‘ಮೂರು ಕೋತಿ, ನೂರಾರು ಜನ’ ; ವಿಶಿಷ್ಟ ಜಾಗೃತಿ ಅಭಿಯಾನ

ಬೆಂಗಳೂರು, ಡಿ.15: ಸಿಲಿಕಾನ್ ಸಿಟಿ ಇಡೀ ವಿಶ್ವದ ಗಮನಕೇಂದ್ರೀಕರಿಸಿರುವುದಂತೂ ಸತ್ಯ. ಭಾರತದಲ್ಲಿ ಐಟಿ-ಬಿಟಿ ಕ್ರಾಂತಿಗೆ ಮುನ್ನುಡಿ ಬರೆದಿರುವುದು ಇದೇ ಉದ್ಯಾನ ನಗರಿಯಿಂದ. ಆದರೆ ಪ್ರಸಕ್ತ ಪರಿಸ್ಥಿತಿ ನೋಡಿದರೆ ಅಧ್ವಾನದ ನಗರಿಯಾಗಿ ಪರಿವರ್ತಿತವಾಗಿದೆ.

ಇದಕ್ಕೆ ಕಾರಣವೇನು? ಪರಿಸ್ಥಿತಿ ಹೀಗಾಗಲು ಜನಪ್ರತಿನಿಧಿಗಳು ಎಡವಿದ್ದೆಲ್ಲಿ ಎಂಬುದನ್ನು ಸಾರ್ವಜನಿಕರ ಗಮನೆಳೆಯಲು ಮೂರು ಗಾಂಧಿ ಕೋತಿಗಳು ಬೆಂಗಳೂರಿನ ಬೀದಿಗಿಳಿದಿವೆ.

ಏನಿದು ಗಾಂಧಿ ಕೋತಿ?

ರಾಜಧಾನಿ ಬೆಂಗಳೂರು ದೇಶದ ಪ್ರಮುಖ ಮೆಟ್ರೋ ನಗರಗಳಲ್ಲಿ ಒಂದು. ಆದರೆ ಅಭಿವೃಧ್ದಿ ಕಾಮಗಾರಿಯ ಹೆಸರಲ್ಲಿ ಇಡೀ ವ್ಯವಸ್ಥೆಯು ಜನರ ಸಹನೆಯನ್ನು ಪ್ರಶ್ನಿಸುವಂತಿದೆ. ಜನರ ನಿದ್ದೆಗೆಡಿಸುವ ಈ ಪರಿಸ್ಥಿತಿಯನ್ನು ಅಣಕಿಸುವ ರೀತಿಯಲ್ಲಿತ್ತು ಗಾಂಧಿ ಕೋತಿಗಳ ಪ್ರದರ್ಶನ ವೈಖರಿ.

‘ಕೆಟ್ಟದ್ದನ್ನು ನೋಡಲಾರೆ, ಕೆಟ್ಟದ್ದನ್ನು ಹೇಳಲಾರೆ, ಕೆಟ್ಟದ್ದನ್ನು ಕೇಳಲಾರೆ’ ಎಂದು ಮೂರು ಕೋತಿಗಳ ಫಲಕದೊಂದಿಗೆ ಬೆಂಗಳೂರಿನ ಪ್ರಮುಖ ಸ್ಥಳಗಳಲ್ಲಿ ಅಣಕು ಪ್ರದರ್ಶನ ಮೂಲಕ ಸಾರ್ವಜನಿರಲ್ಲಿ ಪರಿಸರ ಹಾಗೂ ವ್ಯವಸ್ಥೆಯ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ನಡೆಯಿತು.  ‘ನಮೋ ಸಮಾಜ್’ನ ವರಿಷ್ಠ ಸಾಮಾಜಿಕ ಹೋರಾಟಗಾರ ಜಿ.ಆರ್.ಅನಿಲ್ ಕುಮಾರ್  ಮುಂದಾಳುತ್ವದಲ್ಲಿ ಸೀತಾ ಸರ್ಕಲ್, ಗಿರಿನಗರ ಬಿಬಿಎಂಪಿ ಕಚೇರಿ ಮುಂಬಾಗ, ರಾಮಕೃಷ್ಣಾಶ್ರಮ ಸರ್ಕಲ್, ವಿದ್ಯಾಪೀಠ ಸರ್ಕಲ್ ಸಹಿತ ಹಲವೆಡೆ ಈ ಕೋತಿ ಪ್ರದರ್ಶನ ಸಾರ್ವಜನಿಕರ ಚಿತ್ತ ಸೆಳೆಯುವಲ್ಲಿ ಯಶಸ್ವಿಯಾಯಿತು.

ಮೂರು ಕೋತಿ; ನೂರಾರು ಜನ..!!

ಪ್ರದರ್ಶನದಂಗಳದಲ್ಲಿ ಮೂರು ಕೋತಿಗಳು ಪರಿಸ್ಥಿತಿಯನ್ನು ಅಣಕಿಸಿದರೆ, ಆ ಪ್ರದೇಶದಲ್ಲಿ ಜಮಾಯಿಸಿದ್ದ ನೂರಾರು ಮಂದಿ ಕೂಡಾ ಮೂಕ ಪ್ರೇಕ್ಷಕರಾಗಿ ಸನ್ನಿವೇಶವನ್ನು ಗಮನಿಸುತ್ತಿದ್ದರು. ಹಲವರು ಈ ಸನ್ನಿವೇಶವನ್ನು ತಮ್ಮ ಮೊಬೈಲ್‌’ನಲ್ಲಿ ಚಿತ್ರೀಕರಿಸುತ್ತಿದ್ದ ದೃಶ್ಯಗಳೂ ಪರಿಸ್ಥಿತಿಗೆ ಹಿಡಿದ ಕನ್ನಡಿಯಂತಿತ್ತು.

ಈ ಅಣಕು ಪ್ರದರ್ಶನದ ಸಾರಥ್ಯ ವಹಿಸಿದ್ದ ಜಿ.ಆರ್.ಅನಿಲ್ ಕುಮಾರ್ ಪ್ರತಿಕ್ರಿಯೆ ನೀಡಿ, ಸಮಾಜದ ಬಗೆಗಿನ ಸಾರ್ವಜನಿಕ ಅಸಡ್ಡೆಯ ವಿಡಂಬನಾತ್ಮಕ ಪ್ರದರ್ಶನ ಇದಾಗಿದೆ. ನಮ್ಮ ಈ ಜಾಗೃತಿ ಪ್ರದರ್ಶನಕ್ಕೆ ಪ್ರಜ್ಞಾವಂತರಿಂದ ಬೆಂಬಲ ವ್ಯಕ್ತವಾಗಿದೆ ಎಂದರು. ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣಕ್ಕೆ ಮುನ್ನುಡಿ ಬರೆಯಲಾಗಿದ್ದು, ‘ನಮೋ ಸಮಾಜ್’ ಮುಂದಾಳುತ್ವದಲ್ಲಿ ಈ ಅಭಿಯಾನ ನಿರಂತರ ಸಾಗಲಿದೆ ಎಂದವರು ತಿಳಿಸಿದರು.

Exit mobile version