ಆಪರೇಷನ್ ಕಮಲದ ಬಗ್ಗೆ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸಲಿ: ಸಿದ್ದರಾಮಯ್ಯ

ಬೆಂಗಳೂರು, ಜ. 16: ಆಪರೇಷನ್ ಕಮಲಕ್ಕೆ ಯೋಗೀಶ್ವರ್ ಕೋಟ್ಯಂತರ ರೂಪಾಯಿ ಸಾಲ ಮಾಡಿದ್ದಾರೆ ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳುವ ಮೂಲಕ ಈ ವರೆಗಿನ ನಮ್ಮ ಆರೋಪಕ್ಕೆ ಪುರಾವೆ ಒದಗಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆಪರೇಷನ್ ಕಮಲದ ಬಗ್ಗೆ ಹೈಕೋರ್ಟ್ ನ ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಿ ಸತ್ಯ ಸಂಗತಿಯನ್ನು ಬಹಿರಂಗಪಡಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಫಲಾಪೇಕ್ಷೆ ಇಲ್ಲದೆ ನಮ್ಮ ಶಾಸಕರು ಬಿಜೆಪಿ ಸೇರಿದ್ದರೆ ಯೋಗೀಶ್ವರ್ 9 ಕೋಟಿ ರೂಪಾಯಿ ಸಾಲ ಮಾಡುವ ಅಗತ್ಯವೇನಿತ್ತು? ಈ ಆರೋಪವನ್ನು ನಾವು ಮಾಡಿದ್ದರೆ ವಿರೋಧ ಪಕ್ಷಗಳು ಸುಳ್ಳು ಹೇಳುತ್ತಿವೆ ಎಂದು ನಿರಾಕರಿಸಬಹುದಿತ್ತು. ಅವರದ್ದೇ ಪಕ್ಷದ ಸಚಿವರು ಹೇಳಿದ್ದಾರಲ್ಲಾ. ಇದಕ್ಕೆ ಏನನ್ನುತ್ತಾರೆ?

ರಾಜ್ಯದಲ್ಲಿ ಸರ್ಕಾರವೇ ಜೀವಂತವಾಗಿಲ್ಲ, ಇನ್ನು ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ಮಾಡುವುದರಿಂದ ಜನರ ಮೇಲೆ ಯಾವ ಪರಿಣಾಮ ಬೀರಲು ಸಾಧ್ಯ? ಬಿಜೆಪಿಯಲ್ಲಿ ಒಳಜಗಳ, ಭ್ರಷ್ಟಾಚಾರ, ಅತೃಪ್ತಿ ತಾಂಡವವಾಡುತ್ತಿದೆ, ಹೀಗಿರುವಾಗ ಅಭಿವೃದ್ಧಿ ಕೆಲಸಗಳು ದೂರದ ಮಾತು.

ಸರ್ಕಾರದಿಂದ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಪಡೆಯುವುದು ಪ್ರತಿಯೊಬ್ಬ ಶಾಸಕನ ಹಕ್ಕಾಗಿರುವಾಗ ಬ್ಲಾಕ್‌ಮೇಲ್ ಮಾಡುವ ಅಗತ್ಯವೇನಿದೆ? ಜಮೀರ್ ಅಹ್ಮದ್ ಅವರು ಅನುದಾನ ನೀಡಿ ಮಾಡಿ ಅಂತ ಮನವಿ ಮಾಡಿದ್ದಾರೆ, ಅದಕ್ಕೆ ಮುಖ್ಯಮಂತ್ರಿಗಳು ಆರ್ಥಿಕ ಇಲಾಖೆಗೆ ಶಿಫಾರಸು ಮಾಡಿದ್ದಾರೆ. ಆದೇಶಕ್ಕೂ, ಶಿಫಾರಸಿಗೂ ವ್ಯತ್ಯಾಸವಿದೆ.

ಚಾಮರಾಜಪೇಟೆ ಕ್ಷೇತ್ರಕ್ಕೆ ನಮ್ಮ ಪಕ್ಷದ ಶಾಸಕ ಜಮೀರ್ ಅಹಮದ್ ಅವರು ಕೇಳಿದಷ್ಟು ಮುಖ್ಯಮಂತ್ರಿಗಳು ಅನುದಾನ ನೀಡಿದ್ದರೆ ಬಸನಗೌಡ ಪಾಟೀಲ್ ಯತ್ನಾಳ್ ಮಾತಿಗೆ ಅರ್ಥವಿರುತ್ತಿತ್ತು. ಮಂತ್ರಿಗಿರಿ ಕೈತಪ್ಪಿದ್ದರಿಂದ ಹತಾಶರಾಗಿ ಆಡಿರುವ ಮಾತುಗಳಿಗೆ ಹೆಚ್ಚು ಮಹತ್ವ ನೀಡುವ ಅಗತ್ಯವಿಲ್ಲ.

ಕೃಷಿಗೆ ಮಾರಕವಾದ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲಿಸಿ ಕಾಂಗ್ರೆಸ್ ಪಕ್ಷ ನಿನ್ನೆ ದೇಶಾದ್ಯಂತ ಪ್ರತಿಭಟನೆ ನಡೆಸಿತ್ತು. ಸಂಕ್ರಾಂತಿ ಹಬ್ಬದ ಕಾರಣಕ್ಕೆ ನಾವು ನಿನ್ನೆ ಪ್ರತಿಭಟನೆ ಮಾಡಿಲ್ಲ, ಈ ತಿಂಗಳ 20ನೇ ತಾರೀಖಿನಂದು ಪಕ್ಷದ ವತಿಯಿಂದ “ರಾಜಭವನ ಚಲೋ” ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ.

Exit mobile version