ಮೈಸೂರು, ಫೆ. 12: ಕಲೆ ಎಂಬುದು ಒಬ್ಬರ ಸ್ವತ್ತಲ್ಲ. ಕಲ್ಪನಾ ಲೋಕದ ಬಣ್ಣ ಬಣ್ಣದ ಕಲ್ಪನೆಗಳಿಗೆ ರೂಪ ನೀಡುವ ಕಲೆಯು, ಆಸಕ್ತರ ಸೃಜನಶೀಲತೆಯ ಮೂಸೆಯಲ್ಲಿ ಅರಳುವ ಸುಂದರವಾದ ಹೂವು. ಅಂತಹ ವಿಶೇಷವಾದ ಕಲೆಯಲ್ಲಿ ತನ್ನೊಳಗೆ ಅಡಗಿದ್ದ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸಿ ರಾಷ್ಟ್ರ ಮಟ್ಟದ ದೃಶ್ಯ ಕಲೋತ್ಸವದಲ್ಲಿ ಮೈಸೂರು ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಚಂದನಾ, ಪ್ರಶಸ್ತಿ ಪಡೆದಿದ್ದಾರೆ.
ಶಿಕ್ಷಣ ಕ್ಷೇತ್ರದಲ್ಲಿ ಕಲೆ, ಸಂಶೋಧನೆಗಳನ್ನು ಬೆಂಬಲಿಸುವ ಮತ್ತು ಪ್ರೋತ್ಸಾಹಿಸುವ ಭಾರತ ಸರ್ಕಾರದ ಸಂಸ್ಥೆಯಾದ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತು (ಎನ್.ಸಿ.ಇ.ಆರ್.ಟಿ) ವತಿಯಿಂದ ಬೆಂಗಳೂರಿನ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯಲ್ಲಿ ಜನವರಿ 15 ಮತ್ತು 16 ರಂದು ಎರಡು ದಿನಗಳ ರಾಷ್ಟ್ರಮಟ್ಟದ ದೃಶ್ಯಕಲೋತ್ಸವ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಕೋವಿಡ್-19 ವಿಶ್ವವ್ಯಾಪಿ ಹರಡುತ್ತಿರುವ ಕಾರಣ ಈ ಬಾರಿಯ ಸ್ಪರ್ಧೆಯು ಆನ್ಲೈನ್ ಮುಖಾಂತರ ವರ್ಚುವಲ್ ಆಗಿ ನಡೆಯಿತು. ಈ ಸ್ಪರ್ಧೆಯಲ್ಲಿ ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ 36 ರಾಜ್ಯಗಳಿಂದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅದರಲ್ಲಿ ಎಚ್.ಡಿ.ಕೋಟೆ ತಾಲ್ಲೂಕಿನ ಜಿ.ಬಿ.ಸರಗೂರು ಸರ್ಕಾರಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಚಂದನಾ ಎ. ಭಾಗವಹಿಸಿ, ವ್ಯರ್ಥ ವಸ್ತುಗಳನ್ನು ಬಳಸಿಕೊಂಡು ಬೊಂಬೆ, ಆಟಿಕೆ ತಯಾರಿಸುವ ಮೂಲಕ ರಾಷ್ಟ್ರಮಟ್ಟದಲ್ಲಿ ದ್ವಿತೀಯ ಸ್ಥಾನಗಳಿಸಿ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ನಮ್ಮ ಸುತ್ತ ಪ್ರಕೃತಿದತ್ತವಾಗಿ ದೊರಕುವ ಉಪಯೋಗಕ್ಕೆ ಬಾರದ ಅನೇಕ ವಸ್ತುಗಳನ್ನು ನಾವು ತ್ಯಾಜ್ಯಗಳೆಂದೆ ಪರಿಗಣಿಸುತ್ತೇವೆ. ಆದರೆ ಅವುಗಳನ್ನೆ ಬಳಸಿಕೊಂಡು ಅದಕ್ಕೊಂದು ಜೀವ ನೀಡಿದ ವಿದ್ಯಾರ್ಥಿನಿ ಚಂದನಾ, ಕಹಿಸೋರೆಯನ್ನು ಬಳಸಿಕೊಂಡು ಬೊಂಬೆ ಹಾಗೂ ಆಟಿಕೆ ತಯಾರಿಸುತ್ತಿದ್ದ ಪರಿಗೆ ದೆಹಲಿಯಿಂದ ವೀಕ್ಷಿಸುತ್ತಿದ್ದ ತೀರ್ಪುಗಾರರು ಆಶ್ಚರ್ಯ ಸೂಚಿಸಿದ್ದಾರೆ. ಅಚಲವಾದ ಪ್ರಯತ್ನ, ಪ್ರತಿಭೆಯಿಂದ ಈ ಕಲಾವಿದ್ಯಾರ್ಥಿಯ ಕುಂಚದಲ್ಲಿ ಅರಳಿದ ಕಲಾಕೃತಿಗಳು ಕಲಾಪ್ರಿಯರ ಮೆಚ್ಚುಗೆಗೆ ಪಾತ್ರವಾಗಿವೆ.
