ಪೆಟ್ರೋಲ್ ಡೀಸೆಲ್ ದರ ಕಡಿತಕ್ಕೆ ಆಗ್ರಹಿಸಿ ನವೆಂಬರ್‌ 15ರಿಂದ ಲಾರಿ ಮುಷ್ಕರ

ದಿನದಿಂದ ದಿನಕ್ಕೆ ಕಚ್ಚಾ ತೈಲಗಳ ಬೆಲೆ ಗಗನಕ್ಕೇರುತ್ತಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದಾಗಿ ಜನ ಸಾಮಾನ್ಯರು ಭಯ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ತೈಲ ಬೆಲೆ ಏರಿಕೆಯಿಂದ ಲಾರಿ ಮಾಲೀಕರಿಗೆ ಮತ್ತು ಚಾಲಕರಿಗೆ ದೊಡ್ಡ ನಷ್ಟವನ್ನುಂಟು ಮಾಡುತ್ತಿದೆ. ಹೀಗಾಗಿ ತೈಲ ಬೆಲೆಯನ್ನು ಕಡಿಮೆ ಮಾಡಲು ಒತ್ತಾಯಿಸಬೇಕೆಂದು ಸ್ಟೇಟ್ ಲಾರಿ ಓನರ್ಸ್ ಅಸೋಸಿಯೇಷನ್ ಸರ್ಕಾರಕ್ಕೆ ಮನವಿ ಮಾಡಿದ್ದು, ತೈಲ ಬೆಲೆಯನ್ನು ಕಡಿಮೆ ಮಾಡದಿದ್ದರೆ ಮುಷ್ಕರ ಮಾಡುವ ಕುರಿತು ಸರ್ಕಾರಕ್ಕೆ ಪರೋಕ್ಷ ಎಚ್ಚರಿಕೆ ನೀಡಿದೆ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಜನ ಸಾಮಾನ್ಯರ ಕೈಯಿಂದ ದೂರ ಸರಿಯುತ್ತಿದೆ. ಈಗಾಗಲೇ ಶತಕ ದಾಟಿ ಪೆಟ್ರೋಲ್ ಡೀಸೆಲ್ ಬೆಲೆ ಮುನ್ನುಗ್ಗುತ್ತಿದೆ. ಹೀಗಾಗಿ ಈ ತೈಲ ಬೆಲೆ ಏರಿಕೆ ಖಂಡಿಸಿ ಇದೀಗ ರಾಜ್ಯದ ದೊಡ್ಡ ಉದ್ಯಮವಾದ ಲಾರಿ ವ್ಯವಹಾರ ಕ್ಷೇತ್ರ ಅಖಾಡಕ್ಕೆ ಇಳಿದಿದೆ. ಈ ಹಿನ್ನೆಲೆ ಇಂದು ಚಾಮರಾಜಪೇಟೆಯ  ಖಾಸಗಿ ಹೋಟೆಲ್ ಒಂದರಲ್ಲಿ  ಸ್ಟೇಟ್ ಲಾರಿ ಅಸೋಷಿಯೇಶನ್ ಸಮಾಲೋಚನಾ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಇಲ್ಲಿ ರಾಜ್ಯದ ಹಲವು ಲಾರಿ ವ್ಯವಹಾರ ನಡೆಸುವ ಉದ್ಯಮಿಗಳು ಪಾಲ್ಗೊಂಡು ಸರ್ಕಾರಕ್ಕೆ ಮೊದಲ ಹಂತದ ಎಚ್ಚರಿಕೆಯನ್ನು ನೀಡಲು ನಿರ್ಧರಿಸಿದ್ದಾರೆ. ಅಂದರೆ, ನವೆಂಬರ್ 5ರವರೆಗೆ ತೈಲ ಬೆಲೆ ಇಳಿಸಲು ಗಡುವು ನೀಡಿದೆ, ಸರ್ಕಾರ ಜಗ್ಗದಿದ್ದರೆ ನವೆಂಬರ್ 15ರಿಂದ ಪೂರ್ಣಾವಧಿಯ ಮುಷ್ಕರಕ್ಕೆ ಇಳಿಯಲು ನಿರ್ಧರಿಸಲಾಗಿದೆ.

10 ರೂ. ತೆರಿಗೆ ಕಡಿತಕ್ಕೆ ಲಾರಿ ಮಾಲೀಕ ಚಾಲಕರ ಆಗ್ರಹ!

ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ, ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ರು. ಜನಸಾಮಾನ್ಯರು ಜೀವನ ನಡೆಸುವುದೇ ಕಷ್ಟ. ಅದರಲ್ಲೂ ಡೀಸೆಲ್  ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸರ್ಕಾರ ಒಂದು  ಲೀಟರ್  ಡೀಸೆಲ್ ಮೇಲೆ  10 ರೂ ತೆರಿಗೆ ಕಡಿಮೆ ಮಾಡಬೇಕು. ಜನವರಿ ಕೊನೆ ತನಕ ಪರ್ಮಿಟ್ ಕೊಡಬೇಕು. ಲಾರಿ ಡ್ರೈವರ್‌ಗಳಿಗೆ ಲೋಡಿಂಗ್ ಅನ್ ಲೋಡಿಂಗ್ ನಲ್ಲಿ ಸಾಕಷ್ಟು ಸಮಸ್ಯೆ ಆಗುತ್ತಿದೆ. ಆರ್.ಟಿ.ಒ ಹಾಗೂ ಪೊಲೀಸ್ ಕಿರುಕುಳ ಹೆಚ್ಚಾಗ್ತಾ ಇದೆ ಅಂತ ಅಸಮಾಧನ ವ್ಯಕ್ತಪಡಿಸಿದ್ದಾರೆ. 

ನವೆಂಬರ್ 5 ವರೆಗೆ ಗಡುವು ನವೆಂಬರ್ 15ರಿಂದ ಪೂರ್ಣಾವಧಿ ಮುಷ್ಕರ!

ಈಗಾಗಲೇ ಕೊರೋನಾ ಹೊಡೆತದಿಂದ ಎಲ್ಲಾ ಕ್ಷೇತ್ರದಂತೆ ಲಾರಿ ಉದ್ಯಮ ಕ್ಷೇತ್ರ ಕೂಡ ವಿಲವಿಲ ಒದ್ದಾಡಿದೆ. ಈಗಲೂ ಅದರಿಂದ ಚೇತರಿಸಿಕೊಳ್ಳಲಾಗದೆ ಉದ್ಯಮಗಳು ಸಾಲ ಶೂಲ ಮಾಡಿ ಉದ್ಯಮ ನಡೆಸುವುಂಥಾ ಸ್ಥಿತಿ ಇಲ್ಲಿ ನಿರ್ಮಾಣವಾಗಿದೆ. ಹೀಗಾಗಿ ಹಲವು ಕ್ಷೇತ್ರಗಳಂತೆ ಲಾರಿ ಕ್ಷೇತ್ರವೂ ಇದೀಗ ತೈಲ ಬೆಲೆ ಏರಿಕೆ ವಿರುದ್ಧದ ಸಮರಕ್ಕೆ ಕಣಕ್ಕಿಳಿಯುತ್ತಿದೆ. ಸದ್ಯ ತೈಲ ಬೆಲೆಯಿಂದ 10 ರೂಪಾಯಿ ತೆರಿಗೆ ಕಡಿತಕ್ಕೆ ಆಗ್ರಹಿಸಿ ಸರ್ಕಾರಕ್ಕೆ ನವೆಂಬರ್ 5ರ ಗಡುವು ನೀಡಿದೆ. ಅದರೊಳಗೆ ಸರ್ಕಾರ ಬಗ್ಗಿಲ್ಲವಾದರೆ ಲಾರಿ ಉದ್ಯಮಿಗಳು ಸಂಪೂರ್ಣವಾಗಿ ಮುಷ್ಕರಕ್ಕೆ ಇಳಿಯಲು ನಿರ್ಧರಿಸಿದ್ದಾರೆ. ಒಂದು ವೇಳೆ ಲಾರಿ ಕ್ಷೇತ್ರವೂ ಸಂಪೂರ್ಣವಾಧಿ ಮುಷ್ಕರ ಕೈಗೊಂಡರೆ ಜನರ ದಿನ ಬಳಕೆಯ ವಸ್ತುಗಳಿಗೆ ಹಾಗೂ ಇನ್ನಿತರ ವಸ್ತುಗಳಿಗೆ ಪರದಾಡುವ ಸ್ಥಿತಿ ಇಲ್ಲಿ ನಿರ್ಮಾಣವಾಗಲಿದೆ.

Exit mobile version