂಗವೊಂದು ಬಹಳ ಆಶ್ಚರ್ಯಕರವಾಗಿದೆ. ಕಾಳಿಂಗ ಸರ್ಪದಿಂದ ಎರಡು ಬಾರಿ ಕಚ್ಚಿಸಿಕೊಂಡರೂ ವ್ಯಕ್ತಿಯೊಬ್ಬ ಬದುಕುಳಿದಿದ್ದಾನೆ. ಆದರೆ ಅದಕ್ಕಿಂತ ವಿಚಿತ್ರ ಸಂಗತಿ ಏನೆಂದರೆ ಒಂದು ಬಾರಿ ಕಚ್ಚಿದ ಹಾವಿಂದ ಆತನೇ ಮತ್ತೊಂದು ಬಾರಿ ಕಚ್ಚಿಸಿಕೊಂಡಿದ್ದಾನೆ. ಕಮಿಪುರ(Kamipura) ಎಂಬ ಗ್ರಾಮದಲ್ಲಿ ಈ ವಿಲಕ್ಷಣ ಘಟನೆ ನಡೆದಿದ್ದು, ಎಫ್ಸಿಐ ಗೋದಾಮಿನಲ್ಲಿ ಗುತ್ತಿಗೆದಾರನಾಗಿರುವ 42 ವರ್ಷದ ಸರ್ಫರಾಜ್ ನಿಗೆ ಗೋದಾಮಿಗೆ ಹೋದ ಸಂದರ್ಭದಲ್ಲಿ ಕಾಳಿಂಗ ಸರ್ಪವೊಂದು ಕಚ್ಚಿತ್ತು.
ಮನೆಯಿಂದ ಹೊರಡುವಾಗಲೇ ಸರ್ಫರಾಜ್ ಮುನಿಸಿಂದ ಹೊರಟಿದ್ದ. ಹಾವು ಕಚ್ಚಿದಾಗ ಭಯಬೀಳುವ ಬದಲು ಆತನ ಕೋಪ ಮತ್ತಷ್ಟು ಏರಿದ್ದು, ಮತ್ತೊಮ್ಮೆ ಕಚ್ಚುವಂತೆ ವಿಷಕಾರಿ ಹಾವಿಗೆ ಸವಾಲೆಸೆದು ಮತ್ತೆ ಕಚ್ಚಿಸಿಕೊಂಡಿದ್ದಾನೆ. ಹೌದು, ಹಾವಿನ ಕಡಿತದಿಂದ ಭಯಗೊಳ್ಳುವ ಬದಲು ಹಾವಿನ ಮೇಲೆ ಕೋಪಗೊಂಡ ಆತ, ಅದನ್ನು ಕೈಯ್ಯಲ್ಲಿ ಹಿಡಿದು, ‘ನಾನು ಸಾಯುತ್ತೇನೆ, ನಿನ್ನನ್ನು ಕೊಲ್ಲುತ್ತೇನೆ. ಮತ್ತೆ ಕಚ್ಚು, ಇಲ್ಲದಿದ್ದರೆ ಕತ್ತರಿಸಿ ಹಾಕುತ್ತೇನೆ’, ಎಂದು ಆವೇಶದಲ್ಲಿ ಕಿರುಚಾಡಿ ಮತ್ತೆ ಕಚ್ಚಿಸಿಕೊಂಡಿದ್ದಾನೆ.

ಇದೆಲ್ಲವನ್ನು ನೋಡುತ್ತಿದ್ದ ಸುತ್ತಮುತ್ತಲಿದ್ದವರು ತಕ್ಷಣ ಹಾವನ್ನು ಜಾಗರೂಕತೆಯಿಂದ ಹಿಡಿದು ಬಕೇಟಿನಲ್ಲಿ ಹಾಕಿದ್ದಾರೆ ಮತ್ತು ಸರ್ಫರಾಜ್ನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಎನ್ನಲಾಗಿದೆ. ಕಾಳಿಂಗ ಸರ್ಪ ತೀಕ್ಷ್ಣ ವಿಷಪೂರಿತ ಹಾವಾಗಿದ್ದು, ಕಚ್ಚಿದ ಕೆಲವೇ ನಿಮಿಷದಲ್ಲೇ ಸಾವಾಗುತ್ತಾರೆ. ಆದರೆ ಎರಡು ಬಾರಿ ಕಚ್ಚಿಸಿಕೊಂಡರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸರ್ಫರಾಜ್ ಸಾಮಾನ್ಯವಾಗಿ ಬದುಕುತ್ತಿರುವುದು ಎಲ್ಲರನ್ನು ಆಶ್ಚರ್ಯಕ್ಕೆ ದೂಡಿದೆ.