Wayanad (Kerala): ಕೇರಳದ (Kerala) ವಯನಾಡು ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಹಾಗೂ ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ ಅವರ ನಾಮಪತ್ರ ಸಲ್ಲಿಕೆ ರ್ಯಾಲಿಯ ವೇಳೆ ಮಿತ್ರಪಕ್ಷ ಮುಸ್ಲಿಂ ಲೀಗ್ ಪಕ್ಷ ಧ್ವಜಗಳು ಮಾಯವಾಗಿರುವ ವಿಚಾರ ಇದೀಗ ಎಲ್ಲೆಡೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ರಾಹುಲ್ ಗಾಂಧಿ ನಾಮಪತ್ರ ಸಲ್ಲಿಸಲು ಭರ್ಜರಿ ರ್ಯಾಲಿಯನ್ನು ವಯನಾಡಿನಲ್ಲಿ ಆಯೋಜಿಸಿದ್ದರು. ಆದರೆ ಈ ವೇಳೆ ಕಾಂಗ್ರೆಸ್ ಪಕ್ಷದ ಧ್ವಜ ಹಾಗೂ ಮಿತ್ರ ಪಕ್ಷ ಮುಸ್ಲಿಂ ಲೀಗ್ (Muslim League) ಪಕ್ಷದ ಧ್ವಜಗಳೇ ಇಲ್ಲದಿರುವುದು ಅಚ್ಚರಿ ಮೂಡಿಸಿದೆ.
ಮೂಲಗಳ ಪ್ರಕಾರ, ಕಳೆದ ವರ್ಷ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಕೆ ವೇಳೆ ಮುಸ್ಲಿಂ ಲೀಗ್ ಪಕ್ಷದ ಧ್ವಜವನ್ನು ಪಾಕಿಸ್ತಾನದ (Pakistan) ರಾಷ್ಟ್ರೀಯ ಧ್ವಜ ಎಂದು ಸುದ್ದಿ ಮಾಡಲಾಗಿತ್ತು. ಈ ವಿಚಾರ ರಾಷ್ಟ್ರೀಯ ಮಟ್ಟದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಈ ಬಾರಿಯೂ ಇದೇ ರೀತಿಯ ಸನ್ನಿವೇಷ ನಿರ್ಮಾಣವಾಗುವ ಸಾಧ್ಯತೆ ಇರುವುದರಿಂದ, ಮಂಜಾಗ್ರತೆ ವಹಿಸಿರುವ ಕಾಂಗ್ರೆಸ್, ರಾಹುಲ್ ಗಾಂಧಿ ಅವರ ರ್ಯಾಲಿಯ ವೇಳೆ ಮುಸ್ಲಿಂ ಲೀಗ್ ಪಕ್ಷದ ಧ್ವಜಗಳನ್ನು ಬಳಸದಂತೆ ಸೂಚನೆ ನೀಡಿತ್ತು.
ಇದರಿಂದ ಅಸಮಾದಾನಗೊಂಡ ಮುಸ್ಲಿಂ ಲೀಗ್, ನಮ್ಮ ಧ್ವಜಗಳನ್ನು ಬಳಸಬಾರದು ಎಂದಾದರೇ, ನೀವು ಕೂಡಾ ನಿಮ್ಮ ಧ್ವಜಗಳನ್ನು ಬಳಸಬಾರದು ಎಂದು ಷರತ್ತು ಹಾಕಿದ ಹಿನ್ನಲೆ, ರಾಹುಲ್ ನಾಮಪತ್ರ ವೇಳೆ ಎರಡು ಪಕ್ಷಗಳ ಧ್ವಜಗಳು ಮಾಯವಾಗಿದ್ದವು. ಕೇವಲ ರಾಹುಲ್ ಗಾಂಧಿ (Rahul Gandhi) ಅವರ ಹೆಸರಿರುವ ಫ್ಲೆಕ್ಸ್ಗಳನ್ನು ಹಿಡಿದು, ಎರಡು ಪಕ್ಷಗಳ ಕಾರ್ಯಕರ್ತರು ಮೆರವಣಿಗೆ ನಡೆಸಿದರು.
ರಾಹುಲ್ ಗಾಂಧಿ ಅವರ ಈ ನಡೆಯನ್ನು ಟೀಕಿಸಿರುವ ಕೇರಳ ಸಿಎಂ ಪಿಣರಾಯಿ ವಿಜಯನ್ (CM Pinarayi Vijayan), ಕಾಂಗ್ರೆಸ್ ಪಕ್ಷಕ್ಕೆ ಮುಸ್ಲಿಂ ಮತಗಳು ಬೇಕು, ಆದರೆ ಅವರ ಧ್ವಜ ಬೇಡವಾಗಿದೆ. ಇದು ಅವರ ಮನಸ್ಥಿತಿಯನ್ನು ತೋರಿಸುತ್ತದೆ. ಕಳೆದ ಬಾರಿ ಉಂಟಾಗಿರುವ ವಿವಾದದಿಂದ ರಾಹುಲ್ ಗಾಂಧಿ ವಿಚಲಿತರಾಗಿದ್ದಾರೆ ಎಂದಿದ್ದಾರೆ. ಇನ್ನು ಬಿಜೆಪಿ ನಾಯಕಿ ಸ್ಮೃತಿ ಇರಾನಿ, ರಾಹುಲ್ ಗಾಂಧಿ ಉತ್ತರ ಭಾರತದಲ್ಲಿ ದೇವಸ್ಥಾನಗಳನ್ನು ಸುತ್ತುತ್ತಾರೆ.
ಆದರೆ ಕೇರಳದಲ್ಲಿ ಮುಸ್ಲಿಂ ಲೀಗ್ನೊಂದಿಗೆ ಮೈತ್ರಿ ಮಾಡಿಕೊಳ್ಳುವ ಮೂಲಕ ಪಿಎಫ್ಐನಂತರ (PFI) ಕೋಮುವಾದಿ ಸಂಘಟನೆಗಳ ಬೆಂಬಲಕ್ಕೆ ನಿಲ್ಲುತ್ತಾರೆ. ಜನರಿಂದ ಮುಸ್ಲಿಂನೊಂದಿಗೆ ಮಾಡಿಕೊಂಡಿರುವ ಮೈತ್ರಿ ಮುಚ್ಚಿಡಲು ರಾಹುಲ್ ಗಾಂಧಿ ಅವರು, ಮುಸ್ಲಿಂ ಲೀಗ್ ಪಕ್ಷದ ಧ್ವಜಗಳನ್ನೇ ದೂರವಿಟ್ಟಿದ್ದಾರೆ ಎಂದು ಟೀಕಿಸಿದ್ದಾರೆ.