ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಬಳಿಕ ಖಾತೆ ಹಂಚಿಕೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದ ಸಚಿವ ಎಂಟಿಬಿ ನಾಗರಾಜ್, ನನಗೆ ಹೊಸಕೋಟೆ ಕ್ಷೇತ್ರದ ಉಸ್ತುವಾರಿ ಕೊಡಿ ಎಂದು ಬೇಡಿಕೆಯಿಟ್ಟಿಲ್ಲ, ಆದರೆ ಗ್ರಾಮಾಂತರ ಉಸ್ತುವರಾರಿ ಕೊಟ್ಟರೆ ನಾನು ನಿಭಾಯಿಸುತ್ತೇನೆ ಎಂದಿದ್ದಾರೆ.
ವಿಧಾನ ಸೌಧದಲ್ಲಿ ತಮ್ಮ ನೂತನ ಕಚೇರಿಯ ಪೂಜಾ ಸಮಾರಂಭದಲ್ಲಿ ಪಾಲ್ಗೊಂಡ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಈ ಖಾತೆ ಬೇಕೆಂದು ಎಂದು ಮುಖ್ಯಮಂತ್ರಿಯೊಂದಿಗೆ ಕೇಳಿಲ್ಲ, ಆದರೆ ಮುಂದೆ ಈ ಬಗ್ಗೆ ಮುಖ್ಯಮಂತ್ರಿ ತೀರ್ಮಾನ ಮಾಡುತ್ತಾರೆ ಎಂದರು.
ಇನ್ನು ಸಚಿವರ ಖಾತೆ ಹಂಚಿಕೆಯಲ್ಲಿ ವಿಶ್ವನಾಥ್ ಅವರಿಗೆ ಸ್ವಲ್ಪ ಬೇಸರವಿದೆ, ಇಂತಹ ಸಂದರ್ಭದಲ್ಲಿ ಬೇಸರ ಆಗುವುದು ಸಹಜ. ಆದರೆ ಮುಂದಿನ ದಿನಗಳಲ್ಲಿ ಅದೆಲ್ಲವೂ ಸರಿಯಾಗಲಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಎಲ್ಲಾ ಸರಿಪಡಿಸುತ್ತಾರೆ ಎಂಬ ವಿಶ್ಚಾಸವಿದೆ ಎಂದು ಹೇಳಿದ್ದಾರೆ.
ಎಂಟಿಬಿ ನಾಗರಾಜ್ ಅವರು ಖಾತೆ ಬದಲಾವಣೆಯಾದ ಬಳಿಕ ಇಂದು ಕಚೇರಿ ಪೂಜೆ ನಡೆಸಿದ್ದು, ಪೂಜೆಯಲ್ಲಿ ಎಂಟಿಬಿ ನಾಗರಾಜ್ ಕುಟುಂಬ ಭಾಗಿಯಾಗಿದ್ದರು.