ಕೊಪ್ಪಳ ಅ 7: ಬಿಜೆಪಿ ಅತ್ಯಂತ ಕೆಟ್ಟ ಪಕ್ಷವಾಗಿದೆ. ಬಿಜೆಪಿ ತೊಲಗುವವರೆಗೆ ದೇಶಕ್ಕೆ ಭವಿಷ್ಯವಿಲ್ಲ ಬಿಜೆಪಿ ಮುಖಂಡರು ಯಾರಾದರೂ ಸತ್ತರೆ ಅವರಿಗೆ ಕಾಂಗ್ರೆಸ್ನಿಂದ 1 ಕೋಟಿ ರು. ಪರಿಹಾರ ನೀಡುವುದಾಗಿ ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ್ ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ರೈತರ ಮೇಲೆ ನಡೆದ ಹಿಂಸಾಚಾರ ಖಂಡಿಸಿ ಕಾಂಗ್ರೆಸ್ನಿಂದ ಮಂಗಳವಾರ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಪಂಜಿನ ಮೆರವಣಿಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು . ಉತ್ತರ ಪ್ರದೇಶದಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಕೇಂದ್ರ ಸಚಿವರ ಪುತ್ರ ಉದ್ದೇಶಪೂರ್ವಕವಾಗಿ ಕಾರು ಚಲಾಯಿಸಿ 8 ಜನರ ಸಾವಿಗೆ ಕಾರಣವಾಗಿದ್ದಾನೆ. ಇದನ್ನು ಖಂಡಿಸಿ ದೇಶದ ಎಲ್ಲ ವಿರೋಧ ಪಕ್ಷಗಳು ಹೋರಾಟ ಮಾಡುತ್ತಿವೆ. ರೈತರ ಸಾವಿಗೆ ಕೇಂದ್ರ ಸರ್ಕಾರ 45 ಲಕ್ಷ ರೂ. ಬೆಲೆ ಕಟ್ಟುತ್ತಿದೆ. ಬಿಜೆಪಿಯವರು ಸತ್ತರೆ ಕಾಂಗ್ರೆಸ್ ಒಂದು ಕೋಟಿ ರೂ. ಪರಿಹಾರ ಕೊಡಲು ಸಿದ್ಧವಿದೆ ಎಂದು ಹೇಳಿದರು.
ಬಿಜೆಪಿ ಅತ್ಯಂತ ಕೆಟ್ಟ ಸರ್ಕಾರವೆಂದು ನಿರೂಪಿಸಿದೆ. ಚಳಿ, ಹಿಮ, ಮಳೆ ಲೆಕ್ಕಿಸದೇ ಹರ್ಯಾಣ, ಪಂಜಾಬ್, ಛತ್ತೀಸಗಢ ರೈತರ ಪ್ರತಿಭಟನೆ ನಡೆಯುತ್ತಿದೆ ಈ ರೈತರ ಪ್ರತಿಭಟನೆಯಲ್ಲಿ ಕೇಂದ್ರ ಗೃಹಖಾತೆ ರಾಜ್ಯ ಸಚಿವರ ಪುತ್ರನ ಕಾರು ರೈತನ ಮೇಲೆ ಹರಿದು, ಎಂಟು ಜನ ರೈತರ ಹತ್ಯೆಗೆ ಕಾರಣರಾಗಿದ್ದಾರೆ ಎಂದು ಶಾಸಕ ಅಮರೇಗೌಡ ಪಾಟೀಲ ಕಿಡಿಕಾರಿದ್ದಾರೆ.
ಉತ್ತರ ಪ್ರದೇಶ, ಹರಿಯಾಣ ಹಾಗೂ ಚಂಡಿಗಡದ ರೈತರು ನ್ಯಾಯಸಮ್ಮತ ಬೇಡಿಕೆಗಳ ಈಡೇರಿಕೆಗೆ ಸುಮಾರು 11 ತಿಂಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತ ಪರ ಸರ್ಕಾರ ಎಂದು ಹೇಳಿಕೊಳ್ಳುವ ಬಿಜೆಪಿಯ ಯಾವ ನಾಯಕರೂ ಪ್ರತಿಭಟನೆಗೆ ಸ್ಪಂದಿಸುತ್ತಿಲ್ಲ ಎಂದು ದೂರಿದರು.