ವಿಶ್ವದಾದ್ಯಂತ ಚೆನ್ನಪಟ್ಟಣ ಬೊಂಬೆಗಳು ಪ್ರಸಿದ್ಧಿ ಪಡೆದಿವೆ. ಸಾಮಾನ್ಯವಾಗಿ ಚೆನ್ನಪಟ್ಟಣದಲ್ಲಿ ಬೊಂಬೆಗಳು ಹಾಗೂ ಆಟಿಕೆಗಳನ್ನು ಮರದಿಂದ ತಯಾರಿಸಲಾಗುತ್ತದೆ. ಆದರೆ ಈ ವಿದ್ಯಾರ್ಥಿನಿಯು ತನ್ನ ಮನೆಯ ಸುತ್ತಲೂ ಸಂಗ್ರಹಿಸಿದ ಸೋರೆಕಾಯಿಗಳಿಂದ ತಯಾರಿಸಿದ ಬೊಂಬೆಗಳು, ಆಟಿಕೆಗಳು ವಿಶೇಷ ಆಕರ್ಷಣೆಗೆ ಪಾತ್ರವಾಗಿವೆ.
ಈ ವಿದ್ಯಾರ್ಥಿನಿಯು ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಆರು ವಿಧವಾದ ಆಟಿಕೆ ತಯಾರಿಸಿದ್ದು, ಎಲ್ಲಾ ಬೊಂಬೆಗಳಿಗೆ ಸೋರೆಕಾಯನ್ನೇ ಬಳಕೆ ಮಾಡಲಾಗಿದೆ. ಅಜ್ಜ, ಅಜ್ಜಿ, ಬ್ಯಾಲೆನ್ಸಿಂಗ್ ಡಾಲ್, ಕೋಳಿ, ಗೂಬೆ, ಜಿರಾಫೆಯಂತಹ ಆಟಿಕೆಯನ್ನು ಸೋರೆಕಾಯಿಂದ ವಿನ್ಯಾಸಗೊಳಿಸಿ ಆಕರ್ಷಕ ಬೊಂಬೆಯಾಗಿ ಜೀವ ತುಂಬಲಾಗಿದೆ.
ಈ ಆರು ಬೊಂಬೆಗಳು ವಿದ್ಯಾರ್ಥಿನಿ ಚಂದನಾ ಅವರ ಪ್ರಶಸ್ತಿಗೆ ಕಾರಣವಾಗಿದ್ದು, 20 ಸಾವಿರ ನಗದು ಬಹುಮಾನ, ಒಂದು ಮೇಡಲ್ ಹಾಗೂ ಟ್ರೋಫಿಯನ್ನು ತಂದು ಕೊಟ್ಟಿವೆ. ಬೊಂಬೆ ತಯಾರಿಸುವ ಎಲ್ಲಾ ವಿಧಾನವನ್ನು ಸೂಕ್ಷ್ಮವಾಗಿ ಪರಿಶೀಲಸಿ, ಪ್ರತಿಯೊಂದಕ್ಕೂ ವಿವರಣೆ ಪಡೆದು ಪ್ರಶಸ್ತಿಯನ್ನು ನೀಡಲಾಗಿದೆ.
ತಮಗೆ ಪ್ರಶಸ್ತಿ ಲಭಿಸಿದ ಬಗ್ಗೆ ಮಾತನಾಡಿದ ವಿದ್ಯಾರ್ಥಿನಿ
ಚಂದನಾ, ನಾನು ತಯಾರಿಸುವ ಬೊಂಬೆಗಳ ಹಾಗೂ ಆಟಿಕೆಗಳು ಪರಿಸರ ಸ್ನೇಹಿ ಮತ್ತು ಮರುಬಳಕೆ ಉತ್ಪನ್ನ ಆಗಿರುವುದರ ಜೊತೆಗೆ, ಇದು ನನ್ನನ್ನು ಸ್ವಾವಲಂಬಿಯನ್ನಾಗಿ ಮಾಡಿದೆ. ಇಂತಹ ವಿಶಿಷ್ಟವಾದ ಮತ್ತು ಸ್ಥಳೀಯ ಕಲಾ ಪ್ರಕಾರಗಳು ಅಳಿದು ಹೋಗದಂತೆ ಉತ್ತೇಜಿಸಲು ಮತ್ತು ಸಂರಕ್ಷಿಸಲು ಪ್ರಯತ್ನಿಸಿದ್ದೇನೆ. ನನಗೆ ಮಾರ್ಗದರ್ಶನ ನೀಡಿದ ನಮ್ಮ ಶಿಕ್ಷಕಿ ಸಂಗೀತಾ ಕೆ. ಹಾಗೂ ಪ್ರೋತ್ಸಾಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ ಎಂದರು.