ಉಕ್ರೇನ್(Ukraine) ಮೇಲೆ ಭೀಕರ ದಾಳಿ ಮಾಡಿ ನೂರಾರು ಜನರ ಸಾವಿಗೆ ಕಾರಣನಾಗಿರುವ ರಷ್ಯಾ(Russia) ಅಧ್ಯಕ್ಷ(President) ಪುಟಿನ್ಗೂ(Putin), ಧರ್ಮದ ಹೆಸರಿನಲ್ಲಿ ಜನರ ಮನಸ್ಸನ್ನು ಕಲುಷಿತಗೊಳಿಸುತ್ತಿರುವ ಭಾರತದ ಪ್ರಧಾನಿ(President) ನರೇಂದ್ರ ಮೋದಿಗೂ(Narendra Modi) ಯಾವುದೇ ವ್ಯತ್ಯಾಸ ಇಲ್ಲ ಎಂದು ಕಾಂಗ್ರೆಸ್ ನಾಯಕ ಕಿಮ್ಮನೆ ರತ್ನಾಕರ(Kimmane Rathnakar) ಪ್ರಧಾನಿ ಮೋದಿಯನ್ನು ಟೀಕಿಸಿದ್ದಾರೆ.
ತೀರ್ಥಹಳ್ಳಿಯ ಕಾಂಗ್ರೆಸ್ ಕಚೇರಿಯಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯ ಅನೇಕ ನಾಯಕರು ಉಪ ಜಾತಿಗಳ ಹಕ್ಕಿಗಾಗಿ ಬೇಡಿಕೆ ಇಡುತ್ತಿದ್ದಾರೆ. ಈ ಸಂದರ್ಭದಲ್ಲಿ ‘ಹಿಂದೂ ನಾವೆಲ್ಲಾ ಒಂದು’ ಎಂಬ ಮಾತಿಗೆ ಯಾವುದೇ ಬೆಲೆಯಿಲ್ಲ. ಹಿಂದೂ ಧಾರ್ಮಿಕ ಪ್ರಚೋಚನೆಗೂ ಬೆಲೆಯಿಲ್ಲ. ಇನ್ನೂ ಮಹಾತ್ಮ ಗಾಂಧಿಯವರು ಒಕ್ಕೂಟ ಭಾರತವನ್ನು ನಮಗಾಗಿ ನೀಡಿದ್ದರು. ಇಂದು ಧರ್ಮದ ಅಮಲು ಹೆಚ್ಚಾಗುತ್ತಿರುವುದರಿಂದ ಭಾರತ ಒಕ್ಕೂಟವೂ 20 ಛಿದ್ರವಾಗಲಿದೆ ಎಂದು ಎಚ್ಚರಿಸಿದರು.
ಇನ್ನು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜನೋಪಯೋಗಿ ಯೋಜನೆಗಳನ್ನು ಜಾರಿಗೊಳಿಸದೇ, ಧರ್ಮದ ಆಧಾರದ ಮೇಲೆ ಕಳೆದ ಎಂಟು ವರ್ಷಗಳಿಂದ ಅಧಿಕಾರ ನಡೆಸುತ್ತಿದೆ. ಬೆಲೆ ಏರಿಕೆ, ನಿರುದ್ಯೋಗ ಮತ್ತು ಬಡತನದಿಂದ ಜನಸಾಮಾನ್ಯರು ಬಳಸುತ್ತಿದ್ದಾರೆ. ಇದ್ಯಾವುದಕ್ಕೂ ಪರಿಹಾರ ನೀಡದ ಮೋದಿ ಸರ್ಕಾರ, ಆರ್ಟಿಕಲ್ 370, ತ್ರಿವಳಿ ತಲಾಖ್, ಬಾಬರಿ ಮಸೀದಿ, ದತ್ತಪೀಠ, ಹಿಜಾಬ್ ಹೀಗೆ ಧರ್ಮ ಪ್ರಚೋದನೆಯ ವಿಷಯಗಳ ಆಧಾರದ ಮೇಲೆ ಅಧಿಕಾರ ನಡೆಸುತ್ತಿದೆ.
ಸರ್ಕಾರವನ್ನು ಪ್ರಶ್ನಿಸಬೇಕಿದ್ದ ಮಾದ್ಯಮಗಳು ಬಿಜೆಪಿ ನಾಯಕರ ಕೈಯಲ್ಲಿವೆ. ಸುದ್ದಿಗಳು ಪಕ್ಷ ಕೇಂದ್ರಿತವಾಗಿ ಪ್ರಸಾರವಾಗುತ್ತಿವೆ. ಇನ್ನೊಂದೆಡೆ ಬಿಜೆಪಿಯಲ್ಲಿ ಆಂತರಿಕ ಸ್ವಾತಂತ್ರ್ಯವಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಒಬ್ಬ ತಪ್ಪು ಮಾಡಿದರೆ 50 ಜನ ಅವನ ವಿರುದ್ದ ನಿಲ್ಲುತ್ತಾರೆ. ಆದರೆ ಬಿಜೆಪಿಯಲ್ಲಿ ಅದಕ್ಕೆ ತದ್ವಿರುದ್ದ ಪರಿಸ್ಥಿತಿ ಇದೆ. ಹೀಗಾಗಿ ಆಂತರಿಕ ಸ್ವಾತಂತ್ರ್ಯ ಕಳೆದುಕೊಂಡವರು ಮಾತ್ರ ಬಿಜೆಪಿಯಲ್ಲಿ ಬದುಕುತ್ತಾರೆ ಎಂದು ಕಿಮ್ಮನೆ ರತ್ನಾಕರ ಟೀಕಿಸಿದರು.